– ಸಾಮಾಜಿಕ ಕಾರ್ಯಕರ್ತರಿಂದ ಬಿಬಿಎಂಪಿಗೆ ದೂರು
ಬೆಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿರ ಬೃಹತ್ ಪ್ರತಿಮೆ ಎದುರೇ ಬಾರ್ ಶಾಪ್ ಓಪನ್ ಆರಂಭವಾಗುತ್ತಿದ್ದು, ನಗರದ ಎಂ.ಜಿ.ರಸ್ತೆಯ ಜಂಕ್ಷನ್ ಬಳಿ ಮಹಾತ್ಮಗಾಂಧೀ ಉದ್ಯಾನವನವಿದೆ. ಈ ಉದ್ಯಾನವನದಲ್ಲಿ ಬೃಹತ್ ಗಾಂಧೀಜಿಯವರ ಪ್ರತಿಮೆ ಎದುರೇ ಟಾನಿಕ್ ಎನ್ನುವ ಹೆಸರಿನಲ್ಲಿ ಬೃಹತ್ ಬಾರ್ ಶಾಪ್ ಓಪನ್ ಆಗುತ್ತಿದೆ.
ಏಷ್ಯಾದ ಬಿಗ್ಗೆಸ್ಟ್ ಬಾರ್ ಟಾನಿಕ್ ಎಂದು ಹೇಳಲಾಗುತ್ತಿದ್ದು, ಈ ಬಾರಿನ 10 ಅಡಿ ದೂರದಲ್ಲಿ ಅತಿ ದೊಡ್ಡ ಚರ್ಚ್ ಮತ್ತು ಪೊಲೀಸ್ ಠಾಣೆ ಕೂಡ ಇದೆ. ಬಾರಿನಿಂದ 100 ಮೀಟರ್ ವ್ಯಾಪ್ತಿಯಲ್ಲಿ ದೇವಸ್ಥಾನ ಮತ್ತು ಮಹಾತ್ಮ ಗಾಂಧಿ ಪ್ರತಿಮೆ ಇದೆ. 100 ಮೀಟರ್ ಅಂತರದಲ್ಲೇ ದೇವಸ್ಥಾನ ಸೇರಿದಂತೆ ಗಾಂಧೀಜಿ ಪ್ರತಿಮೆ ಇದ್ದರೂ ಕೂಡ ಅಬಕಾರಿ ನಿಯಮಗಳ ಗಾಳಿಗೆ ತೂರಿ ಬಾರ್ ಶಾಪ್ ಓಪನ್ ಮಾಡಲಾಗುತ್ತಿದೆ.
ಗಾಂಧೀಜಿ ಪ್ರತಿಮೆ ಎದುರೇ ಬಾರ್ ತೆರೆಯುತ್ತಿರುವ ಬಗ್ಗೆ ಸಾಮಾಜಿಕ ಕಾರ್ಯಕರ್ತರು, ಚಿಂತಕರು ಸೋಶಿಯಲ್ ಮೀಡಿಯಾದಲಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಈ ಸಂಬಂಧ ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ಬಿಬಿಎಂಪಿ ಮತ್ತು ಆರ್.ಟಿ.ಓ ಇಲಾಖೆಗೂ ದೂರು ನೀಡಿದ್ದಾರೆ. ಟಾನಿಕ್ ಎಂಬ ಹೆಸರಿನಲ್ಲಿ ಓಪನ್ ಆಗುತ್ತಿರುವ ಈ ಬಾರ್ ನೀತಿ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಇದರ ಹಿಂದೆ ಕಾಣದ ಕೈವಾಡ ಇದೆ. ಹಲವಾರು ಜನ ವಿರೋಧ ಮಾಡಿದ್ದರೂ ಬಾರ್ ತೆರೆಯಲು ಮುಂದಾಗುತ್ತಿದ್ದಾರೆ. ಪರಿಣಾಮ ಈ ಬಗ್ಗೆ ಕೂಡಲೇ ಕ್ರಮ ಜರುಗಿಸಬೇಕೆಂದು ಸಾಮಾಜಿಕ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಹಲವಾರು ದಿನಗಳಿಂದ ಇದಕ್ಕೆ ವಿರೋಧ ವ್ಯಕ್ತವಾಗಿ ಎಷ್ಟು ದೂರು ಕೊಟ್ಟರು ಅಧಿಕಾರಿಗಳು ಮಾತ್ರ ಕ್ರಮ ಜರುಗಿಸುತ್ತಿಲ್ಲ. ಆದಷ್ಟು ಬೇಗ ಅಧಿಕಾರಿಗಳು ಇದರ ಬಗ್ಗೆ ಕ್ರಮ ಜರುಗಿಸಲಿಲ್ಲ ಅಂದರೆ ಪ್ರತಿಭಟನೆಗಳು, ಹೋರಾಟಗಳು ಹೆಚ್ಚಾಗುವ ಎಚ್ಚರಿಕೆ ನೀಡಲಾಗಿದೆ.