ಬೆಂಗಳೂರು/ಚಿಕ್ಕಬಳ್ಳಾಪುರ: ಬಾಗೇಪಲ್ಲಿಯ (Bagepalli) ಕಾಂಗ್ರೆಸ್ (Congress) ವಿಜಯಿ ಅಭ್ಯರ್ಥಿ ಸುಬ್ಬಾರೆಡ್ಡಿಯವರ (Subbareddy) ಶಾಸಕ ಸ್ಥಾನ ಅಸಿಂಧುಗೊಳಿಸಿ ಹೈಕೋರ್ಟ್ (High Court) ಮಹತ್ವದ ಆದೇಶ ಪ್ರಕಟಿಸಿದೆ.
ನಾಮಪತ್ರ ಸಲ್ಲಿಕೆ ವೇಳೆ ಸಂಪೂರ್ಣ ಆಸ್ತಿ ಘೋಷಣೆ ಮಾಡಿಲ್ಲ, ಕ್ರಿಮಿನಲ್ ಕೇಸ್ಗಳ ಮಾಹಿತಿಯನ್ನು ಮರೆಮಾಚಿದ್ದಾರೆ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಮುನಿರಾಜು ಅವರು 2023 ಜೂನ್ 24ರಂದು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಆಸ್ತಿ ಮಾಹಿತಿಯನ್ನು ಉಲ್ಲಂಘನೆ ಮಾಡಿದ್ದು ದೃಢಪಟ್ಟ ಹಿನ್ನೆಲೆಯಲ್ಲಿ ಸುಬ್ಬಾರೆಡ್ಡಿ ಶಾಸಕ ಸ್ಥಾನವನ್ನು ಹೈಕೋರ್ಟ್ ಅಸಿಂಧುಗೊಳಿಸಿದೆ.

ಒಂದು ತಿಂಗಳ ಕಾಲ ಆದೇಶ ಅಮಾನತಿನಲ್ಲಿಡಲು ಸುಬ್ಬಾರೆಡ್ಡಿ ಪರ ವಕೀಲರು ಮನವಿ ಮಾಡಿದರು. ಆದರೆ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಅಲ್ಲದೇ ಮುನಿರಾಜು ಅವರು ವಿಜಯಿ ಎಂದು ಘೋಷಿಸಲು ಮನವಿ ಮಾಡಿದ್ದರು. ಈ ಮನವಿಯನ್ನು ಸಹ ಕೋರ್ಟ್ ತಿರಸ್ಕರಿಸಿದೆ.
ಚುನಾವಣಾ ಆಯೋಗಕ್ಕೆ ಮರುಚುನಾವಣೆ ಮಾಡುವ ಅಧಿಕಾರ ಇದೆ ಎಂದು ಇದೇ ವೇಳೆ ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

