-ಉಮೇಶ್ ಕತ್ತಿಗೆ ಅನ್ಯಾಯವಾಗಿದೆ
ಬೆಂಗಳೂರು: ಅರಭಾವಿ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಹೆಸರು ಸಚಿವ ಸ್ಥಾನದ ಪಟ್ಟಿಯಲ್ಲಿ ಕೇಳಿ ಬಂದಿತ್ತು. ಆದ್ರೆ ಬಾಲಚಂದ್ರ ಜಾರಕಿಹೊಳಿ ಅವರ ಹೆಸರನ್ನು ಸಚಿವರ ಪಟ್ಟಿಯಿಂದ ಬಿಜೆಪಿ ಹೈಕಮಾಂಡ್ ಕೈ ಬಿಟ್ಟಿತ್ತು. ಈ ಕುರಿತು ಬಾಲಚಂದ್ರ ಜಾರಕಿಹೊಳಿ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಇಂದಲ್ಲ, ನಾಳೆ ನಾನು ಮಂತ್ರಿಯಾಗುತ್ತೇನೆ ಎಂದು ಹೇಳಿದ್ದಾರೆ.
ನಿನ್ನೆ ತಡರಾತ್ರಿ ಬೆಂಗಳೂರಿಗೆ ಬಂದಿದ್ದೇನೆ. ಮಾಧ್ಯಮಗಳಲ್ಲಿ ಸಚಿವ ಸ್ಥಾನದಲ್ಲಿ ನನ್ನ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ಬೆಂಬಲಿಗರು ಬೆಂಗಳೂರಿಗೆ ಬಂದಿದ್ದಾರೆ. ನನ್ನನ್ನು ಮಂತ್ರಿ ಮಾಡಿ ಎಂದು ಸಿಎಂ ಬಳಿ ಕೇಳಿಲ್ಲ. ಸಚಿವ ಸ್ಥಾನ ನೀಡಿದ್ರೆ ನಿರ್ವಹಿಸಲು ಸಿದ್ಧನಿದ್ದೇನೆ. ಸಚಿವ ಸ್ಥಾನ ನೀಡಿಲ್ಲ, ಹಾಗಾಗಿ ನಮ್ಮ ಕೆಲಸಗಳಲ್ಲಿ ತೊಡಗಿಕೊಳ್ಳುತ್ತೇವೆ. ಕಳೆದ ಮೂರು ದಿನಗಳಿಂದ ಮಾಧ್ಯಮಗಳು ನನ್ನನ್ನು ಮಂತ್ರಿ ಮಾಡಿದಕ್ಕೆ ಧನ್ಯವಾದ ಹೇಳುತ್ತೇನೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ನಕ್ಕರು.
2005ರಿಂದಲೂ ಜಾರಕಿಹೊಳಿ ಕುಟುಂಬದಲ್ಲಿ ಒಬ್ಬರು ಮಂತ್ರಿಯಾಗುತ್ತಾ ಬಂದಿದ್ದಾರೆ. ಇಂದಲ್ಲ ಅಥವಾ ನಾಳೆ ನಾನು ಮಂತ್ರಿಯಾಗುತ್ತೇನೆ ಎಂಬ ನಂಬಿಕೆ ಹೊಂದಿದ್ದೇನೆ. ಲಕ್ಷ್ಮಣ್ ಸವದಿ ಅಥಣಿ ಮತ್ತು ಕಾಗವಾಡ ಕ್ಷೇತ್ರದ ವ್ಯಕ್ತಿ. ಹಾಗಾಗಿ ಮುಂದೆ ನಡೆಯುವ ಉಪಚುನಾವಣೆಯನ್ನು ಗೆಲ್ಲುವ ಉದ್ದೇಶದಿಂದ ಲಕ್ಷ್ಮಣ್ ಸವದಿಯವರಿಗೆ ಹೈಕಮಾಂಡ್ ಸಚಿವ ಸ್ಥಾನ ನೀಡಿರುವ ಸಾಧ್ಯತೆಗಳಿವೆ. ಸಚಿವ ಸ್ಥಾನದ ಯಾವುದೇ ಆಸೆಯೂ ನನಗಿಲ್ಲ, ಪಕ್ಷಕ್ಕೆ ನಿಷ್ಠನಾಗಿರುತ್ತೇನೆ ಎಂದರು.
ಕ್ಷೇತ್ರದ ಜನತೆಗೆ ಮತ್ತು ಬೆಂಬಲಿಗರಿಗೆ ನಮ್ಮ ನಾಯಕ ಸಚಿವ ಆಗಬೇಕೆಂದು ಆಸೆ ಇರುತ್ತದೆ. ಅಂತಿಮ ಆದೇಶ ಬರೋವರೆಗೂ ಬೆಂಗಳೂರಿಗೆ ಬರೋದು ಬೇಡ ಅಂತಾ ಹೇಳಿದ್ದರೂ ಬಂದಿದ್ದಾರೆ. ಸಹಜವಾಗಿಯೇ ಕ್ಷೇತ್ರದ ಜನತೆಗೆ ನಿರಾಸೆಯುಂಟಾಗಿದ್ದರಿಂದ ಆಕ್ರೋಶ ಹೊರ ಹಾಕುತ್ತಿದ್ದಾರೆ. ದೈವ ಬಲ ನಮಗಿದ್ದು, ಜಾರಕಿಹೊಳಿ ಕುಟುಂಬದಿಂದ ಒಬ್ಬರು ಖಂಡಿತ ಮಂತ್ರಿ ಆಗುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ಉಮೇಶ್ ಕತ್ತಿಯವರು ನನ್ನ ಆಪ್ತರು. ಒಂಬತ್ತು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಉಮೇಶ್ ಕತ್ತಿಯವರ ಸೋದರನಿಗೆ ಟಿಕೆಟ್ ನೀಡಿರಲಿಲ್ಲ. ಅಂದು ಯಡಿಯೂರಪ್ಪನವರು ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ನೀಡುವುದಾಗಿ ಭರವಸೆ ನೀಡಿದ್ದರು. ಉಮೇಶ್ ಕತ್ತಿ ಅವರಿಗೆ ಸಚಿವ ಸ್ಥಾನ ನೀಡಬೇಕಿತ್ತು ಎಂಬುವುದು ನನ್ನ ವೈಯಕ್ತಿಯ ಅಭಿಪ್ರಾಯ. ಸಂಪುಟ ರಚನೆಯಲ್ಲಿ ಉಮೇಶ್ ಕತ್ತಿಯವರಿಗೆ ಅನ್ಯಾಯವಾಗಿದೆ ಎಂದು ಬಾಲಚಂದ್ರ ಜಾರಕಿಹೊಳಿ ಬೇಸರ ಹೊರ ಹಾಕಿದರು.