ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಘಟಪ್ರಭಾ: ನದಿ ಪಾತ್ರದ ಜನರಿಗೆ ಎಚ್ಚರಿಕೆ

Public TV
1 Min Read
Bagalkot Rain

ಬಾಗಲಕೋಟೆ: ಜಿಲ್ಲೆಯಲ್ಲಿ ಘಟಪ್ರಭಾ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿ ಪಾತ್ರದಲ್ಲಿರುವ ಜನರಿಗೆ ಕೇಂದ್ರ ಜಲ ಆಯೋಗ ಪ್ರವಾಹ ನಿಯಂತ್ರಣ ಕೊಠಡಿಯಿಂದ ಎಚ್ಚರಿಕೆ ರವಾನೆಯಾಗಿದೆ.

ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಘಟಪ್ರಭಾ ನದಿ ಪಾತ್ರದಲ್ಲಿ ಮತ್ತೆ ಪ್ರವಾಹದ ಭೀತಿ ಎದುರಗಿದೆ. ಈ ಹಿನ್ನೆಲೆಯಲ್ಲಿ ಜನರಿಗೆ ಕೇಂದ್ರ ಜಲ ಆಯೋಗ ಪ್ರವಾಹ ನಿಯಂತ್ರಣ ಕೊಠಡಿಯು ಎಚ್ಚರಿಕೆ ಸಂದೇಶ ರವಾನಿಸಿದೆ.

Rain 5

ಮುಧೋಳ ತಾಲೂಕಿನ ಮಿರ್ಜಿ-ಮಹಲಿಂಗಪುರ ಮಾರ್ಗದ ಸೇತುವೆ ಜಲಾವೃತವಾಗಿದೆ. ಸೇತುವೆ ಮೇಲೆ ಸುಮಾರು ಹತ್ತು ಅಡಿಯಷ್ಟು ನೀರು ಹರಿಯುತ್ತಿದೆ. ಅಷ್ಟೇ ಅಲ್ಲದೆ ನದಿ ನೀರು ಮಿರ್ಜಿ ಗ್ರಾಮಕ್ಕೆ ನುಗ್ಗುತ್ತಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಈಗಾಗಲೇ ಮಿರ್ಜಿ ಗ್ರಾಮದ ನೂರಾರು ಎಕರೆ ಕಬ್ಬು ಜಲಾವೃತವಾಗಿದೆ. ಕೆಲ ದಿನಗಳ ಹಿಂದೆ ಬಂದ ಪ್ರವಾಹಕ್ಕೆ ಗ್ರಾಮವು ಸಂಪೂರ್ಣ ಜಲಾವೃತವಾಗಿತ್ತು. ಈಗ ಅದೇ ಭೀತಿ ಎದುರಾಗಿದೆ.

ಮುಧೋಳ ತಾಲೂಕಿನ ಚಿತ್ರಬಾನುಕೋಟಿ, ಚೌಡಾಪುರ, ಬಂಟನೂರು ಗ್ರಾಮದ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ. ಲಕ್ಷಾಂತರ ರೂಪಾಯಿ ಮೂಲ್ಯದ ಈರುಳ್ಳಿ ಬೆಳೆ ನೀರು ಪಾಲಾಗಿದೆ. ಇತ್ತ ಲೋಕಾಪುರದ ಪೊಲೀಸ್ ವಸತಿಗೃಹಗಳು ಜಲಾವೃತವಾಗಿವೆ. ವಸತಿ ಗೃಹದ ಆವರಣದೊಳಗೆಲ್ಲ ನಿಂತ ನೀರು ಜನಜೀವನ ಅಸ್ತವ್ಯಸ್ತವಾಗಿದೆ.

Bagalkot Rain A

ಬೆಳಗಾವಿ:
ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಹಾಮಳೆಯಿಂದ ಬೆಳಗಾವಿ ಜಿಲ್ಲೆಯಲ್ಲಿ ಜನ ಜೀವನ ಅಸ್ತವ್ಯಸ್ತವಾಗಿದೆ. ಜಿಲ್ಲೆಯ ಅನೇಕ ಸೇತುವೆಗಳು ಕೊಚ್ಚಿಹೋಗಿವೆ. ಗೋಕಾಕ್-ಮುಧೋಳ ಮುಖ್ಯ ಮಾರ್ಗ ಮಧ್ಯದ ತಿಗಡಿ ಗ್ರಾಮದ ಬಳಿ ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿದ ತಿಗಡಿ ಸೇತುವೆ ಅಪಾಯದ ಅಂಚಿನಲ್ಲಿದೆ. ಸೇತುವೆ ಬದಿ ಹಾಕಿರುವ ಮಣ್ಣು ಸಂಪೂರ್ಣವಾಗಿ ಕೊಚ್ಚಿ ಹೋಗಿದ್ದು ವಾಹನ ಸಂಚಾರ ದುಸ್ತರವಾಗಿದೆ.

ನಿಪ್ಪಾಣಿ ತಾಲೂಕಿನ ಆಡಿ ಗ್ರಾಮದಲ್ಲಿ ಮನೆ ಮುಂದಿ ನಿಲ್ಲಿಸಿದ ಬೈಕ್‍ಗಳು ಕೊಚ್ಚಿ ಹೋಗದಂತೆ ಗ್ರಾಮಸ್ಥರು ಹಗ್ಗ ಕಟ್ಟಿದ್ದಾರೆ. ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಭಾನುವಾರ ಸುರಿದ ಧಾರಾಕಾರ ಮಳೆಗೆ 4 ಕಾರುಗಳು ಹಾಗೂ 4 ಬೈಕ್‍ಗಳು ಕೊಚ್ಚಿ ಹೋಗಿವೆ. ಪಟ್ಟಣದ ಲಕ್ಷ್ಮಿ ದೇವಸ್ಥಾನದ ಬಳಿ ಕೆಲ ವಾಹನಗಳು ನುಜ್ಜು ಗುಜ್ಜು ಸ್ಥಿತಿಯಲ್ಲಿ ಪತ್ತೆಯಾಗಿವೆ.

Share This Article
Leave a Comment

Leave a Reply

Your email address will not be published. Required fields are marked *