ಬೀದರ್: ಜಿಲ್ಲೆಯ ಚೊಂಡಿ ಗ್ರಾಮದ 70ಕ್ಕೂ ಹೆಚ್ಚು ರೈತರಿಗೆ ಸಾಲ ಮರುಪಾವತಿ ಮಾಡುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೋಟಿಸ್ ನೀಡಿದೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಿಎಂ ಆಗಿದ್ದ ಎಚ್ಡಿ ಕುಮಾರಸ್ವಾಮಿ ರೈತರ ಬೆಳೆ ಸಾಲ ಮನ್ನಾ ಘೋಷಿಸಿದ್ದರು. ಇದರಿಂದ ಸಾಲಮನ್ನಾ ಯೋಜನೆಗೆ ಒಳಪಟ್ಟ ರೈತರು ನಮ್ಮ ಬೆಳೆಸಾಲ ಮನ್ನಾ ಆಗಿದೆ ಅಂತಾ ಖುಷಿಯಾಗಿದ್ದರು. ಇದೀಗ ಸಾಲಮನ್ನಾ ಆಗಿದ್ದ ರೈತರಿಗೆ ನೋಟಿಸ್ ನೀಡಲಾಗಿದೆ. ಬೀದರ್ ತಾಲೂಕಿನ ಚೊಂಡಿ ಗ್ರಾಮದ 70ಕ್ಕೂ ಹೆಚ್ಚು ರೈತರಿಗೆ ಸಾಲ ಮರುಪಾವತಿಸುವಂತೆ ಎಸ್ಬಿಐ ಬ್ಯಾಂಕ್ ನೋಟಿಸ್ ನೀಡಿದೆ. ಆಗ ಸಾಲಮನ್ನಾ ಆಗಿದೆ ಅಂತಾ ಪತ್ರ ನೀಡಿದ್ದ ಬ್ಯಾಂಕ್ ಈಗ ಪುನಃ ಸಾಲ ಮರುಪಾವತಿಸಿ ಎಂದಿರೋದ್ದಕ್ಕೆ ರೈತರು ಆತಂಕಕ್ಕೀಡಾಗಿದ್ದಾರೆ.
ಸಾಲಮನ್ನಾ ಆಗದಿದ್ರೆ ನಮಗೆ ಆತ್ಮಹತ್ಯೆ ಮಾಡಿಕೊಳ್ಳೋದೇ ದಾರಿ ಅಂತಾ ರೈತರು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಚೊಂಡಿ ಗ್ರಾಮ ಅಲ್ಲದೇ ವಿಳಾಸ್ಪೂರ್, ಒನ್ನಿಕೇರಿ, ಕಪಲಾಪೂರ್, ಕೊಳ್ಳಾರ್ ಸೇರಿ ಬೀದರ್ನ ಹಲವು ಗ್ರಾಮಗಳ ರೈತರಿಗೆ ಬ್ಯಾಂಕ್ ನೋಟಿಸ್ ನೀಡಲಾಗಿದೆ.
ಕೆಲ ದಿನಗಳ ಹಿಂದೆ ಸಾಲ ಮರುಪಾವತಿ ಮಾಡಲಾಗದೇ ಮಲ್ಲಪ್ಪ ಮಾರುತಿ, ರಾಚಪ್ಪ ಶಂಕರ್ ರಾವ್ ಪಾಟೀಲ್ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಕುಮಾರಸ್ವಾಮಿ ಘೋಷಿಸಿದ್ದ ಸಾಲಮನ್ನಾ ಯೋಜನೆಗೆ ಬಿಜೆಪಿ ಸರ್ಕಾರ ನೋಟಿಸ್ ನೀಡುವ ಮೂಲಕ ರಾಜಕೀಯ ದ್ವೇಷ ಮಾಡಲಾಗುತ್ತಿದೆ ಎಂದು ಅಖಿಲ ಭಾರತ ಕಿಸಾನ್ಸಭಾ ಸದಸ್ಯ ನಜೀರ್ ಅಹಮದ್ ಆರೋಪಿಸಿದ್ದಾರೆ.