ಮೈಸೂರು: ಬಳ್ಳಾರಿ ಹಾಗೂ ಶಿವಮೊಗ್ಗ ಕ್ಷೇತ್ರದಲ್ಲಿ ಕಮಲ ಅರಳಿಸಲು ಬಿಜೆಪಿ ನಾಯಕರು ಹರಸಾಹಸ ಪಡುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ರಣತಂತ್ರ ಹೂಡಿದ್ದು, ಸಚಿವರು, ಶಾಸಕರು ಕ್ಷೇತ್ರದಲ್ಲಿ ಪ್ರಚಾರ ಕೈಗೊಳ್ಳುತ್ತಿದ್ದಾರೆ. ಹೀಗಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಮಂಡ್ಯ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೆ.ಆರ್.ನಗರದಲ್ಲಿ ಇಂದು ಪ್ರಚಾರ ಸಭೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಇಡೀ ಸರ್ಕಾರದ ದಂಡೇ ಶಿವಮೊಗ್ಗ – ಬಳ್ಳಾರಿಗೆ ಬಂದಿದೆ. ಇನ್ನೂ ಯಾಕೆ ವಿಧಾನಸೌಧದ ಬಾಗಿಲು ತೆಗೆದಿದ್ದೀರಾ. ನವೆಂಬರ್ 3ರವರೆಗೆ ವಿಧಾನಸೌಧದ ಬಾಗಿಲು ಹಾಕಿ ಬಿಡಿ. ಸರ್ಕಾರವೇ ಎರಡೂ ಕ್ಷೇತ್ರಗಳಿಗೆ ಬಂದಿದ್ದು, ಅಭಿವೃದ್ಧಿ ಕಾರ್ಯ ಸ್ಥಗಿತವಾಗಿದೆ ಎಂದು ಆರೋಪಿಸಿದ್ದಾರೆ.
ಸರ್ಕಾರಕ್ಕೆ ಬಡವರ ಕಷ್ಟ ಪರಿಹರಿಸುವುದು ಬೇಕಾಗಿಲ್ಲ. ಕೆಲಸ ಮರೆತು ಎಲ್ಲರೂ ದಂಡು ಕಟ್ಟಿಕೊಂಡು ಶಿವಮೊಗ್ಗ-ಬಳ್ಳಾರಿಗೆ ಬಂದು ಕೂತಿದ್ದಾರೆ. ಸರ್ಕಾರದ ಖಜಾನೆ ದಿವಾಳಿಯಾಗಿದೆ. ನನ್ನ ಆಡಳಿತದ ಅವಧಿಯಲ್ಲಿ ಬಡವರ ಅಂತ್ಯಸಂಸ್ಕಾರಕ್ಕೆ ಇಟ್ಟಿದ್ದ ಸಹಾಯಧನದ ಹಣವನ್ನು ಸರ್ಕಾರ ರೈತರ ಸಾಲ ಮನ್ನಕ್ಕೆ ಬಳಸುತ್ತಿದೆ. ಕೆ.ಆರ್.ನಗರ ವಿಧಾನಸಭಾ ಕ್ಷೇತ್ರಕ್ಕೆ ನಾವು ಸೂಕ್ತ ಅಭ್ಯರ್ಥಿ ಹಾಕದೆ ತಪ್ಪು ಮಾಡಿದ್ದೇವೆ. ನಮ್ಮನ್ನು ಕ್ಷಮಿಸಿ. ನಾವು ಒಳ್ಳೆ ಅಭ್ಯರ್ಥಿ ಹಾಕಿದ್ದರೆ ಇವತ್ತು ನಮ್ಮ ಶಾಸಕರು ಇಲ್ಲಿ ಇರುತ್ತಿದ್ದರು ಎಂದು ಕ್ಷೇತ್ರದ ಜನರ ಕ್ಷಮೆ ಕೇಳಿದರು.
ಬಳ್ಳಾರಿ ಕ್ಷೇತ್ರದ ಚುನಾವಣಾ ಉಸ್ತುವಾರಿಯನ್ನು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ವಹಿಸಿಕೊಂಡಿದ್ದಾರೆ. ಹೀಗಾಗಿ ಅವರ ಬೆನ್ನಿಗೆ ಅನೇಕ ಶಾಸಕರು, ಸಚಿವರು ನಿಂತಿದ್ದಾರೆ. ಇತ್ತ ಶಿವಮೊಗ್ಗ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಅವರು ಕಣಕ್ಕೆ ಇಳಿದಿದ್ದು, ಜೆಡಿಎಸ್ ಸಚಿವರು ಹಾಗೂ ಸಚಿವರು ಅವರ ಬೆಂಬಲಕ್ಕೆ ನಿಂತಿದ್ದಾರೆ.
ಶಿವಮೊಗ್ಗ ಕ್ಷೇತ್ರದಿಂದ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ರಾಘವೇಂದ್ರ ಸೋಲುತ್ತಾರೆ ಎನ್ನುವ ಭೀತಿ ಎದುರಾಗಿದೆ ಅಂತಾ ಕಾಂಗ್ರೆಸ್ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಇದಕ್ಕೆ ತಂತ್ರವನ್ನು ಹೂಡಿದ್ದಾರಂತೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv