ಧಾರವಾಡ: ಸಾಲ ನೀಡಲು ಹಿಂದೇಟು ಹಾಕಿದ ವರೂರು ಗ್ರಾಮದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್ ಮೇಲೆ ಇಬ್ಬರು ರೈತರು ಹಲ್ಲೆ ನಡೆಸಿದ್ದಾರೆ.
ಬಿಎಸ್ ಬಿರಾದರ್ ಎಂಬವರು ಹಲ್ಲೆಗೊಳಗಾದ ಬ್ಯಾಂಕ್ ಮ್ಯಾನೇಜರ್. ಕುರಡಕೇರಿ ಗ್ರಾಮದ ಮಲ್ಲಿಕಾರ್ಜುನಗೌಡ ಪಾಟೀಲ್ ಮತ್ತು ಹಡಪದ್ ಎಂಬವರು ಸಾಲ ನೀಡುವಂತೆ ಮನವಿ ಮಾಡಿದ್ದರು. ನಮ್ಮ ಮನವಿಗೆ ಸ್ಪಂದಿಸಿಲ್ಲ ಎಂದು ಆರೋಪಿಸಿ ಸೆಪ್ಟಂಬರ್ 26ರಂದು ಬಿರಾದರ್ ಜೊತೆ ಅಸಭ್ಯವಾಗಿ ವರ್ತಿಸಿ ಕೂಡಲೇ ಸಾಲ ನೀಡುವಂತೆ ಒತ್ತಾಯಿಸಿದ್ದಾರೆ.
ಬ್ಯಾಂಕಿನ ವೇಳೆ ಮುಗಿದಿದ್ದರಿಂದ ಬಿರಾದರ್ ಅವರು ನಾಳೆ ಬನ್ನಿ ಎಂದು ಹೇಳಿದ್ದಾರೆ. ಆಗ ಸಿಟ್ಟಾದ ರೈತರು ಮ್ಯಾನೇಜರ್ ಅವರನ್ನು ಎಳೆದಾಡಿ ಹಲ್ಲೆ ನಡೆಸಿದ್ದಾರೆ. ಈ ವೇಳೆ ಬ್ಯಾಂಕ್ನಲ್ಲಿದ್ದ ಸ್ಥಳೀಯರು ಜಗಳ ಬಗೆಹರಿಸಿ ಇಬ್ಬರೂ ರೈತರನ್ನು ಕಳುಹಿಸಿದ್ದಾರೆ.
ಹಲ್ಲೆಯ ದೃಶ್ಯಾವಳಿಗಳೆಲ್ಲಾ ಬ್ಯಾಂಕಿನ ಸಿಸಿಟಿವಿ ಯಲ್ಲಿ ಸೆರೆಯಾಗಿದೆ. ಈ ಸಂಬಂಧ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.