ಪಶ್ಚಿಮ ಬಂಗಾಳದಲ್ಲಿ ‘ದಿ ಕೇರಳ ಸ್ಟೋರಿ’ ನಿಷೇಧ : ಪ್ರತಿಭಟನೆಗೆ ಇಳಿದ ಬಿಜೆಪಿ

Public TV
2 Min Read
The Kerala Story 2

ವಿವಾದಾತ್ಮಕ ‘ದಿ ಕೇರಳ ಸ್ಟೋರಿ’ (The Kerala Story) ಚಿತ್ರವನ್ನು ತಮಿಳು ನಾಡು ಸರಕಾರ ನಿಷೇಧ ಮಾಡಿರುವ ಬೆನ್ನಲ್ಲೇ ಪಶ್ಚಿಮ ಬಂಗಾಳ (West Bengal) ಸರ್ಕಾರವು ಕೂಡ ಚಿತ್ರಮಂದಿರಗಳಲ್ಲಿ ಪ್ರದರ್ಶಿಸುವುದನ್ನು ನಿಷೇಧಿಸಿತ್ತು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಈ ವಿವಾದಾತ್ಮಕ ಚಿತ್ರದ ಪದರ್ಶನವನ್ನು ತಕ್ಷಣವೇ ನಿಷೇಧಿಸುವಂತೆ ಆದೇಶ ಹೊರಡಿಸಿದ್ದರು. ದಿದಿ ಈ ನಡೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ.

The Kerala Story 5

ಬಹುತೇಕ ಕಡೆ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಮಧ್ಯ ಪ್ರದೇಶ ಸೇರಿದಂತೆ ಹಲವು ರಾಜ್ಯಗಳು ತೆರಿಗೆ ವಿನಾಯತಿಯನ್ನೂ ಘೋಷಣೆ ಮಾಡಿವೆ. ಆದರೂ, ಪಶ್ಚಿಮ ಬಂಗಾಲ ಸರಕಾರ ಈ ರೀತಿ ಸಿನಿಮಾವೊಂದನ್ನು ನಿಷೇಧ ಮಾಡುವುದು ಸರಿಯಲ್ಲ ಎಂದು ಬಿಜೆಪಿ (BJP) ಪ್ರತಿಕ್ರಿಯಿಸಿದೆ. ಮಮತಾ ಬ್ಯಾನರ್ಜಿ ಸರಕಾರದ ವಿರುದ್ಧ ಪ್ರತಿಭಟನೆಯ ಎಚ್ಚರಿಕೆಯನ್ನೂ ಕೊಟ್ಟಿದೆ. ದ್ವೇಷ ಮತ್ತು ಹಿಂಸಾಚಾರದ ಘಟನೆಗಳನ್ನು ತಪ್ಪಿಸಿ ರಾಜ್ಯದಲ್ಲಿ ಶಾಂತಿಯನ್ನು ಕಾಪಾಡುವ ಸಲುವಾಗಿ ಪಶ್ಚಿಮ ಬಂಗಾಳ ಸರ್ಕಾರವು ಕೇರಳ ಸ್ಟೋರಿ ಚಲನಚಿತ್ರವನ್ನು ನಿಷೇಧಿಸಲು ನಿರ್ಧರಿಸಿದೆ ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. ಇದನ್ನೂ ಓದಿ:ಬಣ್ಣದ ಜಗತ್ತಿಗೆ ಎಂಟ್ರಿ ಕೊಟ್ಟ ಕ್ರಿಕೆಟಿಗ ಶುಭಮನ್‌ ಗಿಲ್

The Kerala Story 1

ಕಾಶ್ಮೀರ ಫೈಲ್ಸ್ ಎಂಬುದು ಒಂದು ಪ್ರದೇಶವನ್ನು ಅವಮಾನಿಸುತ್ತದೆ. ಅಂತೆಯೇ ದಿ ಕೇರಳ ಸ್ಟೋರಿ ಚಲನಚಿತ್ರವು ತಿರುಚಿದ ಕಥೆಯಾಗಿದೆ ಎಂದು ಮಮತಾ ಬ್ಯಾನರ್ಜಿ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಚಲನಚಿತ್ರ ನಿರ್ಮಾಪಕ ವಿಪುಲ್ ಶಾ, ಅವರು ಹಾಗೆ ಮಾಡಿದರೆ ನಾವು ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಕಾನೂನಿನ ನಿಬಂಧನೆಗಳ ಅಡಿಯಲ್ಲಿ ಏನು ಮಾಡಲು ಸಾಧ್ಯವೋ ಅದನ್ನು ಮಾಡಿ ಹೋರಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

The Kerala Story 4

ಪಶ್ಚಿಮ ಬಂಗಾಳದ ಯಾವುದೇ ಥಿಯೇಟರ್‌ನಲ್ಲಿ (Theater) ಚಿತ್ರ ಪ್ರದರ್ಶನ ಕಂಡು ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪಶ್ಚಿಮ ಬಂಗಾಳದ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ. ಅದೇ ರೀತಿ ತಮಿಳುನಾಡಿನಲ್ಲಿಯೂ (Tamil Nadu) ಈ ಚಿತ್ರಪದರ್ಶನ ಮಾಡದಂತೆ ತಮಿಳುನಾಡು ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್ ಮಾಲೀಕರ ಸಂಘ ನಿರ್ಧಾರ ಕೈಗೊಂಡಿದೆ. ಶುಕ್ರವಾರ ತೆರೆಗೆ ಬಂದ ಈ ಸಿನೆಮಾ ಸಾಕಷ್ಟು ವಾದ-ವಿವಾದಗಳನ್ನು ಹುಟ್ಟಿಹಾಕುತ್ತಿದೆ. ದೇಶದ ಹಲವೆಡೆ ಈ ಚಿತ್ರದ ಕುರಿತು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದರೆ, ಮತ್ತೊಂದೆಡೆ ಈ ಚಿತ್ರದ ಕುರಿತು ಪ್ರತಿಭಟನೆಗಳು ನಡೆಯುತ್ತಿವೆ.

Share This Article