ಅಯೋಧ್ಯೆ (ಉತ್ತರ ಪ್ರದೇಶ): ಅಯೋಧ್ಯೆಯಲ್ಲಿ (Ayodhya) ರಾಮಮಂದಿರ (Ram Mandir) ಉದ್ಘಾಟನೆ ಕಾಲ ಸನ್ನಿಹಿತವಾಗಿದೆ. ದೇಶದೆಲ್ಲೆಡೆ ಶ್ರೀರಾಮನ ಸ್ಮರಣೆ, ಭಜನೆ ಕೇಳಿಬರುತ್ತಿದೆ. ಹಿಂದೂಗಳ ಮನೆ ಮನದಲ್ಲಿ ಸಂಭ್ರಮ ತುಂಬಿದೆ. ಇದೇ ಜನವರಿ 22 ರಂದು ರಾಮಮಂದಿರ ಉದ್ಘಾಟನೆಯಾಗಲಿದೆ. ಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ (ಬಾಲರಾಮ) ಪ್ರಾಣ ಪ್ರತಿಷ್ಠೆ ಕೂಡ ಜರುಗಲಿದೆ. ಈ ದಿನಕ್ಕಾಗಿ ಕೋಟ್ಯಂತರ ರಾಮಭಕ್ತರು ಕಾತರದಿಂದ ಕಾಯುತ್ತಿದ್ದಾರೆ.
ಜ.22 ರ ಪ್ರಮುಖ ಧಾರ್ಮಿಕ ಆಚರಣೆ ಪ್ರಾಣ ಪ್ರತಿಷ್ಠೆ (Pran Pratistha). ಎಷ್ಟೋ ಜನಕ್ಕೆ ಪ್ರಾಣ ಪ್ರತಿಷ್ಠೆ ಬಗ್ಗೆ ಗೊತ್ತಿರುವುದಿಲ್ಲ. ಪ್ರಾಣ ಪ್ರತಿಷ್ಠೆ ಎಂದರೇನು? ಇದರಲ್ಲಿನ ಆಚರಣೆಗಳು ಹೇಗಿರುತ್ತವೆ? ಎಂಬ ಪ್ರಶ್ನೆಗಳಿಗೆ ವಿವರ ಇಲ್ಲಿದೆ. ಇದನ್ನೂ ಓದಿ: Ram Mandir Inauguration: ತಿರುಪತಿಯಿಂದ ಅಯೋಧ್ಯೆಗೆ 1 ಲಕ್ಷ ಲಡ್ಡು ಪೂರೈಕೆ
ಏನಿದು ಪ್ರಾಣ ಪ್ರತಿಷ್ಠೆ?
ಪ್ರಾಣ ಪ್ರತಿಷ್ಠೆ ಎನ್ನುವುದು ಹಿಂದೂ ಮತ್ತು ಜೈನ ಧರ್ಮದ ಪ್ರಮುಖ ಆಚರಣೆಯಾಗಿದೆ. ವಿಗ್ರಹವು ಕೇವಲ ದೇವರ ರೂಪವನ್ನು ಚಿತ್ರಿಸುವ ಒಂದು ಕಲಾಕೃತಿಯಷ್ಟೆ. ಪ್ರಾಣ ಪ್ರತಿಷ್ಠೆಯ ನಂತರವೇ ವಿಗ್ರಹವು ದೈವಿಕವಾಗುತ್ತದೆ. ಅದಕ್ಕಾಗಿ ವಿಗ್ರಹವನ್ನು ಪವಿತ್ರಗೊಳಿಸಿ ದೇವಾಲಯದ ಗರ್ಭಗುಡಿಯಲ್ಲಿ ಸ್ಥಾಪಿಸಲಾಗುತ್ತದೆ. ಪ್ರಾಣ ಎಂದರೆ ‘ಜೀವಶಕ್ತಿ, ಉಸಿರು, ಚೈತನ್ಯ’ ಮತ್ತು ಪ್ರತಿಷ್ಠೆ ಎಂದರೆ ‘ಸ್ಥಾಪನೆ’. ಪ್ರಾಣ ಪ್ರತಿಷ್ಠೆ ಸಮಾರಂಭದಲ್ಲಿ ಪೂಜಾ ವಿಧಾನ, ವೈದಿಕ ಸ್ತೋತ್ರಗಳ ಪಠಣ ನಡೆಸಲಾಗುವುದು. ಪ್ರಾಣ ಪ್ರತಿಷ್ಠೆ ಎಂದರೆ, ವಿಗ್ರಹಕ್ಕೆ ಜೀವಶಕ್ತಿ ತುಂಬಿ ದೈವಿಕವಾಗಿಸುವ ಆಚರಣೆ ಎನ್ನುತ್ತಾರೆ ಹಿರಿಯರು.
ಪ್ರಾಣ ಪ್ರತಿಷ್ಠೆ ಪ್ರಕ್ರಿಯೆಗೂ ಮೊದಲು ವಿಗ್ರಹದಲ್ಲಿ ದೈವಿಕ ಶಕ್ತಿ ಇರುವುದಿಲ್ಲ. ಪ್ರಾಣ ಪ್ರತಿಷ್ಠೆ ನಂತರವೇ ವಿಗ್ರಹಕ್ಕೆ ವಿಶೇಷ ಶಕ್ತಿ ಬರುತ್ತದೆ. ಬಳಿಕ ವಿಗ್ರಹವು ದೈವಿಕ ಶಕ್ತಿಯಾಗಿ ರೂಪಾಂತರಗೊಳ್ಳುತ್ತದೆ. ಆಗ ದೇವಾಲಯಗಳಲ್ಲಿ ಭಕ್ತರು ವಿಗ್ರಹವನ್ನು ಪೂಜಿಸಬಹುದು ಎಂಬ ನಂಬಿಕೆಯಿದೆ. ಇದನ್ನೂ ಓದಿ: Ayodhya Ram Mandir: ಆನೆ, ಸಿಂಹ, ಹನುಮಾನ್, ಗರುಡ ಮೂರ್ತಿಗಳ ಫೋಟೋ ಬಿಡುಗಡೆ
ಆಚರಣೆ ಹೇಗಿರುತ್ತೆ?
ವಿಗ್ರಹವನ್ನು ದೇವಾಲಯಕ್ಕೆ ಸಾಂಪ್ರದಾಯಿಕವಾಗಿ ತರುವುದರೊಂದಿಗೆ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ಪ್ರಾರಂಭವಾಗುತ್ತದೆ. ಅಂದರೆ ವಿಗ್ರಹವನ್ನು ಹೊರಗಿನಿಂದ ಕೇಂದ್ರ ಸ್ಥಳಕ್ಕೆ ಸ್ಥಳಾಂತರಿಸುವುದು. ಅತಿಥಿಯನ್ನು ಸ್ವಾಗತಿಸುವಂತೆಯೇ ದೇವಾಲಯಕ್ಕೆ ದೇವರ ವಿಗ್ರಹವನ್ನು ತರಲಾಗುವುದು. ನಂತರ ವಿಗ್ರಹಕ್ಕೆ ಅಭಿಷೇಕ ಮಾಡಿಸಲಾಗುತ್ತದೆ. ನಂತರ ಸುಗಂಧ ದ್ರವ್ಯಗಳನ್ನು ಹಚ್ಚಲಾಗುತ್ತದೆ. ನಂತರ ವಿಗ್ರಹದ ಕಣ್ಣಿಗೆ ಬಟ್ಟೆಯನ್ನು ಕಟ್ಟಿ ಸರಿಯಾದ ಸ್ಥಳದಲ್ಲಿ ಪೂರ್ವಾಭಿಮುಖವಾಗಿ ಸ್ಥಾಪಿಸುತ್ತಾರೆ.
ಪುರೋಹಿತರು ಮಂತ್ರಗಳನ್ನು ಪಠಿಸುತ್ತಾರೆ. ಮಂತ್ರಗಳ ಪಠಣೆ, ಆಚರಣೆಯಿಂದ ವಿಗ್ರಹಕ್ಕೆ ದೈವಶಕ್ತಿ ಬರುತ್ತದೆ. ನಂತರ ವಿಗ್ರಹಕ್ಕೆ ಅಭಿಮುಖವಾಗಿ ಕನ್ನಡಿಯನ್ನು ಹಿಡಿಯಲಾಗುತ್ತದೆ. ಬಳಿಕ ವಿಗ್ರಹದ ಕಣ್ಣಿಗೆ ಕಟ್ಟಿದ ಬಟ್ಟೆಯನ್ನು ಬಿಚ್ಚಿಲಾಗುತ್ತದೆ. ಆಗ ಕನ್ನಡಿ ಒಡೆಯುತ್ತದೆ. ಕನ್ನಡಿ ಒಡೆಯುವುದು, ವಿಗ್ರಹ ದೈವಿಕ ಶಕ್ತಿಯಾಗಿ ರೂಪಾಂತರಗೊಂಡಿದೆ ಎಂಬುದಕ್ಕೆ ಸಾಕ್ಷಿ. ಈ ಪ್ರಕ್ರಿಯೆ ಮುಗಿದ ನಂತರ ವಿಗ್ರಹವನ್ನು ಪೂಜಿಸಲು ಯೋಗ್ಯವೆಂದು ಪರಿಗಣಿಸಲಾಗುತ್ತದೆ. ವಿಗ್ರಹಕ್ಕೆ ಜೀವತುಂಬಿ ದೈವಿಕವಾಗಿಸುವ ಆಚರಣೆ ಇದು ಎಂದು ನಂಬಲಾಗಿದೆ. ಇದನ್ನೂ ಓದಿ: Ram Mandir: ರಾಮಮಂದಿರ ಉದ್ಘಾಟನೆಯಂದು ಇಡೀ ದಿನ ಪ್ರಧಾನಿ ಮೋದಿ ಉಪವಾಸ!
ಪೂರ್ವಾಭಿಮುಖವಾಗಿ ವಿಗ್ರಹ ಸ್ಥಾಪಿಸೋದ್ಯಾಕೆ?
ಪೂರ್ವಾಭಿಮುಖ ಎಂದರೆ ಸೂರ್ಯೋದಯದ ಸ್ಥಾನ. ಸೂರ್ಯನ ಉದಯದಿಂದ ಬೆಳಕು ಹೊಮ್ಮುತ್ತದೆ. ಜೀವಗಳಿಗೆ ಚೈತನ್ಯ ಬರುತ್ತದೆ. ಆ ದೃಷ್ಟಿಯಿಂದಲೇ ದೇವಾಲಯಗಳಲ್ಲಿ ವಿಗ್ರಹಗಳನ್ನು ಪೂರ್ವಾಭಿಮುಖವಾಗಿ ಸ್ಥಾಪಿಸಲಾಗುತ್ತದೆ. ಹಿಂದೂ ಧಾರ್ಮಿಕ ಗ್ರಂಥಗಳ ಪ್ರಕಾರ, ಸೂರ್ಯ ಪೂರ್ವ ದಿಕ್ಕಿನಲ್ಲಿ ಉದಯಿಸುವುದರಿಂದ ವಿಗ್ರಹಗಳನ್ನು ಪೂರ್ವಾಭಿಮುಖವಾಗಿ ಸ್ಥಾಪಿಸಬೇಕು. ದೇವರ ವಿಗ್ರಹಕ್ಕೆ ಮೊದಲ ಪೂಜೆ ಬ್ರಾಹ್ಮಿ ಮುಹೂರ್ತದಲ್ಲಿ ನಡೆಯಬೇಕು ಎನ್ನಲಾಗುತ್ತದೆ.