– ರಾಮ ಮಂದಿರ ಟ್ರಸ್ಟ್ನಿಂದ ಯೋಜನೆ
– ವಿಎಚ್ಪಿ ಪ್ಲ್ಯಾನ್ನಂತೆ ರಾಮನ ಮಂದಿರ ನಿರ್ಮಾಣ
ನವದೆಹಲಿ: ರಾಮ ಮಂದಿರವನ್ನು ವ್ಯಾಟಿಕನ್ ಸಿಟಿ ಹಾಗೂ ಮೆಕ್ಕಾ ಮಸೀದಿಗಿಂತಲೂ ವಿಸ್ತಾರವಾಗಿ ನಿರ್ಮಿಸುವ ಯೋಜನೆಗೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮುಂದಾಗಿದೆ.
ನವದೆಹಲಿಯಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಬುಧವಾರ ಸಭೆ ನಡೆಸಿತು. ಈ ವೇಳೆ ಸಮಿತಿಯ ಅಧ್ಯಕ್ಷರನ್ನಾಗಿ ನೃಪೇಂದ್ರ ಮಿಶ್ರಾ ಅವರನ್ನು ಆಯ್ಕೆ ಮಾಡಲಾಯಿತು. ರಾಮ್ ದೇವಾಲಯ ನಿರ್ಮಾಣದ ದಿನಾಂಕವನ್ನು 15 ದಿನಗಳ ನಂತರ ನಿರ್ಧರಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಅಯೋಧ್ಯೆಯ ರಾಮ ದೇವಾಲಯ ಪ್ರದೇಶವು ವಿಶ್ವದ ಅತಿದೊಡ್ಡ ಸನಾತನ ಧರ್ಮ ಕೇಂದ್ರವಾಗಬೇಕೆಂದು ಟ್ರಸ್ಟ್ ಬಯಸಿದೆ. ಈ ನಿಟ್ಟಿನಲ್ಲಿ ರಾಮ ದೇವಾಲಯದ ಪ್ರದೇಶವನ್ನು ವ್ಯಾಟಿಕನ್ ಸಿಟಿ ಮತ್ತು ಮೆಕ್ಕಾದ ಮಸೀದಿಗಿಂತ ದೊಡ್ಡದಾಗಿ ನಿರ್ಮಿಸಬೇಕು ಟ್ರಸ್ಟ್ ಸದಸ್ಯರು ಬಯಸಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
111 ಎಕರೆ ಜಾಗದಲ್ಲಿ ರಾಮ ಮಂದಿರ:
ಕ್ರಿಶ್ಚಿಯನ್ನರ ಪವಿತ್ರ ಕ್ಷೇತ್ರವಾದ ವ್ಯಾಟಿಕನ್ ಸಿಟಿ 110 ಎಕರೆ ಹಾಗೂ ಮುಸ್ಲಿಮರ ಮೆಕ್ಕಾ ಮಸೀದಿ 99 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿದೆ. ಹೀಗಾಗಿ ಈ ಎರಡೂ ಧಾರ್ಮಿಕ ಕೇಂದ್ರಗಳಿಗಿಂತ ವಿಸ್ತಾರವಾದ ಪ್ರದೇಶದಲ್ಲಿ ರಾಮ ಮಂದಿರ ನಿರ್ಮಿಸಬೇಕು ಎಂದು ಟ್ರಸ್ಟ್ ಯೋಜಿಸುತ್ತಿದೆ. ಆದರೆ ಟ್ರಸ್ಟ್ ಪ್ರಸ್ತುತ ರಾಮ ಮಂದಿರ ನಿರ್ಮಾಣಕ್ಕೆ 70 ಎಕರೆ ಭೂಮಿಯನ್ನು ಹೊಂದಿದೆ. ಇದರಿಂದಾಗಿ ಟ್ರಸ್ಟ್ನ ಕೆಲ ಸದಸ್ಯರು, ಮಂದಿರ ಜಾಗದ ಸುತ್ತಮುತ್ತಲಿನ ಜಮೀನು ಖರೀದಿಗೆ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಅರವಿಂದ ಆಶ್ರಮ 3 ಎಕರೆ ಜಮೀನು ನೀಡಲು ಸಿದ್ಧವಾಗಿದೆ. ಮೂಲಗಳ ಪ್ರಕಾರ 111 ಎಕ್ರೆ ಜಾಗದಲ್ಲಿ ಮಂದಿರ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುತ್ತಿದೆ.
ಏಕಾದಶಿ ವಿಶೇಷ:
ಟ್ರಸ್ಟ್ನ ಮೊದಲ ಸಭೆ ನವದೆಹಲಿಯ ಕೆ.ಪರಶರನ್ ಅವರ ಮನೆಯಲ್ಲಿ ಏಕಾದಶಿ ದಿನವಾದ ಬುಧವಾರ ನಡೆಯಿತು. ಮುಂದಿನ ಸಭೆ 15 ದಿನಗಳ ನಂತರ ಅಯೋಧ್ಯೆಯಲ್ಲಿ ನಡೆಯಲಿದ್ದು, ಈ ದಿನವೂ ಏಕಾದಶಿ ಆಗಿದೆ. ಮೂಲಗಳ ಪ್ರಕಾರ, ರಾಮ ದೇವಾಲಯದ ನಿರ್ಮಾಣಕ್ಕಾಗಿ ಸಂತರು ಏಕಾದಶಿ ದಿನವಾದ ಏಪ್ರಿಲ್ 4ರಂದು ಮುಹೂರ್ತವನ್ನು ಸೂಚಿಸಿದ್ದಾರೆ. ಪರಾಶರನ್ ಅವರ ಮನೆಯಲ್ಲಿ ನಡೆದ ಸಭೆಯಲ್ಲಿ ಏಕಾದಶಿ ಹೊರತುಪಡಿಸಿ, ಇನ್ನೂ ಮೂರು ದಿನಾಂಕಗಳನ್ನು ನಿರ್ಮಾಣ ಪ್ರಾರಂಭಿಸಲು ಪರಿಗಣಿಸಲಾಗಿದೆ. ಮೊದಲ ದಿನಾಂಕ ಮಾರ್ಚ್ 25 ರಂದು (ಚೈತ್ರಾ ಪ್ರತಿಪದ), ಹಿಂದೂ ಹೊಸ ವರ್ಷವು ಈ ದಿನದಿಂದ ಪ್ರಾರಂಭವಾಗುತ್ತದೆ. ಇದಲ್ಲದೆ ಏಪ್ರಿಲ್ 2 (ರಾಮ ನವಮಿ) ಮತ್ತು ಏಪ್ರಿಲ್ 8 (ಹನುಮಾನ್ ಜಯಂತಿ) ಬಗ್ಗೆಯೂ ಚರ್ಚಿಸಲಾಗುತ್ತದೆ. ಆದರೆ ಸಂತರು ಏಕಾದಶಿಯನ್ನು ಏಪ್ರಿಲ್ 4ರಂದು ಆಚರಿಸಲು ಒತ್ತು ನೀಡುತ್ತಿದ್ದಾರೆ.
ವಿಶ್ವ ಹಿಂದೂ ಪರಿಷತ್ ಸಿದ್ಧಪಡಿಸಿದ ದೇವಾಲಯದ ಮಾದರಿ ಮುಂದುವರಿಯುತ್ತದೆ ಎಂಬುದು ಟ್ರಸ್ಟ್ನ ಸದಸ್ಯರಲ್ಲಿ ಬಹುತೇಕ ಸಾಮಾನ್ಯ ಅಭಿಪ್ರಾಯವಾಗಿದೆ. ದೇವಾಲಯದ ಎತ್ತರದ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ. ಮಣ್ಣಿನ ಸಾಮಥ್ರ್ಯ ಪರಿಶೀಲಿಸಬೇಕು ಎಂದು ಟ್ರಸ್ಟ್ನ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.