‘ಗಾಂಧೀಜಿ ತಪ್ಪಿನಿಂದ ಅಯೋಗ್ಯ ನೆಹರು ಪ್ರಧಾನಿಯಾದ’- ಮತ್ತೆ ವಿವಾದದಲ್ಲಿ ಯತ್ನಾಳ್

Public TV
2 Min Read
BJP Yatnal

ಬಾಗಲಕೋಟೆ: ವಲ್ಲಬಾಯಿ ಪಟೇಲ್ ಅವರಿಗೆ ಅಂದು ಬಹುಮತವಿತ್ತು. ಆದರೂ ಮಹಾತ್ಮ ಗಾಂಧಿ ನೆಹರು ಅವರನ್ನು ಪ್ರಧಾನಿಯನ್ನಾಗಿ ಮಾಡಿದರು. ಮಹಾತ್ಮ ಗಾಂಧಿ ಮಾಡಿದ ದೊಡ್ಡ ತಪ್ಪಿನಿಂದ ಒಬ್ಬ ಅಯೋಗ್ಯ ಪ್ರಧಾನಿಯಾದ ಎಂದು ಶಾಸಕ ಬಸನಗೌಡ ಪಾಟಿಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಇಂದು ಬಾಗಲಕೋಟೆ ಜಿಲ್ಲೆ ತೇರದಾಳದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಾಂಧೀಜಿ ಅವರ ತಪ್ಪಿನಿಂದ ವಿಲಾಸಿ ಜೀವನ ಮಾಡುತ್ತಿದ್ದ ನೆಹರು ಪ್ರಧಾನಿಯಾದ. ಅವನಿಗೆ ಸಿಗರೇಟ್ ಲಂಡನ್‍ನಿಂದ ಬರುತ್ತಿತ್ತು. ಬಟ್ಟೆ ದೋಬಿಗೆ (ಕ್ಲೀನಿಂಗ್) ಲಂಡನ್‍ಗೆ ಹೋಗುತ್ತಿದ್ದವು. ಇವರು ಬಡವರ ಬಗ್ಗೆ ಮಾತನಾಡುತ್ತಾರೆ. ಲಾಲ್ ಬಹದ್ದೂರ್ ಶಾಸ್ತ್ರಿ, ಸುಭಾಷ್ ಚಂದ್ರ ಬೋಸ್ ಹೇಗೆ ಸತ್ತರು ಇಂದಿಗೂ ಯಾರೂ ಹೇಳುತ್ತಿಲ್ಲ ಎಂದು ಏಕವಚನದಲ್ಲಿಯೇ ವಾಗ್ದಾಳಿ ಮಾಡಿದರು.

Nehru 5ceb5f469911c

ಸದ್ಯ ಎಲ್ಲಿಯಾದರೂ ಕಾಶ್ಮೀರದಲ್ಲಿ ಗುಂಡು, ಬಾಂಬ್ ಹಾರಿದ್ದು ಕೇಳಿದ್ದೀರಾ? ಭಯೋತ್ಪಾದಕರ ಕಾಟ ಎಲ್ಲ ಬಂದ್ ಆಗಿದೆ. ನಮ್ಮ ರಾಜಕಾರಣಿಗಳೇ ಸೈನಿಕರ ಬಗ್ಗೆ ಪೊಲೀಸರ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ. ತಿನ್ನೋಕೆ ಕೂಳಿಲ್ಲದವರು ಸೈನ್ಯಕ್ಕೆ ಸೇರುತ್ತಾರೆ ಎಂದು ಒಬ್ಬ ನಮ್ಮ ಅಯೋಗ್ಯ ರಾಜಕಾರಣಿ ಹೇಳುತ್ತಾನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟ ಯತ್ನಾಳ್, ಸಿಎಎಯಿಂದ ಭಾರತೀಯ ಮುಸಲ್ಮಾನರಿಗೆ ಯಾವುದೇ ತೊಂದರೆಯಿಲ್ಲ. ಖುರ್ಚಿಗಾಗಿ ರಾಜಕಾರಣ ಮಾಡುವವರಿಗೆ ಇದು ತೊಂದರೆಯಾಗಿದೆ ಎಂದು ಹೇಳಿದರು.

gandhiji

ರೋಹಿಂಗ್ಯಾ ಜನಾಂಗ ನಮ್ಮ ದೇಶದಲ್ಲೇನಿದೆ ಅದು ಬಹಳ ಮಾರಕ. ರೋಹಿಂಗ್ಯಾ ಪರವಾಗಿ ಕಪಿಲ್ ಸಿಬಲ್‍ನಂತವರು ವಾದ ಮಾಡುತ್ತಾರೆ. ಮಂಗಳೂರಿನಲ್ಲಿ ಸತ್ತವರಿಗೆ ಮಮತಾ ಬ್ಯಾನರ್ಜಿ ಐದು ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾಳೆ. ಅಕೆಗೂ ನಮ್ಮ ಕರ್ನಾಟಕದ ಹುಡುಗನಿಗೂ ಏನು ಸಂಬಂಧ. ಕೋಲ್ಕತ್ತಾ ಜನರ ವೋಟ್‍ಗಾಗಿ ನಮ್ಮ ರಾಜ್ಯದವರಿಗೆ ಪರಿಹಾರ ಘೋಷಣೆ ಮಾಡಿದ್ದಾಳೆ ಎಂದು ಮಮತಾ ಬ್ಯಾನರ್ಜಿ ಮೇಲೆಯೂ ಏಕವಚನದಲ್ಲೇ ದಾಳಿ ಮಾಡಿದರು.

siddaramaiah 1

ಇದೇ ಸಮಯದಲ್ಲಿ ಸಿದ್ದರಾಮಯ್ಯನ ವಿರುದ್ಧ ಗುಡುಗಿದ ಯತ್ನಾಳ್, ಸಿದ್ದರಾಮಯ್ಯ ಪ್ರಾಣ ಹೋದರೂ ಪರವಾಗಿಲ್ಲ ಮಂಗಳೂರಿಗೆ ಹೋಗುತ್ತೇನೆ ಅಂದ. ಪ್ರವಾಹ ಬಂದಾಗ ಬಾದಾಮಿಗೆ ಬರಬೇಕಿತ್ತು ಎಲ್ಲಿ ಮಲಗಿದ್ದೆ ಎಂದು ಮಾಜಿ ಸಿಎಂ ಸಿದ್ದುಗೆ ಏಕವಚನದಲ್ಲಿ ಪ್ರಹಾರ ಮಾಡಿದರು. ಪ್ರವಾಹವಾದಾಗ ಕಣ್ಣು ಆಪರೇಷನ್ ಆಗಿದೆ ಅಂದ ಎಂದು ಅಣಕ ಮಾಡಿ ತೋರಿಸಿದ ಯತ್ನಾಳ್, ಮಂಗಳೂರಿಗೆ ಹೋಗುವಾಗ ಎದೆ ಆಪರೇಷನ್ ಆಗಿತ್ತಲ್ಲ ಎಂದು ವ್ಯಂಗ್ಯವಾಡಿದರು.

Share This Article