ಮುಸ್ಲಿಮ್ ಬಾಂಧವರಿಗೆ ಹಬ್ಬಗಳು ಅಂದರೆ ಎರಡೇ. ಒಂದು ಈದ್ ಉಲ್ ಫಿತ್ರ್ ಅಥವಾ ರಂಜಾನ್ ಹಬ್ಬ ಹಾಗೂ ಈದ್ ಅಲ್ ಅಧಾ (ಈದ್ ಉಲ್ ಧುಹಾ) ಅಥವಾ ಬಕ್ರೀದ್ ಹಬ್ಬ. ಇಸ್ಲಾಮಿಕ್ ಕ್ಯಾಲೆಂಡರ್ ನ ಒಂಬತ್ತನೆಯ ತಿಂಗಳಲ್ಲಿ ಒಂದು ತಿಂಗಳ ಉಪವಾಸ ಆಚರಣೆಯ ಬಳಿಕ ರಂಜಾನ್ ರಬ್ಬ ಆಚರಿಸಿದರೆ ಕಡೆಯ ತಿಂಗಳಾದ ದುಲ್ ಹಜ್ ನ ಹತ್ತನೆಯ ದಿನದಂದು (ಚಂದ್ರದರ್ಶನವಾದ ಹತ್ತನೆಯ ದಿನ) ತ್ಯಾಗ ಮತ್ತು ಬಲಿದಾನದ ಸಂಕೇತವಾಗಿ ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತದೆ ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತದೆ.
ಇತಿಹಾಸ: ಬಕ್ರೀದ್ ಆಚರಣೆಗೆ ಕಾರಣವಾದ ಕಥೆಗೆ ನಾಲ್ಕು ಸಾವಿರ ವರ್ಷ ಹಿಂದಿನ ಇತಿಹಾಸವಿದೆ. ಆ ಸಮಯದಲ್ಲಿ ಮೆಕ್ಕಾ ನಗರದಲ್ಲಿ ವಾಸವಾಗಿದ್ದ ಪ್ರವಾದಿ ಇಬ್ರಾಹಿಂ(ಸ) ರವರ ಭಕ್ತಿ ಮತ್ತು ನಿಷ್ಠೆಯನ್ನು ಪರೀಕ್ಷಿಸಲು ಅಲ್ಲಾಹ ಮುಂದಾಗುತ್ತಾರೆ. ಕನಸಿನಲ್ಲಿ ಬರುವ ಅಲ್ಲಾಹ ಜಗತ್ತಿನಲ್ಲಿ ನಿಮಗೆ ಅತ್ಯಂತ ಪ್ರಿಯರು ಯಾರು ಎಂದು ಕೇಳಿದಾಗ, ನನ್ನ ಪುತ್ರ ನನಗೆ ಅತ್ಯಂತ ಪ್ರಿಯವಾದ ವ್ಯಕ್ತಿಯೆಂದು ಇಬ್ರಾಹಿಂ(ಸ) ಹೇಳ್ತಾರೆ. ಹಾಗಾದರೆ ಓರ್ವನೇ ಮಗನಾದ ಇಸ್ಮಾಯಿಲ್ ರನ್ನು ಬಲಿ ನೀಡಬೇಕೆಂದು ಕನಸಿನಲ್ಲಿ ಆಜ್ಞೆಯಾಗುತ್ತದೆ.
ಅಲ್ಲಾಹನ ಆಜ್ಞೆಯಂತೆ ಇಬ್ರಾಹಿಂ(ಸ) ಮಗನನ್ನು ಬಲಿ ನೀಡಲು ಮುಂದಾಗುತ್ತಾರೆ. ತಂದೆಯ ಮಾತನ್ನು ಇಸ್ಮಾಯಿಲ್ ಸಹ ಒಪ್ಪಿಕೊಂಡು ಬಲಿಗೆ ನಗುಮೊಗದಲ್ಲಿಯೇ ಸಿದ್ಧಗೊಳ್ಳುತ್ತಾನೆ. ಆದರೆ ಇಬ್ರಾಹಿಂ(ಸ) ಅವರಿಗೆ ಮಗನನ್ನು ಬಲಿ ಕೊಡಲು ಪುತ್ರ ವಾತ್ಸಲ್ಯ ಅಡ್ಡಿಯಾಗುತ್ತದೆ. ಈ ಸದರ್ಭದಲ್ಲಿ ಕಣ್ಣಿಗೆ ಕಪ್ಪು ಪಟ್ಟಿಕೊಂಡ ಅವರು ಮಗನ ಕುತ್ತಿಗೆಗೆ ಕತ್ತಿ ಬೀಸಲು ಸಿದ್ಧರಾಗುತ್ತಾರೆ.
ಆ ವೇಳೆ, ಪ್ರತ್ಯಕ್ಷರಾದ ದೇವದೂತ ಜಿಬ್ರಾಯಿಲ್, ಇಸ್ಮಾಯಿಲ್ರನ್ನು ಬದಿಗೆ ಸರಿಸಿ ಅವರ ಬದಲಿಗೆ ಒಂದು ಕುರಿಯನ್ನು ಬಲಿಕೊಡುವಂತೆ ಆಜ್ಞಾಪಿಸುತ್ತಾರೆ. ಕುರಿಯ ಕುತ್ತಿಗೆಯ ಮೇಲೆ ಹರಿಸಿದ ಕತ್ತಿ ಸಫಲವಾಗುತ್ತದೆ. ದೇವನಲ್ಲಿ ತಮಗಿರುವ ಸತ್ಯನಿಷ್ಠೆಯ ಸಂಕೇತವಾಗಿ ವಿಶ್ವದಾದ್ಯಂತ ಮುಸ್ಲಿಮರಿಂದ ಬಕ್ರೀದ್ ಹಬ್ಬ ಆಚರಿಸಲಾಗುತ್ತಿದೆ. ಇದೇ ಕಥೆಯನ್ನು ಹಲವರು ತಮ್ಮದೇ ಶೈಲಿಯಲ್ಲಿ ಭಿನ್ನ ಭಿನ್ನವಾಗಿ ಹೇಳುತ್ತಾರೆ.
ಈದ್ ನಮಾಜ್: ಮುಂಜಾನೆಯ ಪ್ರಾರ್ಥನೆ ಬಕ್ರೀದ್ ಹಬ್ಬದ ಬೆಳಗ್ಗೆ ಊರಿನ ಜನರೆಲ್ಲರೂ ಹೊಸ ಬಟ್ಟೆ ಧರಿಸಿ ಈದ್ಗಾ ಮೈದಾನಕ್ಕೆ ತೆರಳುತ್ತಾರೆ. ಈದ್ಗಾ ವ್ಯವಸ್ಥೆ ಇಲ್ಲದ ಊರಿನಲ್ಲಿ ಪ್ರಮುಖ ಮಸೀದಿಗಳಲ್ಲಿಯೇ ಈದ್ ಪ್ರಾರ್ಥನೆಯನ್ನು ಮಾಡುತ್ತಾರೆ. ತೆರೆದ ಮೈದಾನದಲ್ಲಿ ಊರಿನ ಅಷ್ಟೂ ಜನರು ಒಂದಾಗಿ ಈದ್ ನಮಾಜ್ ನಿರ್ವಹಿಸುವ ಕ್ರಿಯೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಮಸೀದಿಯಲ್ಲಿ ಮೊದಲೇ ನಿರ್ಣಯಿಸಿದ ಸಮಯಕ್ಕೆ ಎಲ್ಲರೂ ಸಾಮೂಹಿಕ ಪ್ರಾರ್ಥನೆಗೆ ಒಂದೆಡೆ ಸೇರುತ್ತಾರೆ. ನಮಾಜ್ ಬಳಿಕ ಎಲ್ಲರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ.
ಕುರ್ಬಾನಿ: ಈದ್ ನಮಾಜ್ ಬಳಿಕ ನಾಲ್ಕು ಕಾಲುಗಳ್ಳ ಪ್ರಾಣಿಯೊಂದನ್ನು ಬಲಿ ನೀಡಲಾಗುತ್ತದೆ. ಆದ್ರೆ ಕುರ್ಬಾನಿಗೆ ಪ್ರಾಣಿಗಳನ್ನು ಬಳಸುವಾಗ ಕೆಲವು ಮಾನದಂಡಗಳನ್ನು ಎಲ್ಲರೂ ಪಾಲಿಸಬೇಕಾಗುತ್ತದೆ. ಬಲಿ ನೀಡುವ ಪ್ರಾಣಿಗೆ ಯಾವುದೇ ರೀತಿಯಲ್ಲಿ ಗಾಯಗೊಂಡಿರಬಾರದು ಅಥವಾ ಸಾವಿನ ಸ್ಥಿತಿಯಲ್ಲಿರಬಾರದು ಎಂಬಿತ್ಯಾದಿ ಮಾನದಂಡಗಳನ್ನು ಅವಶ್ಯಕವಾಗಿ ಕುರ್ಬಾನಿ ನೀಡುವವರು ಪಾಲಿಸಬೇಕಾಗುತ್ತದೆ.
ಕುರ್ಬಾನಿಯ ಬಳಿಕ ದೊರಕುವ ಮಾಂಸದಲ್ಲಿ ಮೂರು ಪಾಲು ಮಾಡಲಾಗುತ್ತದೆ. ಒಂದು ಪಾಲು ಬಡವರಿಗೆ, ಇನ್ನೊಂದು ಸಂಬಂಧಿಕರಿಗೆ ಮತ್ತು ಮೂರನೆಯ ಪಾಲನ್ನು ಸ್ವಂತಕ್ಕಾಗಿ ಎಂದು ವಿಂಗಡಿಸಲಾಗುತ್ತದೆ. ಕುರ್ಬಾನಿ ಮಾಡಲು ಅನುಕೂಲತೆ ಇಲ್ಲದವರು ಅಥವಾ ಊರಿನಿಂದ ದೂರವಿರುವ ಅಥವಾ ಬೇರಾವುದೋ ಕಾರಣದಿಂದ ನೀಡಲು ಸಾಧ್ಯವಾಗದಿರುವವರು ಇದೇ ಕಾರ್ಯಕ್ಕಾಗಿ ನಿಯೋಜಿಸಿರುವ ಸಂಸ್ಥೆಗಳಿಗೆ ದಾನದ ರೂಪದಲ್ಲಿ ಹಣ ನೀಡಬಹುದು. ಹಣ ನೀಡುವುದರಿಂದ ದೇಶದ ಬಡಜನತೆ ಪೌಷ್ಠಿಕವಾದ ಆಹಾರವನ್ನು ಪಡೆಯಲು ಸಾಧ್ಯವಾಗುತ್ತದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv