ವಿಜಯದಶಮಿ ವಿಶೇಷ| ನಾವು – ನೀವು ಬನ್ನಿ ತಗೊಂಡು ಬಂಗಾರದಂಗ ಇರೋಣ!

Public TV
2 Min Read
Banni Tree Auspicious during Dasara festival Banni Significance for Vijayadashami 1

ಭಾರತವು (India) ಸಂಸ್ಕೃತಿಗಳ ನಾಡು. ಇಲ್ಲಿ ಪ್ರತಿಯೊಂದು ಹಬ್ಬವನ್ನು ತುಂಬಾ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇಲ್ಲಿನ ಸಂಸ್ಕೃತಿಗೆ ಮಾರುಹೋಗದವರಿಲ್ಲ. ಆದ್ದರಿಂದ ಭಾರತವನ್ನು ಸಂಸ್ಕೃತಿಗಳ ತವರು ಎಂದು ಕರೆಯಲಾಗುತ್ತದೆ.

ವಿಜಯದಶಮಿ (Vijayadashami) ದಿನದಂದು ಬನ್ನಿ ಮರವನ್ನು ಶುಭದ ಸಂಕೇತವಾಗಿ ಪೂಜಿಸಲಾಗುತ್ತದೆ. ಬನ್ನಿ ಮರಕ್ಕೆ (Banni Tree) ವಿಶೇಷ ಸ್ಥಾನವನ್ನು ನೀಡಲಾಗಿದೆ. ಬನ್ನಿ ಮರವನ್ನು ಶಮೀ ವೃಕ್ಷ ಎಂದು ಮತ್ತು ಅದರ ಎಲೆಗಳನ್ನು ಗಟ್ಟಿ ಚಿನ್ನ ಎಂದು ಕರೆಯುವ ಪ್ರತೀತಿ ಇದೆ.

ಬನ್ನಿ ಮರಕ್ಕೆ ಉತ್ತರ ಕರ್ನಾಟಕದ (North Karnataka) ಭಾಗದಲ್ಲಿ ಪೂಜ್ಯನೀಯ ಸ್ಥಾನವನ್ನು ನೀಡಲಾಗಿದೆ. ವಿಜಯ ದಶಮಿಯಂದು ಸಂಜೆಯಾಗುತ್ತಿದ್ದಂತೆ ಬನ್ನಿ ಮರದ ಎಲೆಗಳನ್ನು ತಂದು ಪೂಜಿಸಲಾಗುತ್ತದೆ. ನಂತರ ಬನ್ನಿ ಮರದ ಎಲೆಗಳನ್ನು ಚಿನ್ನದ ಗಟ್ಟಿ ಎಂದು ಕೈಯಲ್ಲಿ ಹಿಡಿದು ಮನೆ-ಮನೆಗೆ ತೆರಳಿ ಗಟ್ಟಿಯನ್ನು ಪರಸ್ಪರ ಕೊಟ್ಟು- ತೆಗೆದುಕೊಂಡು ನಾವು ನೀವು ಬಂಗಾರದ ಹಾಗೆ ಇರೋಣ ಎಂದು ಶುಭಾಶಯಗಳನ್ನು ತಿಳಿಸುತ್ತಾರೆ. ಇದನ್ನೂ ಓದಿ: ಉತ್ತರ ಕರ್ನಾಟಕ ದಸರಾದ ಸಿಹಿ ‘ತರಗ’ ಮಾಡುವ ವಿಧಾನ

Banni Tree Auspicious during Dasara festival Banni Significance for Vijayadashami 2

ಶಮಿ ವೃಕ್ಷಕ್ಕೆ ಯಾಕೆ ಮಹತ್ವ
ದೇವತೆಗಳು ಅಮೃತಕ್ಕಾಗಿ ಸಮುದ್ರ ಮಂಥನ ಮಾಡಿದಾಗ ಶಮಿ ವೃಕ್ಷವು ಉದ್ಭವಾಯಿತು. ತ್ರೇತಾ ಯುಗದಲ್ಲಿ ರಾವಣನು ಸೀತೆಯನ್ನು ಅಪಹರಿಸಿ ಲಂಕೆಯಲ್ಲಿ ಇಟ್ಟಿರುತ್ತಾನೆ. ಸೀತೆಯನ್ನು ಕರೆತರಲು ರಾಮನು ಲಂಕೆಗೆ ಕಡೆ ಹೋಗುವಾಗ ಶಮಿ ವೃಕ್ಷಕ್ಕೆ ಪೂಜೆ ಮಾಡಿದ್ದ. ಆದ್ದರಿಂದಲೇ ರಾವಣನನ್ನು ಗೆದ್ದು ಸೀತೆಯನ್ನು ಕರೆತಂದನು ಎಂದುಕಥೆ ಹೇಳುತ್ತದೆ.

ಮಹಾಭಾರತದಲ್ಲಿ ಶಮಿ ವೃಕ್ಷದ ಬಗ್ಗೆ ಉಲ್ಲೇಖವಿದೆ. ಪಾಂಡವರು ವನವಾಸಕ್ಕೆ ಹೋಗುವಾಗ ತಮ್ಮ ಆಯುಧಗಳನ್ನು ಕಟ್ಟಿ ಶಮಿ ವೃಕ್ಷದ ಮೇಲೆ ಇಟ್ಟು ಹೋಗಿದ್ದರು. ಆಯುಧಗಳನ್ನು ರಕ್ಷಿಸಲು ಶಮಿ ವೃಕ್ಷವನ್ನು ಪೂಜಿಸಲಾಗಿತ್ತು ಎಂದು ಉಲ್ಲೇಖವಿದೆ. ಇದನ್ನೂ ಓದಿ: ದಸರಾ ವಿಶೇಷ: ದೇವಿಗೆ ಚಾಮುಂಡಿ, ರಕ್ತೇಶ್ವರಿ ಹೆಸರು ಬಂದಿದ್ದು ಹೇಗೆ?

ಶ್ರೀರಾಮನ ಪಟ್ಟಾಭಿಷೇಕ ನಡೆದ ದಿನದಂದು ಪಾಂಡವರು ವನವಾಸವನ್ನು ಮುಗಿಸಿದ ಪವಿತ್ರ ದಿನವೆಂದು ಕಥೆ, ಪುರಾಣಗಳಲ್ಲಿ ಹೇಳಲಾಗುತ್ತದೆ. ಅಜ್ಞಾತ ವಾಸ ಮುಗಿಸಿ ಬರುವಾಗ ಪಾಂಡವರು ಶಮಿ ವೃಕ್ಷಕ್ಕೆ ಪೂಜಿಸಿ ಆಯುಧಗಳು ಕೆಳಗಡೆ ಇಳಿಸಿದ್ದರು.

ವಿಜಯ ದಶಮಿಯಂದು ಪಾಂಡವರು ವನವಾಸ ಮುಗಿಸಿ ಕಾಡಿನಿಂದ ಭೂಮಿಗೆ ಮರಳಿದರು ಎಂದು ಉಲ್ಲೇಖಿತವಾಗಿದೆ. ಈ ಕಾರಣಕ್ಕೆ ಕೃಷಿಕರು ಮನೆಯಲ್ಲಿ ಆಯುಧಗಳನ್ನು ಪೂಜಿಸಿ ಬನ್ನಿ ಸಸಿಯನ್ನು ನೆಟ್ಟು ನಂತರ ಮುಡಿಯುವ ಪದ್ಧತಿ ಬಂದಿದೆ ಎಂದು ಹೇಳಲಾಗುತ್ತದೆ.

“ಕಲ್ಲು ಕಡಬು ಮಾಡಿ, ಮುಳ್ಳು ಸಾವಿಗೆ ಮಾಡಿ, ಬನ್ನಿಯ ಎಲಿಯಾಗಿ ಎಡೆಯ ಮಾಡಿ, ಪಾಂಡವರು ಉಂಡು ಹೋಗ್ಯಾರೋ ವನವಾಸ”  ಜನಪದ ಹಾಡು ಹೀಗೆ ಬನ್ನಿ ಎಲೆಯ ಮಹತ್ವವನ್ನು ವಿವರಿಸುತ್ತದೆ. ಅಂದು ಮಕ್ಕಳು ,ತಾಯಂದಿರಿಗೆ ಬನ್ನಿ ಮೂಡಿಸುವುದರ ಮೂಲಕ ಹಾಗೂ ಹೆಂಡತಿ ಗಂಡನಿಗೆ ಬನ್ನಿ ಮೂಡಿಸುವುದರ ಮೂಲಕ ಕೃತಜ್ಞತೆಗಳನ್ನು ತಿಳಿಸಲಾಗುತ್ತದೆ.

Share This Article