ಬೆಂಗಳೂರು: ಅಬ್ಬಿಗೆರೆ ಫಾರಂ ಹೌಸ್ನಲ್ಲಿ ಲಿಂಗಾಯತ ಸಂಪ್ರದಾಯದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮೊಮ್ಮಗಳಾದ ಸೌಂದರ್ಯ ಅವರ ಅಂತ್ಯಕ್ರಿಯೆ ಇಂದು ಸಂಜೆ ನೆರವೇರಿತು.
ಯಡಿಯೂರಪ್ಪ, ಕುಟುಂಬಸ್ಥರು, ಸಚಿವರು ಸೇರಿ ಬಂಧುಗಳ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಯಡಿಯೂರಪ್ಪ ಅವರ ಮೊಮ್ಮಗಳ ಸಾವಿಗೆ ಪ್ರಧಾನಿ ಮೋದಿ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: 15 ದಿನದ ಹಿಂದೆಯಷ್ಟೇ ಪತಿ ಜೊತೆಗೆ ಕಾಲೇಜಿಗೆ ತೆರಳಿ ಹಳೆ ಸ್ನೇಹಿತರನ್ನು ಮಾತಾಡಿಸಿದ್ದ ಸೌಂದರ್ಯ!
ಬೆಂಗಳೂರಿನ ವಸಂತನಗರದಲ್ಲಿರುವ ಅಪಾರ್ಟ್ಮೆಂಟ್ನ ಫ್ಲಾಟ್ನಲ್ಲಿ ಬಿಎಸ್ವೈ ಅವರ ಮೊಮ್ಮಗಳು ಸೌಂದರ್ಯ (30) ಆತ್ಮಹತ್ಯೆ ಮಾಡಿಕೊಂಡಿದ್ದರು. ವೃತ್ತಿಯಲ್ಲಿ ವೈದ್ಯರಾಗಿದ್ದ, ಸೌಂದರ್ಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪತಿ ಡಾಕ್ಟರ್ ನೀರಜ್ ಇಂದು ಆಸ್ಪತ್ರೆಗೆ ತೆರಳಿದ್ದ ಸಂದರ್ಭದಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ ಸೌಂದರ್ಯ ನೇಣು ಬಿಗಿದುಕೊಂಡಿದ್ದರು. ಮಗುವನ್ನು ಬೇರೊಂದು ಕೊಠಡಿಯಲ್ಲಿ ಮಲಗಿಸಿ ಸೌಂದರ್ಯ ಆತ್ಮಹತ್ಯೆ ಮಾಡಿಕೊಂಡಿದ್ದರು.
ಮೇಡಂ ರೂಂ ಬಾಗಿಲು ತೆಗೀತಿಲ್ಲ ಎಂದು ಕೆಲಸದವರು ನೀರಜ್ಗೆ ಫೋನ್ ಮಾಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಘಟನಾ ಸ್ಥಳದಲ್ಲಿ ಯಾವುದೇ ಡೆತ್ನೋಟ್ ಪತ್ತೆಯಾಗಿಲ್ಲ. ಪತಿ ನೀಡಿದ ದೂರಿನ ಮೇರೆಗೆ ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೌರಿಂಗ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಪತಿಯ ಅಬ್ಬಿಗೆರೆ ಫಾರಂ ಹೌಸ್ನಲ್ಲಿ ಸೌಂದರ್ಯ ಅವರ ಅಂತ್ಯಕ್ರಿಯೆ ನಡೆಸಲಾಗಿದೆ. ಇದನ್ನೂ ಓದಿ: ಮಗುವಾದ ಬಳಿಕ ಡಿಪ್ರೆಷನ್ಗೆ ಒಳಗಾಗಿದ್ರಾ ಬಿಎಸ್ವೈ ಮೊಮ್ಮಗಳು?