– ಆರ್ಟಿಐ ದುರ್ಬಳಕೆ ತಡೆಗೆ ಬದ್ರುದ್ದೀನ್ ಕೆ.ಮಾಣಿ ಕರೆ
ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಉತ್ತೇಜಿಸುವ ಹಾಗೂ ಸಾರ್ವಜನಿಕ ದಾಖಲೆಗಳನ್ನ ಮುಕ್ತವಾಗಿ ಜನರ ಮುಂದೆ ಇಡುವುದು ಮಾಹಿತಿ ಹಕ್ಕು (RTI)ನ ಮುಖ್ಯ ಉದ್ದೇಶವಾಗಿದೆ ಎಂದು ರಾಜ್ಯ ಮಾಹಿತಿ ಆಯೋಗದ ಆಯುಕ್ತ ಡಾ. ಹರೀಶ್ ಕುಮಾರ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಪೊಲೀಸ್ ಇಲಾಖೆ (Police Department) ವತಿಯಿಂದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಮಾಹಿತಿ ಹಕ್ಕು ಅಧಿನಿಯಮ 2005ರ ಅನ್ವಯ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಅವರು ಮಾತಾನಾಡಿದರು. ಮಾಹಿತಿ ಹಕ್ಕು ಬಹಳ ಸರಳ ಹಾಗೂ ಗಂಭೀರ ಸ್ವರೂಪ ಹೊತ್ತಾಗಿದ್ದು ಸರ್ಕಾರವನ್ನು ಬುಡಮೇಲು ಮಾಡುವ ಶಕ್ತಿ ಕೂಡ ಇದೆ. ಜನಪರ ಕಾನೂನು ಜಾರಿಯಾದ ನಂತರ ಅದರ ಬಗ್ಗೆ ಸರ್ಕಾರಿ ಅಧಿಕಾರಿಗಳು ತಿಳಿದಿರಬೇಕು ಎಂದು ತಿಳಿವಳಿಕೆ ನೀಡಿದರು. ಇದನ್ನೂ ಓದಿ: ದೇಶದಲ್ಲಿ ಹೆಚ್ಚಾಗ್ತಿದೆ ನಾಯಿ ಕಡಿತ, ರೇಬಿಸ್ ಆತಂಕ! – ಕರ್ನಾಟಕದಲ್ಲಿ ಪರಿಸ್ಥಿತಿ ಹೇಗಿದೆ?
ಅರ್ಜಿದಾರರು ಕೂಡ ಮಾಹಿತಿ ಹಕ್ಕು ಕಾಯ್ದೆಯನ್ನು ದುರುಪಯೋಗಪಡಿಸಿಕೊಳ್ಳದೇ ಸಮಾಜದ ನೈತಿಕತೆ ಸಾಮಾಜಿಕ ಸ್ವಾತಂತ್ರ್ಯತೆ ಕಾಪಾಡುವ ನಿಟ್ಟಿನಲ್ಲಿ ಆರ್ಟಿಐ ಮೂಲಕ ಸಾರ್ವಜನಿಕರು ಮಾಹಿತಿ ಕೇಳಬೇಕು. ಮುಖ್ಯವಾಗಿ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಹಣಕಾಸು, ನರೇಗಾ, ಕಂದಾಯ, ನಗರಾಭಿವೃದ್ಧಿ, ಲೋಕೋಪಯೋಗಿ ಇಲಾಖೆಗಳಲ್ಲಿ ಹೆಚ್ಚು ಆರ್.ಟಿ.ಐ ಅರ್ಜಿಗಳು ಬರುತ್ತವೆ. ಸಾರ್ವಜನಿಕ ಸಂಪರ್ಕ ಅಧಿಕಾರಿಗಳಿಗೆ ಸಂಪೂರ್ಣ ಮಾಹಿತಿ ಇದ್ದಲ್ಲಿ ಶೀಘ್ರ ವಿಲೇವಾರಿ ಮಾಡಬಹುದು ಎಂದರು.
ಪೊಲೀಸ್ ಸ್ಟೇಷನ್ಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ ಎಂಬ ಸುಪ್ರೀಂ ಕೋರ್ಟ್ ಹೇಳಿಕೆಯನ್ನು ಆಧರಿಸಿ ಕಡ್ಡಾಯವಾಗಿ ಎಲ್ಲಾ ಪೊಲೀಸ್ ಸ್ಟೇಷನ್ಗಳಲ್ಲಿ ಸಿಸಿಟಿವಿ ಅಳವಡಿಸಿರಬೇಕು. ಹಾಗೆಯೇ ಅವುಗಳನ್ನ ಒಂದು ವರ್ಷಗಳ ಕಾಲ ನಿರ್ವಹಣೆ ಮಾಡಬೇಕಿದೆ. ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಪಾಲಿಸುವುದು ಅವಶ್ಯಕ. ಅಧಿಕಾರಿಯು ಕಾರಣವಿಲ್ಲದೇ ಮಾಹಿತಿ ನೀಡದಿದ್ದಲ್ಲಿ ಅಥವಾ ದುರುದ್ದೇಶದಿಂದ ತಪ್ಪಾದ ಮಾಹಿತಿ ನೀಡಿದ್ದಲ್ಲಿ ದಂಡ ಪಾವತಿಸಬೇಕಾಗುತ್ತದೆ. ಜೊತೆಗೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಹಾಗೂ ಕಾಲಕಾಲಕ್ಕೆ ಅರ್ಜಿಗಳ ವಿಲೇವಾರಿ ಮಾಡಬೇಕು ಎಚ್ಚರಿಸಿದರು. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಶಿಕ್ಷೆ ಬಗ್ಗೆ ನಮಗಿಂತ ಜೆಡಿಎಸ್ – ಬಿಜೆಪಿ ನಾಯಕರ ಪ್ರತಿಕ್ರಿಯೆ ಬಹುಮುಖ್ಯ: ಡಿಕೆಶಿ
RTI ಜನಸ್ನೇಹಿ ಕಾಯ್ದೆ
ರಾಜ್ಯ ಮಾಹಿತಿ ಆಯೋಗದ ಆಯುಕ್ತರಾದ ಡಾ.ಬಿ.ಆರ್ ಮಮತಾ ಮಾತನಾಡಿ, ಮಾಹಿತಿ ಹಕ್ಕಿನ ಕಾಯ್ದೆಯ ಬಗ್ಗೆ ಸಾರ್ವಜನಿಕರಲ್ಲಿ ಹಾಗೂ ಅಧಿಕಾರಿಗಳಲ್ಲಿ ಅರಿವಿನ ಕೊರತೆ ಇದೆ. ಈ ಕಾಯ್ದೆಯು ಸಾರ್ವಜನಿಕ ಜನ ಸ್ನೇಹಿ ಕಾಯ್ದೆಯಾಗಿದೆ. ಇದನ್ನು ಪೋಷಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ. 6(1) ಅಧಿನಿಯಮದ ಪ್ರಕಾರ ಮಾಹಿತಿ ಕೋರಿ ಅರ್ಜಿ ಬಂದರೆ ಅಂತಹ ಅರ್ಜಿಗೆ 30 ದಿನಗಳ ಒಳಗಾಗಿ ಪ್ರತಿ ಪುಟಕ್ಕೆ ಎರಡು ರೂ ಗಳಂತೆ ಹಣ ಪಾವತಿಸಿಕೊಂಡು ಮಾಹಿತಿ ನೀಡಬೇಕು, ನಿಗದಿತ ಕಾಲಮಾನಕ್ಕೆ ಮಾಹಿತಿ ನೀಡಲು ಸಾಧ್ಯವಾಗದಿದ್ದಲ್ಲಿ ಉಚಿತವಾಗಿ ಮಾಹಿತಿಯನ್ನು ನೀಡಬೇಕು. 41ಎ ಮತ್ತು 41ಬಿ ಯನ್ನು ಎಲ್ಲಾ ಕಚೇರಿಗಳಲ್ಲಿ ಕಡ್ದಾಯವಾಗಿ ಅಳವಡಿಸಬೇಕು. ಅಧಿಕಾರಿಗಳಿಗೆ ಕಾಲಕಾಲಕ್ಕೆ ತರಬೇತಿಗಳು ನೀಡಬೇಕು ಕಾಯ್ದೆಯ ನಿರ್ಲಕ್ಷ್ಯತೆ ಆಗಬಾರದು ಎಂದರು.
ಜಿಲ್ಲೆಯಲ್ಲಿ 1,440 ದ್ವಿತೀಯ ಮೇಲ್ಮನವಿ ಪ್ರಕರಣಗಳು ಬಾಕಿ
ರಾಜ್ಯ ಮಾಹಿತಿ ಆಯೋಗದ ಆಯುಕ್ತರಾದ ಬದ್ರುದ್ದೀನ್ ಕೆ. ಮಾಣಿ (Badruddin K Mani) ಮಾತನಾಡಿ, ಎಲ್ಲಾ ಅಧಿಕಾರಿ, ಸಿಬ್ಬಂದಿ ಮಾಹಿತಿ ಹಕ್ಕು ಕಾಯ್ದೆ ಕುರಿತು ಸಂಪೂರ್ಣ ಅರಿವು ಹೊಂದಿದ್ದಲ್ಲಿ ಮಾತ್ರ ಅರ್ಜಿದಾರರಿಗೆ ಸಮರ್ಪಕ ಮಾಹಿತಿ ಒದಗಿಸಲು ಸಾಧ್ಯ. ರಾಜ್ಯದಲ್ಲಿ 45,000 ದ್ವಿತೀಯ ಹಂತದ ಮೇಲ್ಮನವಿ ಪ್ರಕರಣಗಳು ಬಾಕಿ ಇದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯು 9ನೇ ಸ್ಥಾನದೊಂದಿಗೆ 1,440 ದ್ವಿತೀಯ ಮೇಲ್ಮನವಿ ಪ್ರಕರಣಗಳು ಬಾಕಿ ಉಳಿದಿವೆ ಎಂದು ಹೇಳಿದರು.
ಹಾಗೆಯೇ ಕಾಯ್ದೆಯು ಬಹಳ ಸುಲಭವಾಗಿದ್ದು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಂಡರೇ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಬಹುದು. ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ಮಾಹಿತಿ ಹಕ್ಕು ಅಡಿಯಲ್ಲಿ ಸುಪ್ರೀಂ ಇದ್ದ ಹಾಗೆ. ಮಾಹಿತಿ ಹಕ್ಕನ್ನು ಸರಿಯಾಗಿ ಅರ್ಥೈಸಿಕೊಂಡು ಶೀಘ್ರ ಬಗೆಹರಿಸಬಹುದಾಗಿದೆ. ಮಾಹಿತಿ ಹಕ್ಕು ಕಾಯ್ದೆ ಅನಿವಾರ್ಯವಾಗಿದ್ದು ನಿಭಾಯಿಸುವುದು ನಮ್ಮ ಕರ್ತವ್ಯ. ನಿಷ್ಠಾವಂತ ಆರ್ಟಿಐ ಅರ್ಜಿದಾರರಿಗೆ ವಂಚಿತತೆ, ದುರ್ಬಳಕೆ ಆಗುತ್ತಿರುವುದನ್ನ ತಡೆಯುವುದು ನಮ್ಮ ಅಧಿಕಾರಿಗಳ ಕರ್ತವ್ಯ ಕೂಡ ಆಗಿದೆ ಎಂದರು. ಇದನ್ನೂ ಓದಿ: ಭಾರತದ ಮೇಲೆ ಅಮೆರಿಕ 25% ಟ್ಯಾರಿಫ್ – ‘ಸ್ವದೇಶಿ’ ವಸ್ತು ಖರೀದಿಸಿ: ಮೋದಿ ಕರೆ
ಜಿಲ್ಲಾಧಿಕಾರಿ ಎಬಿ ಬಸವರಾಜು ಅವರು ಮಾತನಾಡಿ, ಕಂದಾಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಈಗ ಎಲ್ಲವೂ ಆನ್ಲೈನ್ ಅಲ್ಲಿ ಸಿಗುವಂತೆ ಮಾಡಲಾಗಿದೆ. ನ್ಯಾಯಾಲಯಕ್ಕೆ ಸಂಬಂಧಪಟ್ಟ ಮಾಹಿತಿಗಾಗಿ ಆರ್.ಸಿ.ಸಿ.ಎಂ.ಎಸ್ ಪೋರ್ಟಲ್ ಮತ್ತು ಭೂಮಿಗೆ ಸಂಬಂಧಪಟ್ಟ ಮಾಹಿತಿಗಾಗಿ ಭೂ ಸುರಕ್ಷಾ ಪೋರ್ಟಲ್ ಅಲ್ಲಿ ಮಾಹಿತಿ ಪಡೆಯಬಹುದು. ಸರ್ವೆ ದಾಖಲೆ ಕೂಡ ಈಗ ಸಿಗುತ್ತದೆ ಎಂದರು. ಸಾರ್ವಜನಿಕ ಹಿತಾಸಕ್ತಿ ಹಾಗೂ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಮಾಹಿತಿ ಹಕ್ಕು ಮುಖ್ಯ. ಅಧಿಕಾರಿಗಳು ಯಾವುದೇ ಭಯ ಪಡದೇ ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ವಿಲೇವಾರಿ ಮಾಡಿ ಎಂದರು.
ಕಾರ್ಯಕ್ರಮದಲ್ಲಿ ಜಿಪಂ ಸಿಇಓ ಡಾ.ಕೆ.ಎನ್ ಅನುರಾಧಾ, ಎಡಿಸಿ ಸೈಯಿದಾ ಅಯಿಷಾ, ಎಎಸ್ಪಿ ನಾಗರಾಜ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶಿವಕುಮಾರ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಾರ್ವಜನಿಕ ಸಂಪರ್ಕ ಅಧಿಕಾರಿಗಳು, ಪ್ರಥಮ ಮೇಲ್ಮನವಿ ಅಧಿಕಾರಿಗಳು ಉಪಸ್ಥಿತರಿದ್ದರು. ಇದನ್ನೂ ಓದಿ: ಉತ್ತರಾಖಂಡದ ಚಮೋಲಿಯಲ್ಲಿ ಭೂಕುಸಿತ – ಹೈಡೆಲ್ ಪ್ರಾಜೆಕ್ಟ್ ಸೈಟ್ನಲ್ಲಿದ್ದ 12 ಕಾರ್ಮಿಕರಿಗೆ ಗಾಯ