ಹಾವೇರಿ: ಗರ್ಭಿಣಿಯ ಪಾಲಿಗೆ ಸೀಮಂತ ಅನ್ನೋದು ಅತ್ಯಂತ ಮಹತ್ವದ ಆಚರಣೆ. ಆದರೆ ಇಲ್ಲೊಬ್ಬ ರೈತರು ತಮ್ಮ ಮನೆಯ ಮಗಳಂತೆ ಇರೋ ಹಸು ಗೌರಿಗೂ ಸೀಮಂತ ಮಾಡಿದ್ದಾರೆ.
ಹೌದು. ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಚಿಕ್ಕಬಾಸೂರು ಗ್ರಾಮದ ರೈತ ರಮೇಶಗೌಡ ಕಾಡನಗೌಡರ ಮನೆಯಲ್ಲಿ ಗೌರಿಗೆ ಸೀಮಂತ ಮಾಡಿದ್ದಾರೆ. ಕೆಲವು ವರ್ಷಗಳ ಹಿಂದೆ ಗ್ರಾಮದಲ್ಲಿ ಯಾರೋ ಆರು ತಿಂಗಳ ಆಕಳು ಕರುವೊಂದನ್ನ ಕಸಾಯಿಖಾನೆಗೆ ತೆಗೆದುಕೊಂಡು ಹೋಗ್ತಿದ್ದರು. ಆಗ ಆಕಳನ್ನು ಕಂಡು ಇನ್ನೂರು ರೂಪಾಯಿ ಕೊಟ್ಟು ಖರೀದಿಸಿದ್ದೆ. ಗೌರಿ ಬಂದ್ಮೇಲೆ ನಮ್ಮ ಕುಟುಂಬಕ್ಕೆ ಸಾಕಷ್ಟು ಒಳ್ಳೆಯದು ಆಗಿದೆ ಅಂತ ಮಾಲೀಕ ರಮೇಶಗೌಡ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.
ಆಕಳು ಗೌರಿಗೆ ಕೆಲವು ವರ್ಷಗಳಾದ್ರೂ ಗರ್ಭ ಧರಿಸಲಿಲ್ಲ. ಇತ್ತೀಚೆಗೆ ಪಶು ವೈದ್ಯರು ಚಿಕಿತ್ಸೆ ನೀಡಿದಾಗ ಆಕಳು ಗರ್ಭಿಣಿ ಆಗಿದೆ ಅಂತ ತಿಳಿಸಿದ್ರು. ಹೀಗಾಗಿ ಇದೀಗ ಅದಕ್ಕೆ ಸೀಮಂತ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ರಮೇಶಗೌಡರ ಕುಟುಂಬದ ಸಂಬಂಧಿಕರು, ಬೀಗರು ಸೇರಿದಂತೆ ನೂರಾರು ಜನರು ಭಾಗಿಯಾಗಿದ್ರು. ಗೌರಿ ಸೀಮಂತಕ್ಕೆ ಬಂದ ಬಹುತೇಕ ಜನರು ತರಹೇವಾರಿ ತಿನಿಸುಗಳ ಬಯಕೆಯ ಬುತ್ತಿ ತಂದಿದ್ದರು. ಸೀಮಂತಕ್ಕೆ ಬಂದ ಜನ ಭರ್ಜರಿ ಭೋಜನ ಸವಿದು ಹರಸಿ ಹೋದ್ರು ಅಂತ ಗ್ರಾಮಸ್ಥೆ ಪ್ರೇಮಾ ಪಾಟೀಲ್ ತಿಳಿಸಿದ್ದಾರೆ.
ಒಟ್ಟಿನಲ್ಲಿ ಮನೆಯಲ್ಲಿನ ಚೊಚ್ಚಲ ಗರ್ಭಿಣಿಯರಿಗೆ ಮಾಡುವಂತೆ ಹಸು ಗೌರಿಗೆ ಸೀಮಂತ ಮಾಡಿದ್ದು ವಿಶೇಷವಾಗಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv