ಅಗರ್ತಲ: ಚಾಕೊಲೇಟ್ ಖರೀದಿಸಲು ಗಡಿ ದಾಟಿ ಭಾರತಕ್ಕೆ ಪ್ರವೇಶಿಸಿದ್ದ ಬಾಂಗ್ಲಾದೇಶದ ಹುಡುಗನನ್ನು ಬಂಧಿಸಲಾಗಿದೆ ಎಂದು ಗಡಿ ಭದ್ರತಾ ಪಡೆ (ಬಿಎಸ್ಎಫ್) ಶುಕ್ರವಾರ ತಿಳಿಸಿದೆ.
ಎರಡು ದೇಶಗಳ ನಡುವಿನ ಅಂತರಾಷ್ಟ್ರೀಯ ಗಡಿಯನ್ನು ಗುರುತಿಸುವ ಶಾಲ್ದಾ ನದಿಯ ಸಮೀಪವಿರುವ ಬಾಂಗ್ಲಾದೇಶದ ಹಳ್ಳಿಯೊಂದರ ನಿವಾಸಿ ಎಮಾನ್ ಹೊಸೈನ್ನನ್ನು ಬಿಎಸ್ಎಫ್ ಸಿಬ್ಬಂದಿ ಬಂಧಿಸಿದ್ದಾರೆ. ತ್ರಿಪುರಾದ ಸಿಪಾಹಿಜಾಲಾ ಜಿಲ್ಲೆಯಲ್ಲಿ ತನ್ನ ಅಚ್ಚುಮೆಚ್ಚಿನ ಭಾರತೀಯ ಚಾಕೊಲೇಟ್ ಖರೀದಿಸಲು ಆಗಾಗ ಈ ನದಿ ಮಾರ್ಗವಾಗಿ ಭಾರತಕ್ಕೆ ಬರುತ್ತಿದ್ದ. ಇದನ್ನೂ ಓದಿ: ಅಮರನಾಥ ಯಾತ್ರೆ – ಕೇಂದ್ರ ಗೃಹ ಇಲಾಖೆಯಿಂದ ಭದ್ರತಾ ಪರಿಶೀಲನೆ
ಆತ ಭಾರತದ ಕಲಾಂಚೌರಾ ಗ್ರಾಮದ ಅಂಗಡಿಯಿಂದ ಚಾಕೊಲೇಟ್ ಖರೀದಿಸಲು ಮುಳ್ಳುತಂತಿ ಬೇಲಿ ಬಳಿ ರಂಧ್ರವೊಂದನ್ನು ಮಾಡಿ ಅದರ ಮೂಲಕ ನುಸುಳುತ್ತಿದ್ದ. ಅದೇ ರಂಧ್ರದ ಮೂಲಕ ಮತ್ತೆ ತನ್ನ ಮನೆಗೆ ವಾಪಾಸ್ಸಾಗುತ್ತಿದ್ದ. ಸಾಹಸ ಕೃತ್ಯಕ್ಕೆ ಮುಂದಾಗಿದ್ದ ಆತನನ್ನು ಏ.13 ರಂದು ಬಿಎಸ್ಎಫ್ ಸಿಬ್ಬಂದಿ ಬಂಧಿಸಿದ್ದಾರೆ.
ಹುಡುಗನನ್ನು ಸ್ಥಳೀಯ ಪೊಲೀಸರಿಗೆ ಒಪ್ಪಿಸಲಾಗಿದ್ದು, ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆತನನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಸೋನಮುರ ಎಸ್ಡಿಪಿಒ ಬನೋಜ್ ಬಿಪ್ಲಬ್ ದಾಸ್ ತಿಳಿಸಿದ್ದಾರೆ. ಇದನ್ನೂ ಓದಿ: ಹಿಮಾಚಲ ಪ್ರದೇಶದ ಸರ್ಕಾರಿ ಬಸ್ಗಳಲ್ಲಿ ಪ್ರಯಾಣಿಸುವ ಮಹಿಳೆಯರಿಗೆ 50% ರಿಯಾಯಿತಿ: ಸಿಎಂ ಠಾಕೂರ್
ವಿಚಾರಣೆ ವೇಳೆ, ಬಾಂಗ್ಲಾದೇಶದ ಕೊಮಿಲ್ಲಾ ಜಿಲ್ಲೆಯ ನಿವಾಸಿಯಾಗಿರುವ ಬಾಲಕ ಚಾಕೊಲೇಟ್ ಖರೀದಿಗಾಗಿ ಭಾರತಕ್ಕೆ ನುಸುಳಿರುವುದಾಗಿ ಒಪ್ಪಿಕೊಂಡಿದ್ದಾನೆ. ಆತನ ಬಳಿ ಕೇವಲ 100 ಬಾಂಗ್ಲಾದೇಶಿ ಟಾಕಾ (ಕರೆನ್ಸಿ) ಪತ್ತೆಯಾಗಿದೆ. ಆದರೆ ಆತ ಅಕ್ರಮವಾಗಿ ಏನನ್ನೂ ಹೊಂದಿರಲಿಲ್ಲ. ಅಗತ್ಯ ದಾಖಲೆಗಳಿಲ್ಲದೆ ಭಾರತಕ್ಕೆ ಪ್ರವೇಶಿಸಿದ್ದಕ್ಕಾಗಿ ಆತನನ್ನು ಬಂಧಿಸಲಾಗಿದೆ. ಅವರ ಕುಟುಂಬದ ಯಾರೂ ಇದುವರೆಗೆ ಭಾರತೀಯ ಅಧಿಕಾರಿಗಳನ್ನು ಸಂಪರ್ಕಿಸಿಲ್ಲ ಎಂದು ದಾಸ್ ಅವರು ಮಾಹಿತಿ ನೀಡಿದ್ದಾರೆ.