ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮಸೂದೆ: ಬಿಬಿಎಂಪಿ ವಿಭಜನೆಗೆ ಬಿಜೆಪಿ-ಜೆಡಿಎಸ್‌ ವಿರೋಧ, ಇದು ಕನ್ನಡಿಗರಿಗಾಗಿಯೇ ಇರಬೇಕು: ಆರ್‌.ಅಶೋಕ್

Public TV
2 Min Read
R Ashok

-‌ ಕೆಲವು ತಿದ್ದುಪಡಿ ಮಾಡಲಿ, ವಿಳಂಬವಾದರೆ 198 ವಾರ್ಡ್‌ಗಳಿಗೆ ಚುನಾವಣೆ ನಡೆಸಲಿ

ಬೆಂಗಳೂರು: ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು (Bengaluru) ವಿಭಜನೆಯಾಗಬಾರದು ಹಾಗೂ ಈ ನಗರ ಕನ್ನಡಿಗರಿಗಾಗಿಯೇ ಇರಬೇಕು ಎಂಬ ಕಾರಣಕ್ಕೆ ರಾಜ್ಯ ಸರ್ಕಾರದ ಬೆಂಗಳೂರು ವಿಭಜನೆ ತೀರ್ಮಾನವನ್ನು ವಿರೋಧಿಸಲಾಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ (R.Ashok) ಹೇಳಿದರು.

ರಾಜ್ಯ ಸರ್ಕಾರದಿಂದ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಸ್ಥಾಪನೆಗೆ ಸಂಬಂಧಿಸಿದಂತೆ ಸಾಧಕ-ಬಾಧಕ ಚರ್ಚಿಸಲು ಆಯೋಜಿಸಿದ್ದ ಪ್ರಾತ್ಯಕ್ಷಿಕೆಯಲ್ಲಿ ಅವರು ಪಾಲ್ಗೊಂಡಿದ್ದರು. ಇದನ್ನೂ ಓದಿ: ಸಿದ್ದರಾಮಯ್ಯನವರ ಆಶೀರ್ವಾದ ಇದ್ದವರು ಸಿಎಂ ಆಗ್ತಾರೆ: ರಾಯರೆಡ್ಡಿ

R.Ashok

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ಇಬ್ಭಾಗವಾಗದೆ ಹೀಗೆಯೇ ಉಳಿಯಬೇಕು. ಇಲ್ಲಿ ಕನ್ನಡಿಗರೇ ಸಾರ್ವಭೌಮರಾಗಿದ್ದು, ಇದು ಕನ್ನಡಿಗರಿಗಾಗಿಯೇ ಉಳಿಯಬೇಕು. ಇಲ್ಲಿ ಕನ್ನಡದವರೇ ಮೇಯರ್‌ ಆಗಬೇಕು. ಇದಕ್ಕಾಗಿ ಬೆಂಗಳೂರು ವಿಭಜನೆಯನ್ನು ಬಿಜೆಪಿ ಮತ್ತು ಜೆಡಿಎಸ್‌ ವಿರೋಧಿಸುತ್ತವೆ ಎಂದು ತಿಳಿಸಿದರು.

ಬಿಬಿಎಂಪಿ ಅಡಿಯಲ್ಲಿ ಸ್ಲಂ ಬೋರ್ಡ್‌, ಜಲಮಂಡಳಿ, ಬಿಎಂಟಿಸಿ ಬರುವುದಿಲ್ಲ. ಇವೆಲ್ಲವೂ ಒಂದೇ ಕಡೆ ಬಂದು, ಬಿಬಿಎಂಪಿಯೇ ನಿರ್ವಹಣೆ ಮಾಡಿದರೆ ಪ್ರತ್ಯೇಕವಾಗಿ ಐಎಎಸ್‌ ಅಧಿಕಾರಿಗಳನ್ನು ನೇಮಕ ಮಾಡುವುದು ತಪ್ಪುತ್ತದೆ. ಸರ್ಕಾರಕ್ಕೆ ಖರ್ಚು ಕಡಿಮೆಯಾಗುವುದರ ಜೊತೆಗೆ, ಜನರು ಒಂದೇ ಕಡೆ ಸೇವೆಗಳನ್ನು ಪಡೆಯಬಹುದು. ಬೇರೆ ನಗರಗಳಲ್ಲೂ ಇದೇ ರೀತಿಯಿದ್ದು, ಬೆಂಗಳೂರಿಗೂ ಇಂತಹ ವ್ಯವಸ್ಥೆ ತರಬೇಕಿದೆ ಎಂದರು. ಇದನ್ನೂ ಓದಿ: ದೀಪಾವಳಿಯೊಳಗೆ ಕಾಂಗ್ರೆಸ್‌ ಸರ್ಕಾರ ಢಮಾರ್‌: ಸಿಟಿ ರವಿ

ರಾಜ್ಯ ಸರ್ಕಾರದ ಈ ವಿಧೇಯಕದಿಂದ ಕೆಳಹಂತದ ಪುರಪಿತೃಗಳಿರುವ ಸಂಸ್ಥೆಯ ಅಧಿಕಾರ ಕುಂಠಿತವಾಗುವ ಅಪಾಯವಿದೆ. ಆದ್ದರಿಂದ ಇದರಲ್ಲಿ ಬದಲಾವಣೆ ತರಬೇಕಿದೆ. ಈ ತಿದ್ದುಪಡಿ ಮಾಡಲು ಹಾಗೂ ವಾರ್ಡ್‌ ಹೆಚ್ಚಳಕ್ಕೆ ವಿಳಂಬವಾದರೆ ಹಿಂದಿನಂತೆ 198 ವಾರ್ಡ್‌ಗಳಿಗೆ ಚುನಾವಣೆ ನಡೆಸಬೇಕು. ಈ ಕುರಿತು ರಾಜ್ಯ ಸರ್ಕಾರಕ್ಕೆ ತಿಳಿಸಲಾಗುವುದು. ಮಂಡನೆಯಾಗಿರುವ ವಿಧೇಯಕದಿಂದ ಎಷ್ಟು ಸಮಸ್ಯೆಯಾಗಲಿದೆ ಎಂಬುದನ್ನು ಜನರಿಗೂ ತಿಳಿಸಲಾಗುವುದು ಎಂದರು.

BBMP

ಇಡೀ ದೇಶಕ್ಕೆ ಒಬ್ಬ ಪ್ರಧಾನಿ, ರಾಜ್ಯಕ್ಕೆ ಒಬ್ಬರೇ ಮುಖ್ಯಮಂತ್ರಿ ಇರುವಂತೆ ಬೆಂಗಳೂರು ನಗರಕ್ಕೆ ಒಬ್ಬ ಮೇಯರ್ ಇರಲಿ. ಅವರ ಅಧಿಕಾರಾವಧಿ ಎರಡೂವರೆ ವರ್ಷ ಅಥವಾ ಐದು ವರ್ಷ ನಿಗದಿಪಡಿಸಿದರೂ ಅಡ್ಡಿಯಿಲ್ಲ ಎಂದರು.

ಕಾಂಗ್ರೆಸ್ ಸರ್ಕಾರ ತಜ್ಞರು ನೀಡಿರುವ ವರದಿಯ ಶೇಕಡಾ ಇಪ್ಪತ್ತರಿಂದ ಮುವತ್ತರಷ್ಟನ್ನು ಮಾತ್ರ ವಿಧೇಯಕದಲ್ಲಿ ಅಳವಡಿಸಿಕೊಂಡಿದೆ ಎಂಬುದನ್ನು ವಿ.ರವಿಚಂದ್ರ ಅವರು ಸ್ಪಷ್ಟಪಡಿಸಿದ್ದಾರೆ. ಜತೆಗೆ ಯಾರಾದರೂ ಕೊರ್ಟ್‌ನಲ್ಲಿ ಪ್ರಶ್ನೆ ಮಾಡಿದರೆ ಬಿದ್ದು ಹೋಗುತ್ತದೆ ಎಂದೂ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅದರಲ್ಲಿರುವ ಲೋಪಗಳನ್ನು ಸರ್ಕಾರಕ್ಕೆ ಮನವರಿಕೆ ಮಾಡುವ ಪ್ರಯತ್ನ ಮಾಡಲಾಗುವುದು. ಒಂದು ವೇಳೆ ಒಪ್ಪದಿದ್ದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಎಲ್ಲಾ ವಿಷಯಗಳ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚಿಸಲಾಗಿದೆ. ಪ್ರಮುಖರ ಸಮಿತಿ ರಚಿಸಿ ವಿವರವಾಗಿ ವಿಧೇಯಕದ ಬಗ್ಗೆ ಅಧ್ಯಯನ ನಡೆಸಿ ಬದಲಾವಣೆ ಕುರಿತು ವರದಿ ನೀಡಲಾಗುವುದು ಎಂದು ವಿವರಿಸಿದರು.

Share This Article