ಮುಂಬೈ: ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಅವರು ಕಸ ಎತ್ತುವ ಮಹಿಳೆಯರಿಂದ ಹಣತೆ ಖರೀದಿಸುವ ಮೂಲಕ ಸಹಾಯ ಮಾಡಿದ್ದಾರೆ.
ಆಯುಷ್ಮಾನ್ ಹಾಗೂ ಅವರ ಪತ್ನಿ ತಾಹಿರಾ ಕಶ್ಯಪ್ ಅವರು ದೀಪಾವಳಿಗಾಗಿ ಕಸ ಎತ್ತುವ ಮಹಿಳೆಯರಿಗೆ ಆರ್ಥಿಕವಾಗಿ ಸಹಾಯ ಮಾಡುವುದಕ್ಕಾಗಿ ಹಾಗೂ ಕೌಶಲ್ಯ ವಿಕಾಸಕ್ಕಾಗಿ ಅವರ ಬಳಿ ದೀಪಗಳು ಹಾಗೂ ಮೇಣದಬತ್ತಿಯನ್ನು ಖರೀದಿಸಿದ್ದಾರೆ. ಈ ವರ್ಷ ದೀಪಾವಳಿಗೆ ತಮ್ಮ ಸಂಬಂಧಿಕರಿಗೆ ಉಡುಗೊರೆಯನ್ನು ಕಳುಹಿಸಿಕೊಡುತ್ತಿದ್ದಾರೆ. ಉಡುಗೊರೆಯಲ್ಲಿ ಈ ಮಹಿಳೆಯರು ತಯಾರಿಸಿದ ದೀಪಗಳನ್ನು ಹಾಗೂ ಮೇಣದಬತ್ತಿಯನ್ನು ಕೂಡ ನೀಡುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಆಯುಷ್ಮಾನ್, ದೀಪಾವಳಿ ಎಂದರೆ ಬೇರೊಬ್ಬರ ಜೀವನದಲ್ಲಿ ಖುಷಿ ತರುವುದು. ನಾವು ಈ ಹಬ್ಬವನ್ನು ನಮ್ಮ ನಮ್ಮ ಕುಟುಂಬಸ್ಥರ ಜೊತೆ ಆಚರಿಸುತ್ತೇವೆ. ಆದರೆ ನಾವು ಒಂದು ವಿಷಯವನ್ನು ನೆನಪಿಟ್ಟುಕೊಳ್ಳಬೇಕು. ಈಗಲೂ ಹಲವು ಜನರಿಗೆ ನಮ್ಮ ಬೆಂಬಲ ಬೇಕಾಗಿದೆ. ನಾವು ಅವರ ಮುಖದಲ್ಲಿ ನಗುವನ್ನು ತರಬಹುದು. ನಾವು ಈ ಉಡುಗೊರೆಗಳ ಮೂಲಕ ಅವರ ಜೀವನದಲ್ಲಿ ಬದಲಾವಣೆಗಳನ್ನು ತರಲು ಪ್ರಯತ್ನಿಸುತ್ತಿದ್ದೆವೆ ಎಂದು ಹೇಳಿದ್ದಾರೆ.
ಆಯುಷ್ಮಾನ್ ಪತ್ನಿ ತಾಹಿರಾ ಕೂಡ, ನಾವು ಈ ಮಹಿಳೆಯರು ತಯಾರಿಸಿದ ವಸ್ತುಗಳನ್ನು ಸಂಬಂಧಿಕರಿಗೆ ಉಡುಗೊರೆಯಾಗಿ ನೀಡಲು ನಿರ್ಧರಿಸಿದ್ದೆವೆ. ಏಕೆಂದರೆ ಅವರ ಅದ್ಭುತ ಕೆಲಸ ಹಾಗೂ ಕಠಿಣ ಪರಿಶ್ರಮವನ್ನು ಜಗತ್ತಿನ ಮುಂದೆ ತರಬಹುದು ಎಂಬ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿದ್ದೆವೆ. ನಾವೆಲ್ಲರೂ ಈ ರೀತಿಯ ಮಹಿಳೆಯರ ಭವಿಷ್ಯವನ್ನು ಸುರಕ್ಷಿತ ಮಾಡಬೇಕು. ಅಲ್ಲದೆ ಸಾಕಷ್ಟು ಮಂದಿ ಅವರ ಕೆಲಸವನ್ನು ತಿಳಿದು ಅವರಿಗೆ ಸಹಾಯ ಮಾಡಬೇಕು ಎಂಬುದು ನಮ್ಮ ಉದ್ದೇಶ ಎಂದು ಪ್ರತಿಕ್ರಿಯಿಸಿದ್ದಾರೆ.
ಈ ವರ್ಷ ದೀಪಾವಳಿ ಹಬ್ಬವನ್ನು ಆಯುಷ್ಮಾನ್ ತಮ್ಮ ಪತ್ನಿ ಮಕ್ಕಳ ಜೊತೆ ಜಾರ್ಖಂಡ್ನಲ್ಲಿ ಆಚರಿಸುತ್ತಿದ್ದಾರೆ. ಇಡೀ ಖುರಾನಾ ಕುಟುಂಬ ಒಟ್ಟಿಗೆ ಹಬ್ಬ ಆಚರಿಸಲಿದೆ ಎಂದು ವರದಿಯಾಗಿದೆ.