ಚಾಮರಾಜನಗರ: ಜಲನಯನ ಪ್ರದೇಶದಲ್ಲಿ ವರುಣನ ಆರ್ಭಟ ಹೆಚ್ಚಾದ ಪರಿಣಾಮ ಜಿಲ್ಲೆಯಲ್ಲಿ ನಯನ ಮನೋಹರವಾಗಿ, ಬಿರುಸು ಬಿರುಸಾಗಿ ರಭಸದಿಂದ ಭರಚುಕ್ಕಿ ಧುಮ್ಮಿಕ್ಕಿ ಹರಿಯುತ್ತಿದೆ.
ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಇದೀಗ ತನ್ನ ಸೌಂದರ್ಯವನ್ನು ಇಮ್ಮಡಿಗೊಳಿಸಿಕೊಂಡಿದೆ. ಕೊಡಗು, ಕೇರಳ, ಮೈಸೂರು, ಮಂಡ್ಯ, ಚಾಮರಾಜನಗರದ ಕೆಲ ಪ್ರದೇಶಗಳು ಜಲಾವೃತದಿಂದ ಕಂಗೆಟ್ಟಿದ್ದರೆ ಭರಚುಕ್ಕಿ ಮಾತ್ರ ಈ ಪ್ರವಾಹದ ನೀರಿನಿಂದ ತನ್ನ ಭೋರ್ಗರೆತದ ಮೂಲಕ ಸೌಂದರ್ಯದ ಒಡತಿಯಾಗಿ ಕಾಣುತ್ತಿದ್ದಾಳೆ.
ಕಾವೇರಿ ಧುಮ್ಮಿಕ್ಕುವ ಭರಚುಕ್ಕಿ ಜಲಪಾತದ ಸೊಬಗನ್ನು ನೋಡಿಯೇ ಅನುಭವಿಸಬೇಕು. ಇಲ್ಲಿನ ಪ್ರಕೃತಿಯ ಸೊಬಗಂತು ಅತ್ಯದ್ಭುತವಾಗಿದೆ. ಹಾಲ್ನೊರೆಯಂತೆ ಧುಮ್ಮಿಕ್ಕುವ ಕಾವೇರಿಯ ಐಸಿರಿ ನಯನಮನೋಹರವಾಗಿದ್ದು, ಈ ಜಲಪಾತ ನೋಡುಗರ ಕಣ್ಮನ ಸೆಳೆಯುತ್ತಿವೆ. ಈ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನ ಈಗ ಈ ಕಡೆಹರಿದು ಬರುತ್ತಿದ್ದಾರೆ.
ಸುತ್ತಲೂ ಇರುವ ಬೆಟ್ಟಸಾಲು, ಹಸಿರಿನಿಂದ ಕಂಗೊಳಿಸುವ ಅರಣ್ಯ, ಭರಚುಕ್ಕಿ ಜಲಪಾತದ ಸೊಬಗನ್ನು ಮತ್ತಷ್ಟು ಸುಂದರವಾಗಿಸಿದೆ. ಸುಮಾರು ನೂರು ಮೀಟರ್ ಆಳಕ್ಕೆ ಧುಮ್ಮಿಕ್ಕುವ ರಭಸ ಹಾಗು ಭೋರ್ಗರೆತ ಎಂತಹವರರನ್ನು ಬೆರಗೊಳಿಸುತ್ತದೆ ಎಂದು ಪ್ರವಾಸಿಗರು ಹೇಳಿದ್ದಾರೆ.
ಕರ್ನಾಟಕದ ಕೊಡಗು ಹಾಗೂ ನೆರೆ ರಾಜ್ಯ ಕೇರಳದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಬಹುತೇಕ ಮಂದಿ ತಮ್ಮ ನೆಲೆ ಕಳೆದುಕೊಂಡು ಎಲ್ಲವೂ ಇದ್ದ ಏನೂ ಇಲ್ಲದಂತೆ ಆಗಿದ್ದಾರೆ. ಇದಲ್ಲದೇ ಈ ಮಳೆಯಿಂದ ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಯ ಅನೇಕ ಗ್ರಾಮಗಳು ಮುಳುಗಡೆಯಾಗಿ ಹಲವು ಬೆಳೆಗಳು ನೀರಿನಲ್ಲಿ ಹಾನಿಯಾಗಿವೆ. ಆದರೆ ಈ ಎಲ್ಲಾ ಹಾನಿ ನೋವಿನ ನಂತರ ಪ್ರಕೃತಿ ತನ್ನ ಸೌಂದರ್ಯವನ್ನು ಚಿತ್ತಾರಗೊಳಿಸಿಕೊಳ್ಳುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv