ಮೈಸೂರು: ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಆರಂಭವಾಗಿದೆ. ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುಗಳ ಪೂಜೆ ನೆರವೇರಲಿದ್ದು, ರಾಜ ಪರಿವಾರದವರು ಪಂಚಲೋಹದ ಪಲ್ಲಕ್ಕಿಯಲ್ಲಿ ಆಯುಧಗಳನ್ನು ತಂದಿದ್ದಾರೆ.
ಕೋಡಿ ಸೋಮೇಶ್ವರ ದೇವಾಲಯಕ್ಕೆ ರಾಜ ಕುಟುಂಬದವರು ಆಗಮಿಸಿದ್ದಾರೆ. ಇಲ್ಲಿ ಮೊದಲ ಪೂಜೆಯನ್ನು ನಡೆಸಿ ನಂತರ ಯದುವೀರ್ ಅವರಿಂದ ಅರಮನೆಯ ಒಳಭಾಗದ ಕಲ್ಯಾಣ ಮಂಟಪದಲ್ಲಿ ಆಯುಧ ಪೂಜೆ ನಡೆಯಲಿದೆ.
ಆಯುಧ ಪೂಜೆ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದರು. ಅರ್ಜುನ ನೇತೃತ್ವದ ದಸರಾ ಗಜಪಡೆಯ ಎಲ್ಲಾ ಆನೆಗಳು ಪೂಜೆಯಲ್ಲಿ ಭಾಗಿಯಾಗಿದ್ದವು.
ಅರಮನೆ ಕಲ್ಯಾಣ ಮಂಟಪ ಆಯುಧ ಪೂಜೆಗೆ ಸಿದ್ಧವಾಗಿದೆ ಹಾಗೂ ಕಲ್ಯಾಣ ಮಂಟಪದಲ್ಲಿ ಪಟ್ಟದ ಕತ್ತಿ, ಆಯುಧಗಳನ್ನು ಇಟ್ಟು ಸಿದ್ಧತೆಗಳನ್ನು ನಡೆಸಿಕೊಂಡಿದ್ದಾರೆ. ಕಲ್ಯಾಣ ಮಂಟಪದ ಸವಾರಿ ತೊಟ್ಟಿಯಲ್ಲೂ ಪೂಜೆಗೆ ಸಿದ್ಧತೆ ನಡೆಸಿಕೊಂಡಿದ್ದು, ಮಧ್ಯಾಹ್ನ 12.30ಕ್ಕೆ ಮಹಾರಾಜ ಯದುವೀರ್ ಪೂಜೆ ಆರಂಭಿಸಲಿದ್ದಾರೆ.
ದೇವಸ್ಥಾನದಿಂದ ಅಲಮೇಲಮ್ಮ ವಿಗ್ರಹವನ್ನು ಅರಮನೆ ಕಲ್ಯಾಣ ಮಂಟಪಕ್ಕೆ ತರಲಾಗಿದೆ. ಅಲಮೇಲಮ್ಮ ಮೈಸೂರು ರಾಜವಂಶಸ್ಥರಿಗೆ ಶಾಪ ಹಾಕಿದ್ದರು. ಆಯುಧ ಪೂಜೆ ದಿನ ಅಲಮೇಲಮ್ಮ ವಿಗ್ರಹಕ್ಕೆ ಪೂಜೆ ಮಾಡುವ ಸಂಪ್ರದಾಯವಿದೆ. ರಾಜಮನೆತನದವರು ಅಲಮೇಲಮ್ಮ ವಿಗ್ರಹವನ್ನು ಬುಟ್ಟಿಯಲ್ಲಿ ಇಟ್ಟು ಮರದ ಪಲ್ಲಕ್ಕಿಯಲ್ಲಿ ತಂದರು. ಅಲಮೇಲಮ್ಮ ದೇವಸ್ಥಾನ ಅರಮನೆಯ ಆವರಣದಲ್ಲಿ ಇದೆ.