ಧಾರವಾಡ: ನಾನೇನೂ ರಾಜಕೀಯ ಜ್ಯೋತಿಷಿ ಅಲ್ಲ ಒಮ್ಮೊಮ್ಮೆ ಏನು ಅನಿಸುತ್ತದೆ ಅದನ್ನು ವ್ಯಾಖ್ಯಾನ ಮಾಡುತ್ತೇನೆ ಅಷ್ಟೇ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸದ್ಯ ಪಂಚರಾಜ್ಯ ಚುನಾವಣೆ ನಡೆದಿದೆ. ಸ್ವಲ್ಪ ಹೆಚ್ಚು ಕಡಿಮೆ ಆಗಲಿದೆ. ಒಟ್ಟಾರೆ ಒಳ್ಳೆ ದಿನಗಳು ಬರಲಿವೆ. ನಾನಂತೂ ಪಕ್ಷದಲ್ಲಿ ಯಾವುದೇ ಅಪೇಕ್ಷೇ ಮಾಡಿಲ್ಲ. ಆದರೂ ನಮ್ಮನ್ನೂ ಸೇರಿಯೇ ಒಳ್ಳೆ ದಿನ ಬರಲಿದೆ. ಕಾಕತಾಳೀಯ ಎಂಬಂತೆ ನಾನು ಹೇಳಿದ್ದು ನಿಜವಾಗುತ್ತಿದೆ. ನಾನೇನು ರಾಜಕೀಯ ಜ್ಯೋತಿಷಿ ಅಲ್ಲ. ಒಮ್ಮೊಮ್ಮೆ ಏನು ಅನಿಸುತ್ತದೆ ಅದನ್ನು ವ್ಯಾಖ್ಯಾನ ಮಾಡುತ್ತೇನೆ ಅಷ್ಟೇ ಎಂದರು. ಇದನ್ನೂ ಓದಿ: ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ್ ನಿಧನ
ಯತ್ನಾಳರಿಗೆ ಸಿಎಂ ಸ್ಥಾನದ ಬಗ್ಗೆ ಸ್ವಾಮೀಜಿಗಳ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನನ್ನಷ್ಟು ಯೋಗ್ಯತೆ, ಅರ್ಹತೆ ಬಿಜೆಪಿಯಲ್ಲಿ ಯಾರಿಗಿದೆ. ನಾನು ವಾಜಪೇಯಿ ಆಡಳಿತದಲ್ಲಿ ಮಂತ್ರಿ ಆಗಿದ್ದೆ. ಸಚಿವ ಸಂಪುಟದಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡಿದ್ದಾಗಿ ಅಟಲ್ಜೀ ಹಸ್ತಾಕ್ಷರದಿಂದ ಪತ್ರ ಪಡೆದಿದ್ದೇನೆ. ಆದರೆ ದುರ್ದೈವ ಅಂದರೆ ರಾಜಕಾರಣದಲ್ಲಿ ನೇರ ಮಾತನಾಡಬಾರದು ಚಮಚಾಗಿರಿ ಮಾಡಬೇಕು, ಅದನ್ನು ನಾನು ಮಾಡೋದಿಲ್ಲ. ನಾನೂ ಇನ್ನೊಬ್ಬರ ಕಾಲು ಹಿಡಿದು, ಭೋಗದ ವಸ್ತು ಕೊಡುವವನು ಅಲ್ಲ. ಅದಕ್ಕೆ ಹಿಂದೆ ಉಳಿದಿದ್ದೇನೆ. ನಾನು ಓರ್ವ ಸಾಮಾನ್ಯ ಕಾರ್ಯಕರ್ತರ ಸಂಬಂಧ, ಸಾಮಾಜಿಕ ನ್ಯಾಯಕ್ಕಾಗಿ ಗುಡುಗಿದ್ದೇನೆ. ಮಂತ್ರಿ, ಸಿಎಂ ಮಾಡಿ ಅಂತಾ ನಾನು ಗುಡುಗಿಲ್ಲ ಎಂದರು.
ಸಿ.ಟಿ ರವಿ ಮೊನ್ನೆ ಒಂದು ಹೇಳಿಕೆ ಕೊಟ್ಟಿದ್ದು, 2023ರಲ್ಲಿ ಯಾರ ನೇತೃತ್ವ ಅಂತಾ ಹೈಕಮಾಂಡ್ ಹೇಳುತ್ತೆ ಅಂದಿದ್ದಾರೆ. ಏನೇ ನಿರ್ಣಯ ಮಾಡಿದ್ದಲ್ಲಿ ಅದಕ್ಕೆ ನಾವು ಬದ್ಧನಾಗಿರುತ್ತೇನೆ. ಯಾವ ಯಾವುದೋ ಅನಿವಾರ್ಯಗಳು ಇರಬಹುದು. 2023ಕ್ಕೆ ಹೊಸ ಶಕ್ತಿಯೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಅಫ್ಘಾನಿಸ್ತಾನಕ್ಕೆ ಭಾರತದ ನೆರವು – ಇರಾನ್ ಸಹಾಯ
ಬೆಳಗಾವಿ ಅಧಿವೇಶದಲ್ಲಿ ಉತ್ತರ ಕರ್ನಾಟಕ ನಿರ್ಲಕ್ಷ್ಯ ವಿಚಾರವಾಗಿ ಮಾತನಾಡಿ, ಬೆಳಗಾವಿ ಅಧಿವೇಶನದಲ್ಲಿ ಕೊನೆಗೆ ಎರಡೇ ದಿನ ನನಗೆ ಮಾತನಾಡಲಿಕ್ಕೆ ಕೊಟ್ಟಿದ್ದಾರೆ. ಮುಂದಿನ ಅಧಿವೇಶನದಲ್ಲಿ ಮೊದಲೇ ನಾಲ್ಕು ದಿನ ಕೊಡಬೇಕು, ಉತ್ತರ ಕರ್ನಾಟಕಕ್ಕೆ ಮೊದಲೇ ಸಮಯ ಕೊಡುವಂತೆ ಸಭಾಪತಿಯವರಿಗೆ ಕೇಳಿದ್ದೇನೆ. ಉದ್ದೇಶಪೂರ್ವಕವಾಗಿ ಕಾಂಗ್ರೆಸ್ ಸದನದ ಸಮಯ ಹಾಳು ಮಾಡಿದೆ. ಉತ್ತರ ಕರ್ನಾಟಕದ ಚರ್ಚೆಯಾಗದಂತೆ ಕಾಂಗ್ರೆಸ್ ಮಾಡಿದೆ. ಸಿದ್ದರಾಮಯ್ಯ ಎಂಟೆಂಟು ತಾಸು ಮಾತನಾಡುತ್ತಾರೆ. ಅವರ ಶಾಸಕರಿಗೂ ಅವರು ಮಾತನಾಡಲಿಕ್ಕೆ ಅವಕಾಶ ಕೊಡುವದಿಲ್ಲ. ಹಾಡಿದ್ದು ಹಾಡೋ ಕಿಸಬಾಯಿದಾಸ ಅಂತಾರಲ್ಲ ಹಾಗೇ ಸಿದ್ದರಾಮಯ್ಯ ಹೇಳಿದ್ದೇ ಹೇಳುತ್ತಾರೆ ಎಂದು ವ್ಯಂಗ್ಯ ವಾಡಿದರು.
ಕೈ ನಾಯಕರು ಅದೇ ಟಿಪ್ಪು ಸುಲ್ತಾನ್ ವರ್ಣನೆ ಮಾಡುತ್ತಾರೆ. ಅದು ಬಿಟ್ಟರೇ ಬೇರೆ ಗೊತ್ತಿಲ್ಲ. ಟಿಪ್ಪು ಸುಲ್ತಾನ್ ವರ್ಣನೆಯಿಂದಲೇ ಕಾಂಗ್ರೆಸ್ ಹಾಳಾಗುತ್ತಿದೆ. ಮೇಕೆದಾಟು ಪಾದಯಾತ್ರೆಯಿಂದಲೂ ಇವರ ಬಣ್ಣ ಬಯಲಾಗುತ್ತಿದ್ದು, ನಿನ್ನೆ ರಾತ್ರಿಯಿಂದ ಬಣ್ಣ ಬಯಲಾಗುತ್ತಿದೆ ಎಂದರು.