ಮೈಸೂರು: ಇವತ್ತು ಮೈಸೂರಿನ ಅರಮನೆಯಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗಲಿದೆ. ವಿಜಯದಶಮಿಯ ನಂತರ ಮತ್ತೆ ಯದುವಂಶದಲ್ಲಿ ಸಂತಸ ಕ್ಷಣಗಳು ಮೂಡುತ್ತಿವೆ. ಅದಕ್ಕೆ ಕಾರಣ ಯದುವಂಶದ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಪತ್ನಿ ತ್ರಿಷಿಕಾ ಕುಮಾರಿ ಗರ್ಭವತಿ ಆಗಿರುವುದು.
ಇವತ್ತು ಅರಮನೆಯಲ್ಲಿ ತ್ರಿಷಿಕಾ ಅವರಿಗೆ ಸೀಮಂತ ಕಾರ್ಯ ನಡೆಯಲಿದೆ. ಈ ಕಾರ್ಯಕ್ಕೆ ಈಗಾಗಲೇ ಅರಮನೆಯಲ್ಲಿ ಸಕಲ ಸಿದ್ಧತೆಗಳು ನಡೆದಿವೆ. ತ್ರಿಷಿಕಾ ಅವರ ತಂದೆ, ತಾಯಿ, ಸಹೋದರ, ಸಹೋದರಿ ಈಗಾಗಲೇ ಅರಮನೆಗೆ ಆಗಮಿಸಿದ್ದಾರೆ.
ರಾಜ ವಂಶಸ್ಥರಿಗೆ ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದ್ದು ಅವರೆಲ್ಲಾ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ದಸರಾದ ಖಾಸಗಿ ದರ್ಬಾರ್ನಲ್ಲಿ ಭಾಗವಹಿಸಲು ತ್ರಿಷಿಕಾ ಅವರು ತವರು ಮನೆಯಿಂದ ಪತಿಯ ಮನೆಗೆ ಆಗಮಿಸಿದ್ದರು. ಪದೇ ಪದೇ ಓಡಾಟ ನಡೆಸುವುದು ಬೇಡ ಎಂಬ ಕಾರಣಕ್ಕೆ ಇವತ್ತೆ ಸೀಮಂತ ಕಾರ್ಯ ನಡೆಸಿ ಅವರನ್ನು ತವರು ಮನೆಗೆ ಕಳುಹಿಸಿ ಕೊಡಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಮಾಧ್ಯಮದವರು ಸೇರಿದಂತೆ ಎಲ್ಲಾ ಜನರಿಗೂ ಪ್ರವೇಶ ನಿರ್ಬಂಧಿಸಲಾಗಿದೆ.