ಬಾಂಗ್ಲಾ ಸಂಸದನ ಕೊಲೆಯ ಹಿಂದಿದೆ ಹನಿಟ್ರ್ಯಾಪ್‌ ಘಾಟು!

Public TV
2 Min Read
BANGLADESH MP Anwarul Azim Anwar

– 5 ಕೋಟಿ ರೂ. ಗೆ ಸುಪಾರಿ ಕೊಟ್ಟಿದ್ದ ಯುಎಸ್‌ ಪ್ರಜೆ
– ಹನಿಟ್ರ್ಯಾಪ್‌ಗೆ ಬಳಸಿದ್ದ ಯುವತಿ ಪೊಲೀಸ್‌ ವಶಕ್ಕೆ

ಕೋಲ್ಕತ್ತಾ: ಬಾಂಗ್ಲಾದೇಶದ ಸಂಸದನ (Bangladesh MP) ಕೊಲೆ ಪ್ರಕರಣದ ಹಿಂದೆ ಇದೀಗ ಹನಿಟ್ರ್ಯಾಪ್‌ (Honey- trap) ವಿಚಾರವೊಂದು ಇದೀಗ ಬಯಲಾಗಿದೆ.

BANGLADESH MP MURDER CASE

ಕೋಲ್ಕತ್ತಾದಲ್ಲಿ ಹತ್ಯೆಯಾಗುವ ಮೊದಲು ಸಂಸದ ಅನ್ವರುಲ್ ಅಜೀಂ ಅನ್ವರ್ (Anwarul Azim Anwar) ಅವರನ್ನು ಹನಿ ಟ್ರ್ಯಾಪ್ ಮಾಡಲು ಬಳಸಿದ್ದ ಯುವತಿಯನ್ನು ಢಾಕಾದಲ್ಲಿ ಬಂಧಿಸಲಾಗಿದೆ. ಯುವತಿಯನ್ನು ಶಿಲಾಂತಿ ರಹಮಾನ್ ಎಂದು ಗುರುತಿಸಲಾಗಿದೆ. ಈಕೆ ಬಾಂಗ್ಲಾದೇಶಿ ಪ್ರಜೆ ಮತ್ತು ಪ್ರಮುಖ ಆರೋಪಿ ಅಖ್ತರುಜ್ಜಮಾನ್ ಶಾಹಿನ್ (Akhtaruzzaman Shahin) ಅವರ ಗೆಳತಿ ಎಂದು ಬಾಂಗ್ಲಾದೇಶದ ಪೊಲೀಸ್ ಮೂಲಗಳು ತಿಳಿಸಿವೆ.

ಅಮೆರಿಕದ ಪ್ರಜೆಯಾಗಿರುವ ಅಖ್ತರುಜ್ಜಮಾನ್, ಅನ್ವರುಲ್ ಅಜೀಂ ಅನ್ವರ್ ಸ್ನೇಹಿತ. ಕೋಲ್ಕತ್ತಾದ ನ್ಯೂ ಟೌನ್ ಪ್ರದೇಶದಲ್ಲಿ ಅಖ್ತರುಜ್ಜಮಾನ್ ಅವರ ಬಾಡಿಗೆ ನಿವಾಸದಲ್ಲಿ ಸಂಸದರನ್ನು ಹತ್ಯೆ ಮಾಡಲಾಗಿದೆ. ಅನ್ವರುಲ್ ಹತ್ಯೆಯಾದಾಗ ಶಿಲಾಂತಿ (Shilanti)  ಕೋಲ್ಕತ್ತಾದಲ್ಲಿ ಇದ್ದಳು. ಮೇ 15 ರಂದು ಕೊಲೆಗಾರ ಅಮಾನುಲ್ಲಾ ಅಮನ್ ಜೊತೆಗೆ ಢಾಕಾಗೆ ಮರಳಿದಳು. ಅನ್ವರುಲ್ ನನ್ನು ಬಾಂಗ್ಲಾದೇಶದಿಂದ ಕೋಲ್ಕತ್ತಾಗೆ ಕರೆತರಲು ಶಿಲಾಂತಿಯನ್ನು ಅಖ್ತರುಜ್ಜಮಾನ್ ಹನಿ ಟ್ರ್ಯಾಪ್ ಆಗಿ ಬಳಸಿಕೊಂಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕೊಲೆಗೆ ಕಾರಣ ಏನೆಂದು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ. ಆದರೆ ಹಣಕಾಸಿನ ವಿಚಾರಕ್ಕೆ ಕೊಲೆಯಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಕೃತ್ಯದಲ್ಲಿ ಭಾಗಿಯಾದವರಿಗೆ ಅಖ್ತರುಜ್ಜಮಾನ್ ಸುಮಾರು 5 ಕೋಟಿ ರೂ. ನೀಡಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: ಕತ್ತು ಹಿಸುಕಿ, ಚರ್ಮ ಸುಲಿದು ಬಾಂಗ್ಲಾ ಸಂಸದನ ದೇಹವನ್ನು ಕತ್ತರಿಸಿ ಹಾಕಿದ್ರು!

BANGLADESH MP HONEYTRAP

ಪಶ್ಚಿಮ ಬಂಗಾಳದ ಅಪರಾಧ ತನಿಖಾ ಇಲಾಖೆ (CID) ಮುಂಬೈನಿಂದ ಶಂಕಿತನನ್ನು ಬಂಧಿಸಿದ ಬಳಿಕ ಒಂದೊಂದೇ ವಿಚಾರಗಳು ಬೆಳಕಿಗೆ ಬರುತ್ತಿವೆ. ಶಂಕಿತ ಜಿಹಾದ್ ಹವ್ಲಾದಾರ್, ನ್ಯೂ ಟೌನ್ ಫ್ಲಾಟ್‌ನಲ್ಲಿ ಇತರ ನಾಲ್ವರು ಜೊತೆಗೂಡಿ ಬಾಂಗ್ಲಾದೇಶಿ ಸಂಸದನನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಅಲ್ಲದೇ ವಿಚಾರಣೆಯ ವೇಳೆ, ಅಖ್ತರುಜ್ಜಮಾನ್ ಆದೇಶದ ಮೇರೆಗೆ ಕೊಲೆ ನಡೆಸಲಾಗಿದೆ ಎಂದು ಹವ್ಲಾದರ್ ಬಾಯ್ಬಿಟ್ಟಿದ್ದನು.

ಸಂಸದರನ್ನು ಬರ್ಬರವಾಗಿ ಕೊಲೆ ಮಾಡಿದ ಬಳಿಕ ದೇಹದಿಂದ ಚರ್ಮ ಮತ್ತು ಮಾಂಸವನ್ನು ಬೇರೆ ಬೇರೆಯಾಗಿ ಮಾಡಿ ಅದಕ್ಕೆ ಅರಶಿಣ ಹಾಕಿದ್ದಾರೆ. ಅಲ್ಲದೇ ಮೂಳೆಗಳನ್ನು ಸಣ್ಣ ಸುಣ್ಣ ತುಂಡುಗಳನ್ನಾಗಿ ಮಾಡಲಾಗಿದೆ. ನಂತರ ಅವುಗಳನ್ನು ಪ್ಲಾಸ್ಟಿಕ್‌ ಚೀಲಗಳಲ್ಲಿ ತುಂಬಿ ಕೋಲ್ಕತ್ತಾದ ವಿವಿಧ ಪ್ರದೇಶಗಳಲ್ಲಿ ಬಿಸಾಕಿದ್ದಾರೆ ಎಂದು ಸಿಐಡಿ ಮೂಲಗಳು ತಿಳಿಸಿವೆ.

Anwarul Azim Anar 1

ವೃತ್ತಿಪರ ಕಟುಕ ಹವ್ಲಾದರ್ ಬಾಂಗ್ಲಾದೇಶದ ಖುಲ್ನಾ ಜಿಲ್ಲೆಯ ಬರಾಕ್‌ಪುರ ನಿವಾಸಿಯಾಗಿದ್ದು, ಕೆಲ ದಿನಗಳಿಂದ ಮುಂಬೈನಲ್ಲಿ ಅಕ್ರಮವಾಗಿ ನೆಲೆಸಿದ್ದಾನೆ. ಎರಡು ತಿಂಗಳ ಹಿಂದೆಯಷ್ಟೇ ಕೋಲ್ಕತ್ತಾಗೆ ಆಗಮಿಸಿದ್ದನು ಎಂದು ಸಿಐಡಿ ಮೂಲಗಳು ಹೇಳಿವೆ.

Share This Article