ಲಕ್ನೋ: ಗೋ ವ್ಯಾಪಾರ ಮತ್ತು ಹೈನುಗಾರಿಕೆಯಿಂದ ದೂರ ಉಳಿಯಿರಿ ಎಂದು ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಮುಸ್ಲಿಮರಲ್ಲಿ ಮನವಿ ಮಾಡಿಕೊಂಡಿದ್ದಾರೆ
ರಾಜಸ್ತಾನದ ಅಲ್ವಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಹೈನುಗಾರಿಕೆ ಮತ್ತು ಹಾಲಿನ ವ್ಯಾಪಾರದಲ್ಲಿ ತೊಡಗಿರುವ ಮುಸ್ಲಿಮರು ತಮ್ಮ ಮುಂದಿನ ಪೀಳಿಗೆಗಾಗಿ ಇದರಿಂದ ದೂರ ಉಳಿಯಬೇಕೆಂದು ಬೇಡಿಕೊಳ್ಳುತ್ತೇನೆ. ಗೋವುಗಳನ್ನು ಸುಮ್ಮನೆ ಮುಟ್ಟಿದರೂ ಗಂಭೀರವಾದ ಪರಿಣಾಮ ಎದುರಿಸಬೇಕಾಗುತ್ತದೆ. ಹಾಗಾಗಿ ಮುಸ್ಲಿಮರು ಈ ವ್ಯಾಪಾರದಿಂದ ದೂರ ಉಳಿಯಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಜುಲೈ 20-21 ರ ಮಧ್ಯರಾತ್ರಿ ರಾಜಸ್ತಾನದ ಅಲ್ವಾರ್ ಎಂಬಲ್ಲಿ ಗೋವುಗಳನ್ನು ಸಾಗಿಸುತ್ತಿದ್ದ ರುಕ್ಬರ್ ಖಾನ್ನನ್ನು ಅಡ್ಡಗಟ್ಟಿದ ಸ್ಥಳೀಯರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಆದರೆ ಪೊಲೀಸರು ಹಲ್ಲೆಗೊಳಗಾದ ಆತನನ್ನು ತಡವಾಗಿ ಆಸ್ಪತ್ರೆಗೆ ದಾಖಲಿಸಿದ್ದರು ಅಷ್ಟರಲ್ಲಿ ಆತ ಮೃತಪಟ್ಟಿದ್ದ. ಈ ಘಟನೆ ದೇಶದ್ಯಾಂತ ಸಂಚಲನ ಉಂಟುಮಾಡಿದೆ. ಮರಣೋತ್ತರ ಪರೀಕ್ಷೆಯಲ್ಲಿ ಆತನ ದೇಹದಲ್ಲಿ 13 ಗಂಭೀರವಾದ ಗಾಯಗಳಾಗಿದ್ದು, ದೈಹಿಕ ಗಾಯದ ಪರಿಣಾಮದಿಂದ ಸಾವನ್ನಪ್ಪಿದ್ದಾನೆ ಎಂದು ವರದಿ ಬಂದಿತ್ತು.
ಕಳೆದ ವರ್ಷ ಇದೇ ರೀತಿಯ ಘಟನೆಯೊಂದು ಸಂಭವಿಸಿದ್ದು, ಪೆಹ್ಲು ಖಾನ್ ಎಂಬಾತನನ್ನು ಹಸುವಿನ ಕಳ್ಳಸಾಗಾಣಿಕೆಯಲ್ಲಿ ಭಾಗಿಯಾಗಿದ್ದನು ಎಂದು ಸ್ಥಳೀಯರು ಹಲ್ಲೆ ಮಾಡಿದ್ದರು.