ಉಡುಪಿ: ಲೋಕಸಭಾ ಮಹಾಸಮರವನ್ನು ಹಬ್ಬದಂತೆ ಆಚರಿಸಿ ಎಂದು ಪ್ರಧಾನಿ ಮೋದಿ ಕರೆಕೊಟ್ಟಿದ್ದಾರೆ. ಇದನ್ನು ಕೇಳಿಸಿಕೊಂಡ ಖಾಸಗಿ ಬಸ್ ಮಾಲೀಕರಿಗೆ ಚುನಾವಣೆ ಎಂದರೆ ಹಬ್ಬ ಅಂತ ಏನನ್ನಿಸ್ತೋ ಏನೋ. ಪ್ರತಿ ಬಾರಿ ಹಬ್ಬಕ್ಕೆ ಬಸ್ ದರವನ್ನು ಆಕಾಶಕ್ಕೆ ಮುಟ್ಟಿಸೋ ಖಾಸಗಿ ಬಸ್ ಮಾಲೀಕರು ಇದೀಗ ಚುನಾವಣೆ ದಿನವೂ ಮೂರು ಪಟ್ಟು ಟಿಕೆಟ್ ಬೆಲೆ ಏರಿಸಿದ್ದಾರೆ.
ಚುನಾವಣೆ ಘೋಷಣೆಯಾದ ಬೆನ್ನಲ್ಲೆ ಏಪ್ರಿಲ್ 18ಕ್ಕೆ ಕರಾವಳಿ ಜಿಲ್ಲೆ ಮಂಗಳೂರು, ಉಡುಪಿ ಕಡೆ ಬೆಂಗಳೂರಿಂದ ಹೊರಡುವ ಬಸ್ಸುಗಳ ಬೆಲೆ ಗಗನಕ್ಕೇರಿದೆ. ಬೆಂಗಳೂರಿನಿಂದ ಕುಂದಾಪುರ, ಉಡುಪಿ ಭಾಗಕ್ಕೆ ಬರುವ ಖಾಸಗಿ ಬಸ್ಸುಗಳು ಚುನಾವಣೆಗೆ ಒಂದು ತಿಂಗಳು ಮುನ್ನವೇ ಬಸ್ ಟಿಕೆಟ್ ದರವನ್ನು ಸುಮಾರು ಒಂದೂವರೆ ಸಾವಿರ ರೂ.ಗೆ ಏರಿಸಿದ್ದಾರೆ.
ಉದ್ಯೋಗದ ನಿಮಿತ್ತ ರಾಜಧಾನಿಯಲ್ಲಿರುವ ಯುವಕ-ಯುವತಿಯರಿಗೆ ಬೆಲೆ ಏರಿಸಿ ಬಿಸಿ ತಟ್ಟಿದೆ. ನೂರು ಶೇಕಡಾ ಮತದಾನ ಬಯಸುವ ಚುನಾವಣಾ ಆಯೋಗ ಈ ಬಗ್ಗೆ ಏನು ನಿಲುವು ತಾಳುತ್ತದೆ ಎಂಬುದು ಈಗ ಪ್ರಶ್ನೆಯಾಗಿದೆ. ಚುನಾವಣಾ ಆಯೋಗ ಮಧ್ಯಪ್ರವೇಶ ಮಾಡಿ ಖಾಸಗಿಯವರ ಈ ನೀತಿಗೆ ಕಡಿವಾಣ ಹಾಕುತ್ತಾ ಎಂದು ಕಾದು ನೋಡಬೇಕು.
ಸದ್ಯ 400, 450, 500 ರೂ. ಇರುವ ಟಿಕೆಟ್ ದರ ಚುನಾವಣೆ ದಿನ 1400, 1500, 1600 ಆಗಿದೆ. ಆಪ್ ನಲ್ಲಿ ಮುಂಗಡ ಬುಕ್ಕಿಂಗ್ ಬುಕ್ ಮಾಡಿ ಬಂದ್ರೆ ಬಳಿಕ ಚುನಾವಣೆ ಮುಗಿಸಿ ವಾಪಾಸ್ ಹೋಗುವ ದಿನದ ಟಿಕೆಟ್ ದರ 2,000 ರೂ. ಆದರೂ ಅಚ್ಚರಿಯಿಲ್ಲ.
ಟಿಕೆಟ್ ಬುಕ್ ಮಾಡಲು ಹೊರಟ ಬ್ರಹ್ಮಾವರದ ಶರತ್ ಎಂಬವರಿಗೆ ಶಾಕ್ ಆಗಿದೆ. ವೋಟ್ ಹಾಕುವ ಮನಸ್ಸಾಗಿತ್ತು. ಆದ್ರೆ ಈಗ ವೋಟು ಬೇಡ ಏನೂ ಬೇಡ. 1,600 ಕೊಟ್ಟು ವೋಟು ಹಾಕುವ ಅವಶ್ಯಕತೆ ಏನೂ ಇಲ್ಲ ಎಂದು ಗರಂ ಆಗಿದ್ದಾರೆ. ಹಬ್ಬ ಹರಿದಿನಕ್ಕೆ ಊರಿಗೆ ಬರುವಾಗಲೂ ಬಸ್ಸಿನವರದ್ದು ಇದೇ ರೀತಿ ಇತ್ತು. ಈಗ ಚುನಾವಣೆ ದಿನಕ್ಕೂ ರೇಟ್ ಏರಿಸ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv