ಜಾತಿ ಜನಗಣತಿ ವರದಿ ಜಾರಿ ಮಾಡಲೇಬೇಕು: ಬಿ.ಕೆ.ಹರಿಪ್ರಸಾದ್ ಒತ್ತಾಯ

Public TV
1 Min Read
BK Hariprasad

ಬೆಂಗಳೂರು: ಜಾತಿ ಜನಗಣತಿ ವರದಿ (Caste Census Report) ಜಾರಿ ಮಾಡಲೆಬೇಕು ಎಂದು ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ (B.K.Hariprasad) ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶುಕ್ರವಾರ ಸಿಎಂ ಸಿದ್ದರಾಮಯ್ಯ (Siddaramaiah) ಅವರನ್ನು ಭೇಟಿಯಾಗಿದ್ದೆ. ಅ.7ರಂದು ಹಿಂದುಳಿದ ವರ್ಗಗಳ ಹಾಲಿ ಹಾಗೂ ಮಾಜಿ ಶಾಸಕರು ಭೇಟಿಯಾಗಿ ಜಾತಿಗಣತಿ ವರದಿ ಜಾರಿಗೆ ಒತ್ತಾಯಿಸಿದ್ದೆವು. ಆಗ 18ರಂದು ಕ್ಯಾಬಿನೆಟ್‌ಗೆ ತರುತ್ತೇವೆ ಎಂದು ಸಿಎಂ ಹೇಳಿದ್ದರು. ವರದಿ ಸಂಬಂಧ ಏನು ಕ್ರಮ ಕೈಗೊಂಡಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.

ಕೆಲ ಸಮುದಾಯದ ಮುಖಂಡರು ವಿರೋಧ ಮಾಡಿದ್ದಾರೆ. ಈ ಸಂಬಂಧ ಭಾನುವಾರ ಎರಡು ಸಮುದಾಯಗಳ ಸಭೆ ಕರೆದಿದ್ದೇನೆ. ಈಗ ಉಪ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿದೆ. ಈ ಹಂತದಲ್ಲಿ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಭೂ ಸುಧಾರಣಾ ಕಾಯ್ದೆ, ಬ್ಯಾಂಕ್‌ಗಳ ರಾಷ್ಟ್ರೀಕರಣ ಸಂದರ್ಭದಲ್ಲೂ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೂ ಕಾಂಗ್ರೆಸ್ ಪಕ್ಷ ಅದನ್ನು ಜಾರಿಗೆ ತಂದಿತ್ತು. ಪ್ರಜಾಪ್ರಭುತ್ವದಲ್ಲಿ ಒತ್ತಡ ಬರೋದು ಸಹಜ. ಜಾತಿಗಣತಿ ವರದಿಯನ್ನ ಜಾರಿಗೆ ತರಲೇಬೇಕು ಎಂದು ಅವರು ಹೇಳಿದ್ದಾರೆ.

ಮುಡಾ ಕಚೇರಿ ಮೇಲೆ ಇ.ಡಿ ದಾಳಿ ವಿಚಾರವಾಗಿ, ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಇ.ಡಿ ಹಾಗೂ ಸಿಬಿಐ ದುರುಪಯೋಗವಾಗುತ್ತಿದೆ. ಇ.ಡಿ ಒಂದು ರೀತಿ ವಾಷಿಂಗ್ ಮಷಿನ್ ಇದ್ದಂತೆ.‌ ಕರೆದುಕೊಂಡು ಹೋಗಿ ರುಬ್ಬಿ ಬಾಯ್ಬಿಡಿಸಿ ಕಳಿಸುತ್ತಾರೆ. ಈಗ ಅಂತಹವರು ಯಾರೂ ಇಲ್ಲ. ಇ.ಡಿ ದಾಳಿ ಮಾಡಬೇಕಿರೋದು ಪ್ರಹ್ಲಾದ್ ಜೋಶಿಯವರ ಮನೆ ಮೇಲೆ. 2 ಕೋಟಿ ರೂ. ಆರೋಪ ಎದುರಾಗಿದೆ. ಹಿಂದೂ ನಾವೆಲ್ಲಾ ಒಂದು ಅನ್ನೋರು ಸ್ವಂತ ತಮ್ಮನಿಗೂ ನನಗೂ ಸಂಬಂಧವಿಲ್ಲ ಎನ್ನುತ್ತಾರೆ. ನೈತಿಕತೆ ಪಾಠ ಹೇಳುವ ಜೋಶಿ ವಿರುದ್ಧ ಇನ್ನೂ ಕುಮಾರಸ್ವಾಮಿ ಪಾರ್ಥೇನಿಯಂಗೆ ಹೋಲಿಸಿದ್ರು. ನಾನು ಇನ್ನೊಂದು ಹೆಜ್ಜೆ ಮುಂದೆ ಹೋಗಿ ಹೇಳ್ತೀನಿ ಜೋಶಿ ಪ್ಯಾರೆಸೈಟ್, ಅವರು ಹೋದ ಕಡೆ ಪಕ್ಷ ಬೆಳೆಯಲೇ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.

Share This Article