ಉಡುಪಿ: ಜಿಲ್ಲೆಯಲ್ಲಿ ನಡೆಯುತ್ತಿರುವುದು ಮುಸಲ್ಮಾನರಿಗೆ ಆರ್ಥಿಕ ನಿಷೇಧ ಚಟುವಟಿಕೆ ಅಲ್ಲ. ಗೋವು ಹಂತಕರು, ಹಲಾಲ್ ವ್ಯಾಪಾರಿಗಳಿಗೆ ಹಿಂದೂ ಶ್ರದ್ಧಾ ಕೇಂದ್ರದಲ್ಲಿ ಏನು ಕೆಲಸ? ಹೈಕೋರ್ಟ್ ತೀರ್ಪನ್ನು ಉಲ್ಲಂಘಿಸಿದವರಿಗೆ ಹಿಂದೂ ಸಮಾಜ ಕೊಡುತ್ತಿರುವ ಉತ್ತರ ಎಂದು ವಿಶ್ವ ಹಿಂದೂ ಪರಿಷತ್ ಭಜರಂಗದಳ ಗುಡುಗಿದೆ.
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಭಜರಂಗದಳ ಪ್ರಾಂತ ಸಂಚಾಲಕ ಸುನೀಲ್ ಕೆ. ಆರ್, ದೇಶದಲ್ಲಿ ಸಂವಿಧಾನ ಪ್ರಜಾಪ್ರಭುತ್ವ ಇದೆಯೋ ಇಲ್ಲವೋ? ಹೈಕೋರ್ಟ್ನ್ನು, ಮೂವರು ನ್ಯಾಯಮೂರ್ತಿಗಳ ತೀರ್ಪನ್ನು ಪ್ರಶ್ನೆ ಮಾಡಿದ್ದಕ್ಕೆ ಸಮಸ್ತ ಹಿಂದೂ ಸಮಾಜ ಜಾಗೃತವಾಗಿದೆ. ನೆಲದ ಕಾನೂನಿಗೆ ಗೌರವ ಕೊಡದಿರುವುದನ್ನು ಯಾರು ಸಹಿಸಲು ಸಾಧ್ಯವಿಲ್ಲ. ಹಿಂದೂ ಸಂಘಟನೆಗಳು ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದೆ. ಧರ್ಮ ಮತ್ತು ಸಮಾಜದ ರಕ್ಷಣೆಯನ್ನು ಮಾಡಲು ಮುಂದಾಗಿದೆ ಎಂದರು. ಇದನ್ನೂ ಓದಿ: ಬಪ್ಪನಾಡಿನಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ – ಸಾಮರಸ್ಯ ಎತ್ತಿಹಿಡಿದ ಕ್ಷೇತ್ರದ ಆಡಳಿತ ಮಂಡಳಿ
ಧಾರ್ಮಿಕ ದತ್ತಿ ಇಲಾಖೆಯ ನಿಯಮದಲ್ಲಿ ಉಲ್ಲೇಖ ಇದೆ. ಇದನ್ನು ಹಿಂದೂ ಸಮಾಜ ಜಾರಿಗೆ ತರಲು ಹೊರಟಿದೆ. ಹಲವಾರು ದೇವಸ್ಥಾನದ ಸಮಿತಿಗಳು ಧಾರ್ಮಿಕ ದತ್ತಿ ಇಲಾಖೆಯ ನಿಯಮವನ್ನು ಒಪ್ಪಿಕೊಂಡಿವೆ. ಗೋವಿನ ಮಾಂಸ ತಿಂದವರು ನಮ್ಮ ಶ್ರದ್ಧಾ ಕೇಂದ್ರದಲ್ಲಿ ವ್ಯಾಪಾರ ಮಾಡುತ್ತೇವೆ ಎಂದು ನಾವು ಕೇಳಲು ತಯಾರಿಲ್ಲ. ಇಸ್ಲಾಂ ತತ್ವದಲ್ಲಿ ನಂಬಿಕೆ ಇದ್ದವರು, ಗೋವು ಮಾಂಸ ತಿನ್ನುವವರಿಗೆ ಹಿಂದೂ ಶ್ರದ್ಧಾ ಕೇಂದ್ರದಲ್ಲಿ ಏನಿದೆ ಕೆಲಸ ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಮುಸ್ಲಿಮ್ ವ್ಯಾಪಾರಿಗಳಿಗೆ ನಿರ್ಬಂಧದ ಬ್ಯಾನರ್ ಹಾಕಿದವರು ಹೇಡಿಗಳು: ಖಾದರ್
ಮುಸಲ್ಮಾನರು ಹಲವಾರು ವರ್ಷದಿಂದ ಹಲಾಲ್ನ ಮೂಲಕ ವ್ಯವಹಾರದ ಕ್ರೋಡೀಕರಣ ನಡೆಸುತ್ತಿದ್ದಾರೆ. ಹಲಾಲ್ ವಿಚಾರದಲ್ಲಿ ಮುಸಲ್ಮಾನ ವ್ಯಾಪಾರವನ್ನು ಕ್ರೋಡೀಕರಣ ಮಾಡಲಾಗುತ್ತಿದೆ. ಇದು ಸರಿಯಾ ಎಂದು ಪ್ರಶ್ನೆ ಮಾಡಿದರು. ಹಿಂದೂಗಳಲ್ಲಿ ಬಡ ವ್ಯಾಪಾರಿಗಳು ಇಲ್ಲವೇ ಅವರು ವ್ಯಾಪಾರ ಮಾಡಲಿ. ಅವರ ಕಷ್ಟ ಪರಿಹಾರವಾಗಲಿ. ಹಿಂದೂ ಸಮಾಜ ಮೊಗವೀರ ಸಮಾಜಕ್ಕೆ ಬಹಿಷ್ಕಾರ ಹಾಕಿದಾಗ ಸಿದ್ದರಾಮಯ್ಯ ಎಲ್ಲಿ ಹೋಗಿದ್ದರು?
ಕಾಪುವಿನ ಬಗ್ಗೆ ಪ್ರಶ್ನೆ ಮಾಡಿದವರು ಗಂಗೊಳ್ಳಿಯ ಬಗ್ಗೆ ಯಾಕೆ ಪ್ರಶ್ನೆ ಮಾಡಿಲ್ಲ. ಮುಸಲ್ಮಾನರಿಗೆ ನೋವಾದರೆ ಮಾತ್ರ ನಿಮಗೆ ನೋವಾಗುವುದಾ? ಹಿಂದೂ ಸಮಾಜವನ್ನು ಯಾಕೆ ಟಾರ್ಗೆಟ್ ಮಾಡುತ್ತೀರಿ? ಕರಾವಳಿ ಬುದ್ಧಿವಂತರ ನಾಡು ಇಲ್ಲಿ ಸಂಘರ್ಷಕ್ಕೆ ದಾರಿ ಇಲ್ಲ. ಭಾರತದ ಮಣ್ಣಿನ ಗುಣ, ಕಾನೂನು ಮತ್ತು ಹಿಂದುತ್ವವನ್ನು ಒಪ್ಪಿಕೊಂಡು ಬಂದರೆ ಎಲ್ಲದಕ್ಕೂ ಪರಿಹಾರ ಇದೆ ಎಂದು ಭಜರಂಗದಳ ಹೇಳಿದೆ.