ಬೆಂಗಳೂರು: ತಮಿಳು ನಟ ವಿಜಯ್ ಹುಟ್ಟು ಹಬ್ಬದ ಪ್ರಯುಕ್ತ ಶ್ರೀರಾಂಪುರ ತಮಿಳು ಮಯವಾಗಿದ್ದು ಇದಕ್ಕೆ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮಿಳು ನಟ ವಿಜಯ್ ಅವರ ಬರ್ತ್ ಡೇ ಪ್ರಯುಕ್ತ ಅಖಿಲ ಕರ್ನಾಟಕ ಡಾ. ವಿಜಯ್ ಅಭಿಮಾನಿಗಳ ಸಂಘದಿಂದ ಶ್ರೀರಾಂಪುರದಲ್ಲಿ ವಿಜೃಂಭಣೆಯಿಂದ ಹುಟ್ಟು ಹಬ್ಬ ಆಚರಣೆ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ಮಾಜಿ ಎಂಎಲ್ಎ ಹಾಗೂ ವಿಜಯ್ ಆಪ್ತ ಆನಂದ್ ವಿಶೇಷ ಅತಿಥಿಯಾಗಿ ಆಗಮಿಸಿದ್ದರು.
ಶ್ರೀರಾಂಪುರದ ಸನ್ರೈಸ್ ಸರ್ಕಲ್ನಲ್ಲಿ ಬೃಹತ್ ವೇದಿಕೆ ಹಾಕಿ, ಬೆಳಗ್ಗೆಯಿಂದ ವೇದಿಕೆಯಲ್ಲಿ ವಿಜಯ್ ನಟನೆಯ ತಮಿಳು ಹಾಡುಗಳಿಗೆ ನೃತ್ಯ ಮಾಡಲಾಗುತ್ತಿತ್ತು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿ ಕನ್ನಡಪರ ಸಂಘಟನೆಯ ಕಾರ್ಯಕರ್ತರು ಆಗಮಿಸಿದ ಕೂಡಲೇ ಕನ್ನಡ ಭಕ್ತಿಗೀತೆಗಳನ್ನು ಹಾಕಿ ನೃತ್ಯ ಮಾಡಲಾಗಿದೆ ಎನ್ನಲಾಗಿದೆ.
ಶ್ರೀರಾಂಪುರ ತಮಿಳುವಾಗಿದ್ದಕ್ಕೆ ವಿರೋಧ ವ್ಯಕ್ತಪಡಿಸಿರುವ ಕನ್ನಡ ಪರ ಸಂಘಟನೆಗಳು ಕರ್ನಾಟಕದಲ್ಲಿ ಕನ್ನಡಕ್ಕೆ ನೆಲೆ ಇಲ್ಲದಾಂತಾಗುತ್ತಿದೆ ಎಂದು ಕಿಡಿಕಾರಿದ್ದಾರೆ. ಇನ್ನೂ ವೇದಿಕೆಯ ಫ್ಲೆಕ್ಸ್ನಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಫೋಟೋಗಳು ಕಂಡು ಬಂದಿವೆ.