ಬೆಂಗಳೂರು: ನನ್ನನ್ನು ಯಾರೂ ಸಂಪರ್ಕಿಸಿಲ್ಲ ನಾನೇನು ಸಂತೆಯಲ್ಲಿರುವ ಕುರಿಯಲ್ಲ ಎಂದು ರಾಜೀನಾಮೆ ಕೊಡುತ್ತೇವೆ ಎಂಬ ಶಾಸಕರ ಮೇಲೆ ಸ್ಪೀಕರ್ ರಮೇಶ್ ಕುಮಾರ್ ಗರಂ ಆಗಿದ್ದಾರೆ.
ಇಂದು ಶಾಸಕರು ರಾಜೀನಾಮೆ ನೀಡುತ್ತಾರೆ ಎಂಬ ವಿಚಾರಕ್ಕೆ ವಿಧಾನಸೌಧಲ್ಲಿ ಪ್ರತಿಕ್ರಿಯಿಸಿದ ರಮೇಶ್ ಕುಮಾರ್ ಅವರು, ಇಲ್ಲಿಯವರೆಗೆ ನನ್ನನ್ನು ಯಾರೂ ಸಂಪರ್ಕ ಮಾಡಿಲ್ಲ. ಇದೆಲ್ಲ ಪುಕಾರು, ಕೆಲವು ಶಾಸಕರು ಅವರವರ ಬಿಸಿನೆಸ್ ಮಾಡಿಕೊಳ್ಳಲು ತಂತ್ರ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಸ್ಪೀಕರ್ ಅಂದರೆ ಹುಡುಗಾಟಿಕೆ ಮಾತಲ್ಲ. ಬರುವುದಾದರೆ ಶಾಸಕರು ಬರಲಿ ನಾನು ಇಲ್ಲಿಯೇ ಇರುತ್ತೇನೆ. 13 ಜನರಲ್ಲಿ ಯಾರು ನನ್ನ ಸಂಪರ್ಕ ಮಾಡಿಲ್ಲ. ಇದೆಲ್ಲ ಹೆದರಿಸುವ ತಂತ್ರ. ಮಾಧ್ಯಮದರು ದಾರಿ ತಪ್ಪಿಸುತ್ತಿದ್ದಾರೆ. ನಾನು ಯಾರಿಗೂ ಕಾಯುತ್ತಾ ಕೂರುವುದಿಲ್ಲ. ಈ ರೀತಿಯ ಘಟನೆಗಳು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಹೇಳಿದ್ದಾರೆ. ಇದನ್ನು ಓದಿ: ಇಂದು 13 ಮಂದಿ ಶಾಸಕರು ರಾಜೀನಾಮೆ?
ಈ ಮಹಾನುಭಾವರ ಬರುತ್ತಾರೆ ಎಂದು ನಾನು ಕಾಯುತ್ತ ಕುಳಿತುಕೊಳ್ಳಬೇಕಾ? ಅವರು ಪುಕಾರು ಹಬ್ಬಿಸಿ ಅವರ ಬಿಸಿನೆಸ್ ಮಾಡಿಕೊಳ್ಳುತ್ತಿದ್ದಾರೆ. ಎಲ್ಲದಕ್ಕೂ ಒಂದು ನಿಯಮ ಇದೆ. ಮೂರಲ್ಲ ಮೂವತ್ತು ಮಂದಿ ಬರಲಿ ನಾನೇನು ಬೇಡ ಅಂದಿದ್ದೇನಾ ಇಲ್ಲಿ ತನಕ ಯಾರೂ ನನ್ನನ್ನು ಸಂಪರ್ಕ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.