ಬೆಂಗಳೂರು: ರಾಜ್ಯವನ್ನೇ ಬೆಚ್ಚಿ ಬೀಳಿಸಿರುವ ಮಹಾಮಳೆ ಇಂದು ಸಿಲಿಕಾನ್ ಸಿಟಿಯಲ್ಲು ತನ್ನ ಆರ್ಭಟ ತೋರಿದೆ. ಬೆಂಗಳೂರಿನಲ್ಲಿ ಹಲವು ಕಡೆ ಸುರಿದ ಮಳೆಯಿಂದ ವಾಹನ ಸವಾರರು ಪರದಾಡಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಅವಂತರ ಸೃಷ್ಟಿ ಮಾಡಿರುವ ಮಳೆ ಬೆಂಗಳೂರಿಗೂ ಬರುವ ಮನ್ಸೂಚನೆ ನೀಡಿದೆ. ಇಂದು ಬೆಂಗಳೂರಿನ ಯಶವಂತಪುರ, ಮಲ್ಲೇಶ್ವರಂ, ಮೆಜೆಸ್ಟಿಕ್ ಸೇರಿ ಬೆಂಗಳೂರಿನ ಬಹುತೇಕ ಕಡೆ ಜೋರು ಮಳೆಯಾಗಿದೆ.
ವೆಸ್ಟ್ ಆಫ್ ಕಾರ್ಡ್ ರೋಡ್, ಮಹಾಲಕ್ಷ್ಮೀ ಲೇಔಟ್ ಮತ್ತು ಮೆಜೆಸ್ಟಿಕ್ ಸುತ್ತಮುತ್ತ ಮಳೆಯಿಂದಾಗಿ ಮನೆಗೆ ತೆರಳಲು ಆಗದೇ ಶಾಲಾ ಮಕ್ಕಳು ರಸ್ತೆ ಇಕ್ಕೆಲಗಳಲ್ಲೇ ನಿಂತಿದ್ದರು. ಇಂದು ಸುರಿದ ಮಳೆಯಿಂದಾಗಿ ವಿಜಯನಗರ ಆದಿಚುಂಚನಗಿರಿ ಮಠದ ಬಳಿ ಮರ ಬಿದ್ದು ರಸ್ತೆ ಸಂಚಾರಕ್ಕೆ ಸಮಸ್ಯೆಯಾಗಿತ್ತು.
ಮುಂದಿನ 3 ಗಂಟೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಇದರ ಜೊತೆಗೆ ಉಡುಪಿ, ಉತ್ತರ ಕನ್ನಡ, ಬೆಳಗಾವಿ ಮತ್ತು ಶಿವಮೊಗ್ಗ ಸೇರಿದಂತೆ ಇತರೆ ಭಾಗಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ.