ಚಿಕ್ಕಮಗಳೂರು: ಏಳು ದಿನಗಳ ಒಳಗಾಗಿ ಸಾಲ ಮರುಪಾವತಿಸದಿದ್ದಲ್ಲಿ ನಿಮ್ಮ ವಿರುದ್ಧ ನ್ಯಾಯಾಲಯದಲ್ಲಿ ಕೇಸ್ ದಾಖಲಿಸುವುದಾಗಿ ಜಿಲ್ಲೆಯ ಕಡೂರು ತಾಲೂಕಿನ ಕಾವೇರಿ ಗ್ರಾಮೀಣ ಬ್ಯಾಂಕ್ ರೈತರಿಗೆ ನೋಟಿಸ್ ನೀಡಿದ್ದು, ರೈತರು ಕಂಗಾಲಾಗಿದ್ದಾರೆ.
ಕಡೂರಿನ ಟಿ.ಬಿ.ರಸ್ತೆ ನಿವಾಸಿ ಶಂಕರ್ ಎಂಬವರು 2016ರಲ್ಲಿ ಭೂ ಅಭಿವೃದ್ಧಿ ಉದ್ದೇಶದಿಂದ ಎರಡು ಲಕ್ಷ ಹಣ ಸಾಲ ಪಡೆದಿದ್ದರು. ಆದರೆ ಶಂಕರ್ ಸಾಲ ಮರುಪಾವತಿಸಿಲ್ಲ. ಈ ಬಗ್ಗೆ ಶಂಕರ್ ಅವರಿಗೆ ಬ್ಯಾಂಕ್ನವರು ಆಗಾಗ್ಗೆ ಸಾಲ ಮರುಪಾವತಿಸುವಂತೆ ನೋಟಿಸ್ ಕೂಡ ನೀಡಿದ್ದಾರೆ. ಆದರೆ ಕಾರಣಾಂತರಿಂದ ಶಂಕರ್ ಸಾಲ ಕಟ್ಟಿರಲಿಲ್ಲ. ಈಗ ಬ್ಯಾಂಕ್ನವರು ನೋಟಿಸ್ ಕಳಿಸಿದ್ದು, ಇನ್ನು ಏಳು ದಿನಗಳ ಒಳಗಾಗಿ ಸಾಲ ಹಾಗೂ ಬಡ್ಡಿ ಎಲ್ಲಾ ಸೇರಿ 3 ಲಕ್ಷದ 9 ಸಾವಿರ ಹಣ ಕಟ್ಟುವಂತೆ ನೋಟಿಸ್ ನೀಡಿದ್ದಾರೆ. ಕಟ್ಟದಿದ್ದಲ್ಲಿ ನಿಮ್ಮ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡುವುದಾಗಿ ಎಚ್ಚರಿಸಿದ್ದಾರೆ.
ಕಳೆದ 37 ದಿನಗಳಿಂದ ಕೊರೊನಾ ಆತಂಕದಲ್ಲಿ ದೇಶವೇ ಲಾಕ್ಡೌನ್ ಆಗಿ ಇಡೀ ದೇಶವೇ ಸ್ಥಬ್ಧವಾಗಿದೆ. ಆರ್ಥಿಕ ಚಟುವಟಿಕೆ ಹಾಗೂ ಕೃಷಿ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡಿದ್ದು, ಜನ ಹೊತ್ತಿನ ತುತ್ತಿಗೂ ಪರದಾಡುತ್ತಿದ್ದಾರೆ. ರೈತರ ಬೆಳೆಗೆ ಬೆಲೆ ಇಲ್ಲ. ಬೆಳೆಗಳನ್ನ ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿಸಲು ಸಾಧ್ಯವಾಗುತ್ತಿಲ್ಲ. ರೈತರು ದಿನದಿಂದ ದಿನಕ್ಕೆ ಕಂಗಾಲಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಬ್ಯಾಂಕ್ ನೋಟಿಸ್ ನೀಡಿರೋದು ರೈತರನ್ನ ಮತ್ತಷ್ಟು ಜರ್ಜರಿತರನ್ನಾಗಿಸಿದೆ.