ವಿಜಯಪುರ: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪುಟಗೋಸಿ. ರಫೇಲ್ ಅಂದರೆ ಅವರಿಗೆ ಏನು ಗೊತ್ತು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿ ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೋದಿಯವರು ಎಲ್ಲವನ್ನು ತ್ಯಾಗ ಮಾಡಿದ್ದು, ಕೋಟಿಗಟ್ಟಲೆ ಹಣ ಇಟ್ಟುಕೊಂಡು ಅವರು ಏನು ಮಾಡುತ್ತಾರೆ. ಕಾಂಗ್ರೆಸ್ ಮೋದಿಯವರ ಬಗ್ಗೆ ಸುಮ್ಮನೆ ಅಪವಾದ ಹೊರೆಸುತ್ತಿದೆ ಎಂದು ಕಿಡಿಕಾರಿದರು.
ಬ್ರಿಟನ್ ರಾಣಿಯ ನಂತರ ಸೋನಿಯಾ ಗಾಂಧಿ ಪ್ರಪಂಚದ ಎರಡನೇಯ ಶ್ರೀಮಂತ ಮಹಿಳೆ ಎಂದ ಅವರು, ಸಮ್ಮಿಶ್ರ ಸರ್ಕಾರದ ವಿಧಾನಸೌಧದೊಳಗೆ ಭ್ರಷ್ಟಾಚಾರ ನಡೆಸುತ್ತಿದೆ. ಅಂಬಾನಿಗೆ ಸಹಾಯ ಮಾಡಿದವರು ಕಾಂಗ್ರೆಸ್ನವರು. ನೀರವ್ ಮೋದಿಗೆ, ಮಲ್ಯಗೆ ಸಾಲ ನೀಡಿದ್ದು ಕಾಂಗ್ರೆಸ್. ಆದರೆ ಆರೋಪ ಮಾಡುವುದು ಮಾತ್ರ ಬಿಜೆಪಿ ನಾಯಕರ ಮೇಲೆ ಎಂದು ಹರಿಹಾಯ್ದರು.
ಶೀಘ್ರವೇ ದಾವೂದ್ ಇಬ್ರಾಹಿಂನನ್ನು ಹಿಡಿದುಕೊಂಡು ಬರಲಾಗುತ್ತದೆ. ಐಟಿ ರೇಡ್ ಯಾವುದೇ ದ್ವೇಷದಿಂದ ಆಗುತ್ತಿಲ್ಲ. ಪಕ್ಷಾತೀತವಾಗಿ ರೇಡ್ ಆಗುತ್ತಿದೆ. ಮೋದಿ ಅವರು ಎಲ್ಲವನ್ನು ತ್ಯಾಗ ಮಾಡಿದ್ದಾರೆ. ಅಂಥವರು ಹಣ ಗಳಿಸಿ ಏನು ಮಾಡಬೇಕು. ಲೋಕಸಭಾ ಚುನಾವಣೆ ಮುನ್ನ ರಾಮಮಂದಿರ ನಿರ್ಮಾಣ ಆಗುತ್ತದೆ ಎನ್ನುವ ಭರವಸೆ ಇದೆ ಎಂದರು.
ಮಾಜಿ ಪ್ರಧಾನಿ ದೇವೇಗೌಡ ಅವರು ಭಸ್ಮಾಸುರ ಇದ್ದಂತೆ. ಅವರು ಕಾಂಗ್ರೆಸ್ ತಲೆ ಮೇಲೆ ಕೈ ಇಟ್ಟಿದ್ದಾರೆ. ದೇವೇಗೌಡರನ್ನು ಪ್ರಧಾನಿ ನರೇಂದ್ರ ಮೋದಿ ಯಾವುದೇ ಕಾರಣಕ್ಕೆ ನಂಬಬಾರದು. ದೇವೇಗೌಡರಿಗೆ ರಾತ್ರಿ ವೇಳೆ ನಾಯಕರನ್ನು ಭೇಟಿಯಾಗುವ ಚಾಳಿ ಇದೆ. ದೇವೇಗೌಡರ ಆಟ ಬಲ್ಲವರಾರು? ಈ ಬಗ್ಗೆ ಬಿಜೆಪಿ ಮುಖಂಡರು ಎಚ್ಚರಿಕೆ ವಹಿಸಬೇಕು ಎಂದರು.
ರಾಹುಲ್ ಗಾಂಧಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಇದು ಕಾಂಗ್ರೆಸ್ಸಿಗರಿಗೆ ಮನವರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜೆಡಿಎಸ್ಗೆ ಕಾಲಿಗೆ ಬೀಳುತ್ತಿದೆ ಎಂದು ಹೇಳಿ ವ್ಯಂಗ್ಯವಾಡಿದರು.
ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶದ ಕುರಿತು ರಾತ್ರಿ ವಿಚಾರಣೆ ನಡೆಸುವ ಸುಪ್ರೀಂ ಕೋರ್ಟ್ ರಾಮಮಂದಿರ ನಿರ್ಮಾಣದಲ್ಲಿ ಗಮನ ಹರಿಸುತ್ತಿಲ್ಲ. ಸುಪ್ರೀಂ ಕೋರ್ಟ್ ಬಗ್ಗೆ ಗೌರವವಿದೆ. ಆದರೆ ಜನಸಾಮಾನ್ಯನಾಗಿ ನಾನು ಸುಪ್ರೀಂ ಕೋರ್ಟ್ ನಡೆಯನ್ನು ಪ್ರಶ್ನೆ ಮಾಡುತ್ತೇನೆ ಬಸನಗೌಡ ಪಾಟೀಲ್ ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv