ಭೋಪಾಲ್: ಸಮಾಜದಲ್ಲಿ ಹೆಣ್ಣುಮಕ್ಕಳಿಗೆ ಸುರಕ್ಷಿತೆ ಇಲ್ಲದ ಕಾರಣ ಇಲ್ಲಿ ದಂಪತಿಯೊಬ್ಬರು ಮಗು ಹೆರುವುದೇ ಬೇಡವೆಂದು ದೃಢನಿರ್ಧಾರ ತೆಗೆದುಕೊಂಡಿದ್ದಾರೆ.
ಮಧ್ಯಪ್ರದೇಶದ ಮಂಡಸೌರ್ ಎಂಬಲ್ಲಿ 7 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಈ ಸುದ್ದಿಯನ್ನು ಕೇಳಿ ಭಯಗ್ರಸ್ಥರಾಗಿರುವ ಸುಭಾಷ್ ಚಂದ್ರ ಕಶ್ಯಪ್ ಹಾಗೂ ಅವರ ಪತ್ನಿ ತಾವು ಮಕ್ಕಳನ್ನೇ ಹೆರುವುದು ಬೇಡವೆಂಬ ಕಠಿಣ ನಿರ್ಧಾರಕ್ಕೆ ಬಂದಿದ್ದಾರೆ.
ಸುಭಾಷ್ ಭಾರತೀಯ ಸೇನೆಯಲ್ಲಿ 15 ವರ್ಷ ಸೇವೆ ಸಲ್ಲಿಸಿದ್ದಾರೆ. ಆದರೆ ಈ ದಂಪತಿ ತಮಗೆ ಹೆಣ್ಣು ಮಗು ಆದರೆ ಆ ಮಗುವಿನ ಸುರಕ್ಷತೆ ಹೇಗೆ ಎಂಬ ಚಿಂತೆ ಅವರನ್ನು ಕಾಡುತ್ತಿದೆ. ಸುತ್ತಮುತ್ತಲೂ ನಡೆಯುತ್ತಿರುವ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ಸಂಪೂರ್ಣವಾಗಿ ನಿಲ್ಲುವವರೆಗೂ ಹಾಗೂ ಈ ಕುರಿತಂತೆ ಸರ್ಕಾರ ಜನರಿಗೆ ಅಭಯ ಕೊಡುವವರೆಗೂ ನಮಗೆ ಮಕ್ಕಳೇ ಬೇಡ ಎಂದು ದಂಪತಿ ಹೇಳಿದ್ದಾರೆ.
ಇನ್ನು ರಾಷ್ಟ್ರಮಟ್ಟದ ಶೂಟರ್ ಆಗಿರುವ ಸುಭಾಷ್ ಚಂದ್ರ ಅವರು ಕೇಂದ್ರ ಕ್ರೀಡಾ ಸಚಿವರಾಗಿರುವ ರಾಜವರ್ಧನ್ ಸಿಂಗ್ ರಾಥೋಡ್ರ ಶಿಷ್ಯರಾಗಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ವಿವಾಹವಾಗಿರುವ ಈ ದಂಪತಿ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ಪ್ರತಿಭಟನೆ ಕೈಗೊಂಡಿದ್ದಾರೆ. ಈ ಕುರಿತಂತೆ ಪತ್ರ ಬರೆದಿರುವ ದಂಪತಿ ಜಿಲ್ಲಾಡಳಿತ ಮೂಲಕ ರಾಷ್ಟ್ರಪತಿ ರಾಮನಾಥ ಕೋವಿಂದ್ ರವರಿಗೆ ಈ ಕುರಿತು ಮನವಿ ಮಾಡಿದ್ದಾರೆ.