ಬೆಂಗಳೂರು: ಶಿಶುಮರಣ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದಲ್ಲಿ ಬೇಬಿ ಅಂಬುಲೆನ್ಸ್ಗಳಿಗೆ (Ambulance) ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಚಾಲನೆ ನೀಡಿದ್ದಾರೆ.
ರಾಜ್ಯದಲ್ಲಿ ಶಿಶುಮರಣ ಪ್ರಮಾಣ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಆರೋಗ್ಯ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ. ಹುಟ್ಟಿದ ಮಗುವಿನಿಂದ ಹಿಡಿದು ಐದು ವರ್ಷದೊಳಗಿನ ಮಕ್ಕಳ ತುರ್ತು ಚಿಕಿತ್ಸೆಗಾಗಿ ಮತ್ತು ನವಜಾತ ಶಿಶುಗಳಿಗಾಗಿ ಬೇಬಿ ಅಂಬುಲೆನ್ಸ್ಗೆ ಚಾಲನೆ ನೀಡಲಾಗಿದೆ. ಇದನ್ನೂ ಓದಿ: ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಅಳವಡಿಕೆಗೆ 3 ತಿಂಗಳ ಅವಧಿ ವಿಸ್ತರಣೆ
ತಾಯಿಯ ಗರ್ಭದಿಂದ ಬರುವ ಮಗು ಹೊರಗಿನ ಜಗತ್ತಿಗೆ ಹೊಂದಿಕೊಳ್ಳಲು ಹರಸಾಹಸ ಪಡುತ್ತದೆ. ಈ ಸಂದರ್ಭದಲ್ಲಿ ನವಜಾತ ಶಿಶುಗಳಿಗೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಮಗುವನ್ನು ಶಿಫ್ಟ್ ಮಾಡುವಾಗ ತುರ್ತು ಆರೋಗ್ಯ ಸೇವೆ ಒದಗಿಸಲು ರಾಜ್ಯದಲ್ಲಿ ಮೊದಲ ಬಾರಿಗೆ ನವಜಾತ ಶಿಶುಗಳ ಆಂಬುಲೆನ್ಸ್ ಸೇವೆಯನ್ನು ರಾಜ್ಯ ಆರೋಗ್ಯ ಇಲಾಖೆ ಪ್ರಾರಂಭಿಸಿದೆ. ಇದನ್ನೂ ಓದಿ: ದೇವಾಲಯಗಳ ಅಭಿವೃದ್ಧಿಗಾಗಿ ಪ್ರಾಧಿಕಾರ ರಚನೆ: ರಾಮಲಿಂಗಾ ರೆಡ್ಡಿ
ಎಲ್ಲೆಲ್ಲಿ ಕಾರ್ಯ ನಿರ್ವಹಿಸಲಿವೆ?
ಬೇಬಿ ಅಂಬುಲೆನ್ಸ್ಗಳು ಬೆಂಗಳೂರು ಮಾತ್ರವಲ್ಲದೇ ಹುಬ್ಬಳ್ಳಿ, ಮೈಸೂರು ಮತ್ತು ಕಲಬುರಗಿಯಲ್ಲಿ ಸದ್ಯಕ್ಕೆ ಕಾರ್ಯ ನಿರ್ವಹಿಸಲಿವೆ. ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆ, ಮೈಸೂರಿನ ಚಲುವಾಂಬ ಆಸ್ಪತ್ರೆ, ರಾಯಚೂರಿನ ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ, ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ನವಜಾತ ಅಂಬುಲೆನ್ಸ್ಗಳನ್ನು ನಿಗದಿಪಡಿಸಲಾಗಿದೆ. ಆರಂಭಿಕ ಹಂತದಲ್ಲೇ ಚಿಕಿತ್ಸೆ ನೀಡುವುದರಿಂದ ಗಂಭೀರ ಅನಾರೋಗ್ಯ ಸಮಸ್ಯೆ ಇರುವ ನವಜಾತ ಶಿಶುಗಳು ಬದುಕುಳಿಯುವ ಸಾಧ್ಯತೆಗಳು ಹೆಚ್ಚಾಗಲಿದೆ. ಈ ಅಂಬುಲೆನ್ಸ್ನಲ್ಲಿ ಪರಿಣಿತ ವೈದ್ಯರು, ನರ್ಸ್ಗಳು ಇರುತ್ತಾರೆ. ಇದನ್ನೂ ಓದಿ: ಬೆಂಗಳೂರಿಗೆ ಬಂತು ಡ್ರೈವರ್ಲೆಸ್ ಮೆಟ್ರೋ
ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಇನ್ನೂ ಅವಧಿಪೂರ್ವವಾಗಿ ಜನಿಸುವ ಮಗು ಮತ್ತು ಗಂಭೀರ ಆರೋಗ್ಯ ಸಮಸ್ಯೆಗೆ ತುತ್ತಾಗಿರುವ ಶಿಶುಗಳ ಹೆಚ್ಚಿನ ಚಿಕಿತ್ಸೆಗೆ ಸುರಕ್ಷಿತವಾಗಿ ಕರೆದೊಯ್ಯುವ ನಿಟ್ಟಿನಲ್ಲಿ ಈ ಅಂಬುಲೆನ್ಸ್ಗಳು ಸಹಕಾರಿಯಾಗಲಿವೆ. ಈ ವಾಹನದಲ್ಲಿ ವೆಂಟಿಲೇಟರ್, ಆಕ್ಸಿಜನ್, ಪಲ್ಸ್ಗಳ ಚೆಕಪ್ ಮತ್ತು ಸೀರೆಂಜ್ಗಳು ಸೇರಿದಂತೆ ಆತ್ಯಾಧುನಿಕ ಜೀವ ರಕ್ಷಕ ಸಾಧನಗಳನ್ನು ಆಂಬ್ಯುಲೆನ್ಸ್ ಹೊಂದಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:ಮಾಜಿ ಸಚಿವ ಗೋಪಾಲಯ್ಯಗೆ ಕೊಲೆ ಬೆದರಿಕೆ – ಮಾಜಿ ಕಾರ್ಪೊರೇಟರ್ ಪದ್ಮರಾಜ್ ವಿರುದ್ಧ ಎಫ್ಐಆರ್