ಮೈಸೂರು: ಮೈಸೂರು ರಾಜವಂಶದಲ್ಲಿ ಸುಮಾರು ಆರು ದಶಕಗಳ ಬಳಿಕ ಯದುವಂಶದ ಕುಡಿಯೊಂದು ಮಹಾರಾಣಿ ತ್ರಿಷಿಕಾ ಕುಮಾರಿ ಅವರ ಹೊಟ್ಟೆಯಲ್ಲಿ ಬೆಳೆಯುತ್ತಿದ್ದು, ಮಹಾರಾಣಿಯ ಸೀಮಂತ ಕಾರ್ಯಕ್ರಮ ಭಾನುವಾರ ನಡೆಯಿತು.
ತ್ರಿಷಿಕಾ ಕುಮಾರಿ ಸಿಂಗ್ ಅವರ ಸೀಮಂತ ಕಾರ್ಯಕ್ರಮವು ಬೆಳಗ್ಗೆ 11.45ರ ಶುಭಲಗ್ನದಲ್ಲಿ ಜರುಗಿತು. ಈ ಕಾರ್ಯಕ್ರಮದಲ್ಲಿ ರಾಜಮಾತೆ ಪ್ರಮೋದಾ ದೇವಿ ಒಡೆಯರ್, ಯದುವೀರ್ ತಂದೆ ತಾಯಿ, ತ್ರಿಷಿಕಾ ಕುಮಾರಿ ಅವರ ತಂದೆ ತಾಯಿ ಹಾಗೂ ಎರಡು ಕುಟುಂಬಗಳ ಸಂಬಂಧಿಕರು ಭಾಗವಹಿಸಿದ್ದರು.
ಪರಕಾಲ ಮಠದ ಶ್ರೀಗಳ ಹಾಗೂ 10 ಮಂದಿ ರಾಜ ಪುರೋಹಿತರ ಸಮ್ಮುಖದಲ್ಲಿ ನಡೆದ ಸೀಮಂತ ಕಾರ್ಯಕ್ರಮದಲ್ಲಿ ಮೊದಲಿಗೆ ವೇದ ಉನಿಷತ್ತುಗಳನ್ನು ಪಟನೆ ಮಾಡಲಾಯಿತು. ನಂತರ 9 ಮಂದಿ ಮುತೈದೆಯರು ತ್ರಿಷಿಕಾ ಕುಮಾರಿ ಅವರಿಗೆ ಮಡಿಲಕ್ಕಿ ಹಾಕಿ ಆಶೀರ್ವಾದ ಮಾಡಿದರು.
ಸೀಮಂತ ಕಾರ್ಯಕ್ರಮ ನಡೆದ ಸ್ಥಳವೂ ಸಂಪೂರ್ಣವಾಗಿ ಹೂವಿನಿಂದ ಅಲಂಕಾರ ಮಾಡಿ 9 ಬಗೆಯ ಹಣ್ಣುಗಳು, ತಿಂಡಿ ತಿನಿಸುಗಳು, ಬಳೆ, ಹೂ, ಎಲೆ ಅಡಿಕೆ ಎಲ್ಲವನ್ನೂ ಇಡಲಾಗಿತ್ತು. ಸುಮಾರು 45 ನಿಮಿಷಕ್ಕೂ ಹೆಚ್ಚು ಕಾಲ ಈ ಸೀಮಂತ ಕಾರ್ಯ ನಡೆದ ಬಳಿಕ 15 ಬಗೆಯ ತಿನಿಸುಗಳ ಭೋಜನವನ್ನು ಸವಿದರು.
ಕಳೆದ ವರ್ಷ ಇದೇ ವೇಳೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಸಮ್ಮುಖದಲ್ಲಿ ದತ್ತು ಪುತ್ರ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ರಾಜಸ್ಥಾನದ ರಾಜಮನೆತನದ ತ್ರಿಷಿಕಾಕುಮಾರಿ ಅವರ ವಿವಾಹ ಅರಮನೆಯಲ್ಲಿ ಅದ್ಧೂರಿಯಾಗಿ ನಡೆದಿತ್ತು.