ಜಕಾರ್ತ: ಹುಟ್ಟಿದ ಮನುಷ್ಯ ಸಾಯಲೇಬೇಕು ಇದು ಪ್ರಕೃತಿಯ ನಿಯಮ. ಸಾವನ್ನಪ್ಪಿದ ವ್ಯಕ್ತಿಯ ಅಂತ್ಯಕ್ರಿಯೆಯನ್ನು ವಿಶ್ವದಾದ್ಯಂತ ಭಿನ್ನವಾಗಿ ಮಾಡುತ್ತಾರೆ. ಧರ್ಮಗಳ ಆಧಾರದಲ್ಲಿ ಅಂತ್ಯಕ್ರಿಯೆ ಪದ್ಧತಿ ಪ್ರದೇಶದಿಂದ ಪ್ರದೇಶಗಳಿಗೆ ಭಿನ್ನವಾಗಿರುತ್ತವೆ. ಇಂಡೋನೇಷ್ಯಾ ಉತ್ತರ ಬಾಲಿ ಪ್ರಾಂತ್ಯದ ದಟ್ಟ ಅರಣ್ಯ ಪ್ರದೇಶದಲ್ಲಿರುವ ಟ್ರನ್ಯನ್ ಗ್ರಾಮದಲ್ಲಿ ಶವಗಳನ್ನು ಬಿದಿರಿನ ಪಂಜರದಲ್ಲಿ ಇರಿಸಲಾಗುತ್ತದೆ.
ಈ ಗ್ರಾಮಕ್ಕೆ ಪ್ರವಾಸಿಗರು ಭೇಟಿ ನೀಡಿ ಸಾಲು ಸಾಲಾಗಿ ಜೋಡಿಸಿರುವ ಬುರುಡೆಗಳನ್ನು ಸ್ಪರ್ಶಿಸಬಹುದು. ಗ್ರಾಮಕ್ಕೆ ಪ್ರವಾಸಿಗರು ತೆರಳಿ ಮಾಹಿತಿಯನ್ನು ಕಲೆಹಾಕಲು ಗ್ರಾಮಸ್ಥರು ಅಡ್ಡಿಪಡಿಸಲ್ಲ. ಈ ಪ್ರದೇಶದಲ್ಲಿ ಸುಮಾರು ಒಂದು ಸಾವಿರಕ್ಕೂ ಹಳೆಯ ಬುರುಡೆಗಳು ಸಿಗುತ್ತವೆ. ಮೌಂಟ್ ಬತೂರ್ ವಲ್ಕ್ಯಾನೋ ಅರಣ್ಯ ಪ್ರದೇಶದ ಬತೂರ್ ಕೆರೆಯನ್ನು ಬೋಟ್ ಮೂಲಕ ಸುಮಾರು 3 ಗಂಟೆ ಕ್ರಮಿಸಿದರೆ ದಾಟಿ ಪುಟ್ಟ ದ್ವೀಪ ಸಿಗುತ್ತದೆ. ಇಂದಿಗೂ ಈ ದ್ವೀಪದಲ್ಲಿ ಈ ರೀತಿಯ ಶವಸಂಸ್ಕಾರದ ಪದ್ಧತಿ ಜೀವಂತವಾಗಿದೆ.
ಗ್ರಾಮದಲ್ಲಿ ಯಾರೇ ಸಾವನ್ನಪ್ಪಿದ್ರೂ ಕೇವಲ ಪುರುಷರು ಮಾತ್ರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗುತ್ತಾರೆ. ಮೃತದೇಹಗಳನ್ನು ನಿರ್ಧಿಷ್ಟ ಪ್ರದೇಶಕ್ಕೆ ಕರೆತರುವ ಗ್ರಾಮಸ್ಥರು ಬಿದಿರುಗಳಿಂದ ನಿರ್ಮಿಸಲಾಗಿರುವ ಪಂಜರದಲ್ಲಿ ಇರಿಸುತ್ತಾರೆ. ಮೃತದೇಹಗಳು ಕಾಡು ಪ್ರಾಣಿಗಳಿಗೆ ಆಹಾರವಾಗದಿರಲಿ ಎಂದು ಸುವಾಸನೆ ಬೀರುವ ತಾರು ಮೆನ್ಯಾನ್ ಜಾತಿಯ (Taru Menyan tree) ಮರಗಳ ಅಡಿಯಲ್ಲಿ ಅಚ್ಚುಕಟ್ಟಾಗಿ ಪಂಜರ ನಿರ್ಮಿಸಲಾಗಿರುತ್ತದೆ.
ಏಕಕಾಲದಲ್ಲಿ ಹೆಚ್ಚು ಜನರು ಸಾವನ್ನಪ್ಪಿದರೆ ಹಳೆಯ ಪಂಜರದಿಂದ ಬುರುಡೆ ಮತ್ತು ಮೂಳೆಗಳನ್ನು ಹೊರತೆಗೆದು ಹೊಸ ಶವವನ್ನು ಇರಿಸುತ್ತಾರೆ. ಪಂಜರದಿಂದ ಹೊರತೆಗೆದ ಬುರುಡೆಗಳನ್ನು ಒಂದೆಡೆ ಸಾಲಾಗಿ ಜೋಡಿಸುತ್ತಾರೆ.
ಇಲ್ಲಿನ ಪದ್ಧತಿಯಂತೆ ಮೃತದೇಹಗಳನ್ನು ಇರಿಸೋ ಸ್ಥಳಕ್ಕೆ ಮಹಿಳೆಯರಿಗೆ ಪ್ರವೇಶ ನಿರ್ಬಂಧಿಸಲಾಗಿದ್ದು, ಎಲ್ಲರೂ ಅತ್ಯಂತ ಕಟ್ಟುನಿಟ್ಟಿನಿಂದ ಈ ನಿಯಮವನ್ನು ಪಾಲಿಸುತ್ತಾರೆ. ಅಂತ್ಯಸಂಸ್ಕಾರ ಅಥವಾ ಬೇರೆ ಸಮಯದಲ್ಲಿ ಸ್ಮಶಾನಕ್ಕೆ ಮಹಿಳೆಯರು ಪ್ರವೇಶಿಸದರೆ ಜ್ವಾಲಾಮುಖಿ, ಭೂಕಂಪ ಸಂಭವಿಸುತ್ತದೆ ಎಂಬುವುದು ಇಲ್ಲಿಯ ಜನರ ಬಲವಾದ ನಂಬಿಕೆ.