ಬೆಂಗಳೂರು: ನಗರದಲ್ಲಿ ಕಳೆದ 13 ರ ರಾತ್ರಿ ಸುರಿದ ಭಾರೀ ಮಳೆಗೆ ಕುರುಬರಹಳ್ಳಿ ರಾಜ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ನಿಂಗಮ್ಮ ಅವರ ಶವ ಒಂಭತ್ತು ದಿನಗಳ ನಂತರ ಪತ್ತೆಯಾಗಿದೆ.
ನಗರದ ಜ್ಞಾನಭಾರತಿ ಸಮೀಪದ ರಾಜಕಾಲುವೆಯಲ್ಲಿ ನಿಂಗಮ್ಮ ಅವರ ಶವ ಪತ್ತೆಯಾಗಿದ್ದು, ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶವವನ್ನು ವಿಕ್ಟೋರಿಯಾ ಆಸ್ಪತ್ರೆಯ ಶವಗಾರಕ್ಕೆ ರವಾನಿಸಿದ್ದಾರೆ.
ಅಕ್ಟೋಬರ್ 13 ರಾತ್ರಿ ಸುರಿದ ಮಳೆಗೆ ನಿಂಗಮ್ಮ ಹಾಗೂ ಅವರ ಪುತ್ರಿ ಪುಷ್ಪಾ ಅವರು ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದರು. ಪುಷ್ಪಾ ಅವರ ಶವ ನಗರದ ಕುಂಬಳಗೋಡು ಸೇತುವೆ ಬಳಿ ಘಟನೆ ನಡೆದ 3 ದಿನಗಳ ನಂತರ ಪತ್ತೆಯಾಗಿತ್ತು.
ಪುಷ್ಪಾ ಅವರ ಶವ ಸಿಕ್ಕ ಬಳಿಕ ವೃಷಭಾವತಿ ಕಾಲುವೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಮಂಡಳಿ (ಎನ್ಡಿಆರ್ಆಫ್) ಶೋಧಕಾರ್ಯ ನಡೆಸಿದ್ದರೂ ಅವರ ಮೃತ ದೇಹ ಪತ್ತೆಯಾಗಿರಲಿಲ್ಲ.