ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ಪಟ್ಟಣ ಹೊರವಲಯದ ಪಾತಬಾಗೇಪಲ್ಲಿ ಬಳಿಯ ನಿರ್ಜನ ಪ್ರದೇಶದಲ್ಲಿ ಹುಡುಗಿ ಮೇಲೆ ಮೂವರು ಕಾಮುಕರು ಅತ್ಯಾಚಾರ ನಡೆಸಲು ಯತ್ನಿಸಿರುವ ಘಟನೆ ನಡೆದಿದೆ.
ಸೋಮವಾರ ಎಸ್ಎಸ್ಎಲ್ಸಿ ಪರೀಕ್ಷೆ ಮುಗಿಸಿದ ವಿದ್ಯಾರ್ಥಿನಿ ತನ್ನ ಪ್ರಿಯಕರನ ಜೊತೆ ಪಾತಬಾಗೇಪಲ್ಲಿ ಬಳಿಯ ನಿರ್ಜನ ಪ್ರದೇಶದ ಬೆಟ್ಟಗುಡ್ಡಗಳತ್ತ ತೆರಳಿದ್ದಳು. ಇನ್ನೂ ಪ್ರಿಯಕರ ನಾರಾಯಣಸ್ವಾಮಿ ತನ್ನ ಸ್ನೇಹಿತ ಮಂಜು ಜೊತೆ ಬೈಕ್ನಲ್ಲಿ ಡ್ರಾಪ್ ಪಡೆದುಕೊಂಡಿದ್ದ. ಇತ್ತ ಹುಡುಗಿ ಹಾಗೂ ಪ್ರಿಯಕರ ನಿರ್ಜನ ಪ್ರದೇಶದಲ್ಲಿ ಸರಸ ಸಲ್ಲಾಪದಲ್ಲಿ ತೊಡಗಿದ್ದಾಗ ಪ್ರಿಯಕರನ ಸ್ನೇಹಿತ ಮಂಜು ಹಾಗೂ ಅಲ್ಲಿಯೇ ಮದ್ಯಪಾನದಲ್ಲಿ ತೊಡಗಿದ್ದ ನಾಗರಾಜು, ಸುರೇಶ್ ಸೇರಿ ಪ್ರೇಮಿಗಳ ಸರಸ ಸಲ್ಲಾಪದ ವೀಡಿಯೋ ರೆಕಾರ್ಡ್ ಮಾಡಿಕೊಂಡು ತಮಗೂ ಸಹಕರಿಸುವಂತೆ ಒತ್ತಡ ಹೇರಿ ಬ್ಲಾಕ್ ಮೇಲ್ ಮಾಡಿದ್ದಾರೆ. ಈ ವೇಳೆ ನಾರಾಯಣಸ್ವಾಮಿ ಅಲ್ಲಿಂದ ಓಡಿ ಬಂದು ಸ್ಥಳೀಯರಿಗೆ ವಿಷಯ ತಿಳಿಸಿದ್ದಾನೆ.
ಕೂಡಲೇ ಸ್ಥಳೀಯರೆಲ್ಲಾ ಬೆಟ್ಟದ ಕಡೆಗೆ ಹೋಗಿ ಹುಡುಗಿಯನ್ನು ರಕ್ಷಣೆ ಮಾಡಿ ಮೂವರು ಯುವಕರನ್ನು ಹಿಡಿದಿದ್ದಾರೆ. ನಂತರ ಹುಡುಗಿ, ನಾರಾಯಣಸ್ವಾಮಿ ಸೇರಿದಂತೆ ಮೂವರು ಯುವಕರನ್ನು ಬಾಗೇಪಲ್ಲಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಭಾರತ ಶೀಘ್ರದಲ್ಲೇ ಹಿಂದೂ ರಾಷ್ಟ್ರವಾಗಲಿದೆ ಎಂದಿದ್ದ ಬಿಜೆಪಿ MLA ವಿರುದ್ಧ ದೂರು ದಾಖಲು
ಸದ್ಯ ಹುಡುಗಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿಯ ಬಾಲಕಿಯರ ಬಾಲಮಂದಿರದಲ್ಲಿ ರಕ್ಷಣೆ ನೀಡಲಾಗಿದೆ. ನಾರಾಯಣಸ್ವಾಮಿ ಹಾಗೂ ಲೈಂಗಿಕ ದೌರ್ಜನ್ಯ ಎಸಗಿದ ಮೂವರು ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ಚಿಕ್ಕಬಳ್ಳಾಪುರ ನಗರ ಠಾಣೆಗೆ ಕರೆತಂದಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. 2 ವರ್ಷಗಳಿಂದ ಹುಡುಗಿ ಹಾಗೂ ನಾರಾಯಣಸ್ವಾಮಿ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಎಸ್ಎಸ್ಎಲ್ಸಿಯಲ್ಲಿ ಅನುತ್ತೀರ್ಣಳಾದ ನಂತರ ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದ್ದ ಹುಡುಗಿ ಸೋಮವಾರ ಖಾಸಗಿ ಅಭ್ಯರ್ಥಿಯಾಗಿ ಪರೀಕ್ಷೆ ಎದುರಿಸಲು ಬಾಗೇಪಲ್ಲಿಗೆ ಬಂದಿದ್ದಳು. ಪರೀಕ್ಷೆ ಮುಗಿದ ನಂತರ ಪ್ರಿಯಕರನನ್ನು ಭೇಟಿ ಮಾಡಿದ್ದಳು. ಇದನ್ನೂ ಓದಿ: ಧರ್ಮದಂಗಲ್ ಅಭಿಯಾನಕ್ಕೆ ರೋಡ್ ಸೇರ್ಪಡೆ- ಮುಸ್ಲಿಂ ಹೆಸರುಳ್ಳ ರಸ್ತೆಗಳನ್ನು ಬದಲಿಸಲು ಆಗ್ರಹ