ವಿಜಯಪುರ: ಅಟ್ಟಹಾಸ ಮೆರೆಯುತ್ತಿರೋ ಪಾಕಿಸ್ತಾನದವರಿಗೆ ಬೈಯ್ಯದೆ ಇನ್ನೇನು ಲಂಡನ್, ರಷ್ಯಾದವರಿಗೆ ಬೈಯಲು ಆಗುತ್ತಾ ಎಂದು ಪ್ರಶ್ನಿಸಿ ಕಾಂಗ್ರೆಸ್ ವಕ್ತಾರ ಎಸ್.ಎಂ ಪಾಟೀಲ್ ಗಣಿಹಾರ್ ವಿರುದ್ಧ ಬಿಜೆಪಿ ಶಾಸಕ ಬಸನ ಗೌಡ ಪಾಟೀಲ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ಇವತ್ತು ವಿಜಯಪುರದಲ್ಲೂ ದೇಶದ್ರೋಹಿಗಳು ಇದ್ದಾರೆ. ಅವರ ಪ್ರಕಾರ ಪಾಕಿಸ್ತಾನಕ್ಕೆ ಬೈಯ್ಯಬಾರದು, ಮುಸ್ಲಿಮರಿಗೆ ಬೈಯಬಾರದು. ಈ ದೇಶದಲ್ಲಿ ಭಯೋತ್ಪಾದಕರು ಅಂತ ಇರೋದು ಯಾರು? ಹಿಂದೂಗಳು ಇದ್ದರಾ? ಪಾಕಿಸ್ತಾನದ ಮೂಲದವರೇ ಇದ್ದಾರೆ. ಅಟ್ಟಹಾಸ ಮಾಡುತ್ತಿರುವ ಪಾಕಿಸ್ತಾನದವರಿಗೆ ಬೈಯ್ಯದೆ ಇನ್ನೇನು ಲಂಡನ್, ರಷ್ಯಾದವರಿಗೆ ಬೈಯ್ಯಲು ಆಗುತ್ತಾ ಎಂದು ಪ್ರಶ್ನಿಸಿದರು.
ಇಬ್ಬರು ಉಗ್ರರ ಹತ್ಯೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಭಾರತೀಯ ಸೈನಿಕರು ಉಗ್ರರನ್ನು ನೇರವಾಗಿ ನರಕಕ್ಕೆ ಕಳುಹಿಸಿದ್ದಾರೆ. ಕಾಶ್ಮೀರದ ಸಮಸ್ಯೆಯನ್ನ ಬುಡದಿಂದ ತೆಗೆದು ಹಾಕಲು ಮೋದಿಯವರು ಮುಂದಾಗಬೇಕು. ಮೊದಲು ಕಾಶ್ಮೀರ ನೀಡಿರುವ ಕಾಲಂ 370 ಅನ್ನು ತೆಗೆದು ಹಾಕಬೇಕು. ಲೋಕಸಭೆ ಚುನಾವಣೆ ನಡೆಯಲಿ, ಬಿಡಲಿ ಅದು ಸದ್ಯ ಮುಖ್ಯವಲ್ಲ. ದೇಶ ಉಳಿಯುವುದು ಮುಖ್ಯ. ಆದರಿಂದ ವಿಶೇಷ ಲೋಕಸಭಾ ಅಧಿವೇಶನ ಕರೆದು 370 ಕಲಂ ಅನ್ನ ರದ್ದುಗೊಳಿಸಬೇಕು. ಅದಕ್ಕೆ ಯಾರು ವಿರೋಧ ಮಾಡುತ್ತಾರೋ ಅವರಿಗೆ ಜನರು ಸರಿಯಾಗಿ ಬುದ್ಧಿ ಕಲಿಸುತ್ತಾರೆ. ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
370 ಕಲಂ ಅನ್ನು ಸಂವಿಧಾನದಿಂದ ತೆಗೆಯುವುದು ವಾಜಪೇಯಿಯವರ ಆಸೆ ಕೂಡ ಆಗಿತ್ತು. ಲೋಕಸಭೆ ಚುನಾವಣೆ ಈಗ ಅವಶ್ಯಕತೆ ಇಲ್ಲ. ನಮಗೆ ಬೇಕಾಗಿದ್ದು ಶಾಂತಿ, ನಮ್ಮ ಹುತಾತ್ಮ ಸೈನಿಕರ ಪ್ರತೀಕಾರ. ಮೋದಿಯವರ ಸರ್ಕಾರ ಬಂದ ಮೇಲೆ ಪುಲ್ವಾಮ ಘಟನೆ ಬಿಟ್ಟರೆ ಮುಂಬೈ ಬ್ಲಾಸ್ಟ್, ಹೈದ್ರಾಬಾದ್ ಬ್ಲಾಸ್ಟ್ ಆಗಿಲ್ಲ. ಇಡೀ ಭಾರತದಲ್ಲಿ ಮೋದಿ ಸರ್ಕಾರ ಬಂದ ಮೇಲೆ ಶಾಂತಿ ನೆಲೆಸಿದೆ ಎಂದರು.
ಈ ರೀತಿಯಾಗಿ ಹೇಳಿಕೆ ನೀಡಿದ ಅಯೋಗ್ಯ ಗಣಿಹಾರ್ ಮೇಲೆ ಕ್ರಮ ತಗೆದುಕೊಳ್ಳಬೇಕು. ಗೃಹ ಮಂತ್ರಿಗಳು ನಿನ್ನೆ ಹೇಳಿದ್ದಾರೆ ನಾವು ಯಾರೇ ದೇಶದ್ರೋಹಿ ಹೇಳಿಕೆ ಕೊಟ್ಟರೂ ಬಿಡಲ್ಲ ಅಂತ. ಈಗ ನಿಮ್ಮ ಪಕ್ಷದವನೇ ಈ ರೀತಿ ದೇಶ ವಿರೋಧಿ ಹೇಳಿಕೆಯನ್ನು ಕೊಟ್ಟಿದ್ದಾನೆ. ಅವನ ವಿರುದ್ಧ ನಿಷ್ಪಕ್ಷಪಾತವಾದ ತನಿಖೆ ನಡೆಸಿ ಎಂದು ಗೃಹ ಸಚಿವರಿಗೆ ಯತ್ನಾಳ್ ಅವರು ಆಗ್ರಹಿಸಿದ್ದಾರೆ.
ಈ ವಿಚಾರವಾಗಿ ಪೊಲೀಸರಿಗೆ ಮುಕ್ತವಾದ ಅಧಿಕಾರ ನೀಡಬೇಕು. ಕರ್ನಾಟಕ ಗೃಹಮಂತ್ರಿಗಳು ಕೂಡ ಆ ಧೈರ್ಯ ಮಾಡಬೇಕು. ಯತ್ನಾಳ್ ವಿರುದ್ಧ ಕೇಸ್ ಹಾಕಿದರೆ ಏನು ಅಗಲ್ಲ. ಯತ್ನಾಳ್ಗೆ ಯಾರು ಏನು ಮಾಡಲು ಆಗಲ್ಲ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv