ಬಾಗಲಕೋಟೆ: ಸಮ್ಮಿಶ್ರ ಸರ್ಕಾರದ ಕೆಲಸ ಎಲ್ಲ ಮುಗಿದಿದೆ, ಅದರ ಬಗ್ಗೆ ಯಾಕೆ ಕೇಳುತ್ತಿರಿ. ಕಾಂಗ್ರೆಸ್ನಿಂದ ಯಾವುದೇ ರಿವರ್ಸ್ ಆಪರೇಷನ್ನೂ ಇಲ್ಲ, ಯಾವ ಮಣ್ಣೂ ಇಲ್ಲ ಎಂದು ಬಿಜೆಪಿ ಶಾಸಕ ವೀರಣ್ಣ ಚರಂತಿಮಠ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರ ಬಿದ್ದು ಹೋಗುತ್ತೆ ಅನ್ನೋ ನಿರೀಕ್ಷೆ ಇದೆ. ಬಿಜೆಪಿ ಪಕ್ಷದಿಂದ ಯಾವುದೇ ಅತೃಪ್ತರನ್ನು ನಾವು ಟಚ್ ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಶಾಸಕ ಬಸವರಾಜ್ ದಡೇಸ್ಗೂರು ಹೆಸರು ರಿವರ್ಸ್ ಆಪರೇಶನ್ನಲ್ಲಿ ಕೇಳಿಬಂದಿತ್ತು. ಆದರೆ ಅವರು ತನ್ನ ಕ್ಷೇತ್ರದ ಅಭಿವೃದ್ಧಿಗಾಗಿ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಜೊತೆ ಹೋಗಿದ್ದಾರೆ ಅಷ್ಟೇ. ಅವನು ಬಿಜೆಪಿ ಪಕ್ಷ ಬಿಟ್ಟು ಹೋಗಲ್ಲ. ಬೈರತಿ ಬಸವರಾಜ್, ಮುನಿರತ್ನ, ಎಸ್.ಟಿ ಸೋಮಶೇಖರ್ ಇವರೆಲ್ಲ ಸಿದ್ದರಾಮಯ್ಯ ಅವರ ಶಿಷ್ಯರು. ಈಗ ಅವರೇ ಬಡಿದಾಡ್ತಿದ್ದಾರೆ, ಅವರ ಅವರ ಮಧ್ಯೆಯೇ ಬೆಂಕಿ ಹತ್ತಿದೆ ಎಂದು ಹೇಳಿದರು.
ಸಮ್ಮಿಶ್ರ ಸರ್ಕಾರ ನೆಗೆದು ಬೀಳುತ್ತದೆ. ಅವರು ನಗೆದುಬಿದ್ದರೆ 105 ಸಂಖ್ಯೆ ಇರುವ ನಾವು ಏಕೆ ಅಧಿಕಾರಕ್ಕೆ ಬರಬಾರದು. ಬಹುಮತಕ್ಕೆ ಇನ್ನೂ ಎಂಟು ಜನ ಶಾಸಕರ ಅವಶ್ಯಕತೆ ಇದೆ. ರಾಜ್ಯದಲ್ಲಿ ನಾವು ಅಭಿವೃದ್ಧಿ ಹರಿಕಾರರು ಎಂದು ಜನ ಬಹಳ ಅಂತರದಿಂದ ನಮ್ಮನ್ನು ಗೆಲ್ಲಿಸಿದ್ದಾರೆ. ಒಂದು ವರ್ಷವಾದರೂ ಯಾವುದೇ ಅಭಿವೃದ್ಧಿ ಕಾಮಗಾರಿ ಆಗಿಲ್ಲ. ಹೀಗಾಗಿ ಮೊದಲು ನಮಗೆ ನಮ್ಮ ಸರ್ಕಾರ ಬರಬೇಕಿದೆ ಎಂದು ತಿಳಿಸಿದರು.
ಶಾಸಕರ ರಾಜೀನಾಮೆ ಹಿಂದೆ ರಾಜ್ಯಪಾಲರ ಕುಮ್ಮಕ್ಕಿದೆ ಎಂಬ ಡಿಸಿಎಂ ಪರಮೇಶ್ವರ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ಇವರ ಹಿಂದಿನ ರಾಜ್ಯಪಾಲ ಹಂಸರಾಜ್ ಭಾರದ್ವಜ್ ರಂತೆ ಅಲ್ಲ, ಇವರು ವಜುಭಾಯ್ ವಾಲಾ, ಅತ್ಯಂತ ಡೀಸೆಂಟ್ ವ್ಯಕ್ತಿ. ಶಾಸಕರ ರಾಜೀನಾಮೆ ಹಿಂದೆ ರಾಜ್ಯಪಾಲರ ಕುಮ್ಮಕ್ಕಿಲ್ಲ. ರಾಜೀನಾಮೆ ಕೊಟ್ಟ ಶಾಸಕರು ಭದ್ರತೆ ಕೇಳಿದ್ದಾರೆ. ಭದ್ರತೆ ನೀಡಿದ್ದಾರೆ ಅಷ್ಟೇ ಎಂದು ಹೇಳಿದರು.