ಮಡಿಕೇರಿ: ಆಹಾರಕ್ಕಾಗಿ ಕಾಡಿನಿಂದ ನಾಡಿಗೆ ಅಮ್ಮನೊಂದಿಗೆ ಬಂದು ಕಂದಕದೊಳಗೆ ಬಿದ್ದಿದ್ದ 5 ತಿಂಗಳ ಮರಿಯಾನೆಯನ್ನ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿ ವಾಪಸ್ಸು ಅಮ್ಮನ ಮಡಿಲಿಗೆ ಸೇರಿಸಿದ್ದಾರೆ.
ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ತಿತಿಮತಿ ಮೀಸಲು ಅರಣ್ಯ ವ್ಯಾಪ್ತಿಯ ತಾರಿಕಟ್ಟೆ ಎಂಬಲ್ಲಿ ಘಟನೆ ನಡೆದಿದೆ. ಆನೆಗಳು ನಾಡಿಗೆ ಬಾರದಂತೆ ತಡೆಯಲು ನಿರ್ಮಾಣ ಮಾಡಿದ ಕಂದಕದೊಳಗೆ ಮರಿಯಾನೆಯೊಂದು ಬಿದ್ದು ಪರದಾಡುತ್ತಿತ್ತು.
ಇದನ್ನು ಕಂಡ ಅರಣ್ಯ ಇಲಾಖೆ ಸಿಬ್ಬಂದಿ ಸಂಜು ಮತ್ತು ತಂಡ ಕೂಡಲೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಆರ್ಎಫ್ಓ ಅಶೋಕ್, ಎಸಿಎಫ್ ಶ್ರೀಪತಿಯವರ ತಂಡ ಆನೆಮರಿಯನ್ನು ಯಶಸ್ವಿಯಾಗಿ ರಕ್ಷಣೆ ಮಾಡಿ ಆನೆ ಹಿಂಡಿನ ಜೊತೆಗೆ ಸೇರಿಸಿದ್ದಾರೆ.