ಬಾಗಲಕೋಟೆ: ಪಾಪ ಬಾದಾಮಿ ಜನ ಮುಗ್ಧರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನ ಹಣೆಬರಹ ಗೊತ್ತಿಲ್ಲದೆ ಗೆಲ್ಲಿಸಿದರು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರಗರೊಂದಿಗೆ ಮಾತನಾಡಿದ ಅವರು, ಸೋಲಿನ ಬಗ್ಗೆ ಸಿದ್ದರಾಮಯ್ಯ ಹೇಳಿದ್ದನ್ನು ನಾನು ಅನುಮೋದನೆ ಮಾಡುತ್ತೇನೆ. ರಾಜ್ಯದಲ್ಲಿ ಜನ ನೀವೇನೂ ಕೆಲಸ ಮಾಡಿಲ್ಲ ನಿದ್ದೆ ಮಾಡಿ ಎಂದು ಮನೆಗೆ ಕಳಿಸಿದ್ದಾರೆ. ಪ್ರಧಾನಿ ಮೋದಿ ಅವರು ಕೆಲಸಗಾರ ಎಂದು ವೋಟ್ ಹಾಕಿದ್ದಾರೆ ಎಂದು ಟಾಂಗ್ ನೀಡಿದರು.
ಜನ ಸಿದ್ದರಾಮಯ್ಯ ಎಂದು ಕರೆಯೋದಿಲ್ಲ ನಿದ್ರಾಮಯ್ಯ ಎಂದೇ ಕರೆಯುತ್ತಾರೆ. ನೀವು ಕೆಲಸ ಮಾಡಲಿಲ್ಲ ನಿದ್ದೆ ಮಾಡುತ್ತೀರಿ ಅದಕ್ಕೆ ನಿಮ್ಮನ್ನು ನಿದ್ದೆ ಮಾಡಲು ಕಳಿಸಿದ್ದಾರೆ. ಬಿಜೆಪಿ ಕೋಮುವಾದಿ ಪಕ್ಷ ಎಂದು ಹೇಳಿಕೊಂಡು ಜೆಡಿಎಸ್, ನೀವೂ ಒಂದಾದ್ರಿ. ಅಂಬೇಡ್ಕರ್ ಅವರನ್ನೇ ಕಾಂಗ್ರೆಸ್ನವರು ಎರಡು ಬಾರಿ ಸೋಲಿಸಿದ್ರು. ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪನವರನ್ನು ಬಿಡುತ್ತೀರಾ ಎಂದು ದೇವೇಗೌಡರೇ ಹೇಳಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಮೈತ್ರಿ ಬಗ್ಗೆ ಸಿದ್ದರಾಮಯ್ಯ, ದೇವೇಗೌಡ ಮತ್ತು ಕಾಂಗ್ರೆಸ್ ಶಾಸಕರಲ್ಲೇ ಭಿನ್ನಮತವಿದೆ ಎಂದು ಹೇಳಿದರು.
ಮೋದಿ ದೇಶದಲ್ಲಿ ಭಯೋತ್ಪಾದಕರ ಅಟ್ಟಹಾಸ ಮಟ್ಟ ಹಾಕಿದ್ದಾರೆ. ದೇಶದ ಬಗ್ಗೆ ಅನೇಕ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಆದರೆ ಸಿದ್ದರಾಮಯ್ಯ ಕೆಲಸ ಮಾಡದೆ ಇರೋರಿಗೆ ವೋಟ್ ಹಾಕುತ್ತಿರಾ ಎನ್ನುತ್ತಾರೆ. ಸಿದ್ದರಾಮಯ್ಯ ಮೋದಿಯ ಬಗ್ಗೆ ಅಹಂಕಾರದ ಮಾತುಗಳನ್ನಾಡಿದರು. ಅದಕ್ಕೆ ಜನ ಬಿಜೆಪಿಗೆ ಬಹುಮತ ನೀಡಿದರು. ನಾನು ಮೊಟ್ಟೆ, ಅಕ್ಕಿ, ಶೂ ಕೊಟ್ಟೆ ಎಂದು ಹೇಳುತ್ತಾರೆ. ಆದರೆ ಜನ ಶೂ ಕೈಯಲ್ಲಿ ಹಿಡಿದು ಹೊಡೆದರು ಎಂದು ನಾ ಹೇಳಲ್ಲ ಎಂದು ತಿರುಗೇಟು ನೀಡಿದರು.
ಸಿದ್ದರಾಮಯ್ಯ ಇವೆಲ್ಲವನ್ನು ಅವರ ಜೇಬಿನ ಹಣದಿಂದ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದ ಅವರು, ಜನರ ತೆರಿಗೆ ಹಣದಿಂದ ಕೊಟ್ಟಿದ್ದಾರೆ. ಮೋದಿ ಕೂಡ ಜೇಬಿನಿಂದ ಕೊಡುತ್ತಿಲ್ಲ. ಅಕ್ಕಿ ಕೊಟ್ಟು ಬಾಯಿಗೆ ಬಂದ ಹಾಗೆ ಮಾತನಾಡಿದಕ್ಕೆ ಜನ ಇವರಿಗೆ ತಕ್ಕ ಪಾಠ ಕಲಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಒಂದು ನಾಮ ಜೆಡಿಎಸ್ಗೆ ಒಂದು ನಾಮ ನಿಮಗೊಂದು ನಾಮ ಹಾಕಿದ್ದಾರೆ. ರಾಜ್ಯದಲ್ಲಿ ಯಾವುದೇ ಸಂದರ್ಭದಲ್ಲಿ ಚುನಾವಣೆ ಬಂದರೂ ನಾವು ತೊಡೆ ತಟ್ಟಿ ಸಿದ್ಧರಾಗಿದ್ದೇವೆ ಎಂದು ಹೇಳಿದರು.
ರಾಜ್ಯದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಬರೋದಕ್ಕೆ ಯಾರು ಕಾರಣ. ಅವರ ಜೊತೆ ಯಾರು ಸಂಪರ್ಕ ಹೊಂದಿದ್ದರು. ಸ್ವಾತಂತ್ರ್ಯ ಪೂರ್ವ ಹಾಗೂ ನಂತರ ಯಾರು ಅವರ ಜೊತೆ ಸಂಬಂಧ ಇಟ್ಟುಕೊಂಡಿದ್ದಾರೆ. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಜೊತೆ ಸಂಬಂಧ ಇಟ್ಟುಕೊಂಡಿದ್ದೋರು ಒಂದಿಬ್ಬರು ಇದ್ದಾರೆ. ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕೆಂದು ಅವರ ಸೆರಗು ಹಿಡಿದುಕೊಂಡು ಓಡಾಡುತ್ತಿದ್ದಾರೆ. ಸಿದ್ದರಾಮಯ್ಯನವರೇ ಮೋದಿಯನ್ನು ಎಷ್ಟು ಟೀಕೆ ಮಾಡುತ್ತಿರೋ ಮಾಡಿ. ಜನ ನಿಮ್ಮನ್ನು ಎಲ್ಲಿ ಇಡಬೇಕೋ ಅಲ್ಲಿಟ್ಟಿದ್ದಾರೆ ಎಂದು ಕಿಡಿಕಾರಿದರು.
ಮುಖ್ಯಮಂತ್ರಿ ಅವರು ವಿದೇಶ ಪ್ರವಾಸ ವಿಚಾರ ಕೇಳಿದಾಗ ಸಿಎಂ ಶಾಲೆಗಳಲ್ಲಿ ವಾಸ್ತವ್ಯ ಮಾಡಿದ್ದನ್ನು ನಾನು ಸ್ವಾಗತಿಸಿದ್ದೇನೆ. ಇಡೀ ರಾಜ್ಯದಲ್ಲಿನ ಶಾಲೆ ಕಟ್ಟಡಗಳನ್ನು ಸರಿಪಡಿಸಲಿ ಅಭಿವೃದ್ಧಿ ಪಡಿಸಲಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.