ನವದೆಹಲಿ: ಅಯೋಧ್ಯೆ ರಾಮಜನ್ಮಭೂಮಿ – ಬಾಬ್ರಿ ಮಸೀದಿ ಭೂ ವಿವಾದ ಪರಿಹರಿಸಲು ನೇಮಕಗೊಂಡಿರುವ ಮಧ್ಯಸ್ಥಿಕೆ ತಂಡಕ್ಕೆ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಲು ಜುಲೈ 31ರವರೆಗೆ ಸುಪ್ರೀಂ ಕೋರ್ಟ್ ಗಡುವನ್ನು ವಿಸ್ತರಿಸಿದೆ.
ಸಂಧಾನ ಪ್ರಕ್ರಿಯೆಯಿಂದ ಈ ಸಮಸ್ಯೆ ಪರಿಹರಿಸಲು ಸಾಧ್ಯವಿಲ್ಲ. ಹೀಗಾಗಿ ಪ್ರತಿದಿನ ಅರ್ಜಿಗಳ ವಿಚಾರಣೆ ಪ್ರಾರಂಭಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಇಂದು ಮುಖ್ಯ ನ್ಯಾ. ರಂಜನ್ ಗೊಗೋಯ್ ಅವರಿದ್ದ ಸಂವಿಧಾನ ಪೀಠದಲ್ಲಿ ನಡೆಯಿತು.
ಈ ವೇಳೆ ಪೀಠ, ಮಧ್ಯಸ್ಥಿಕೆ ತಂಡಕ್ಕೆ ಜುಲೈ 31ರವರೆಗೆ ಗಡುವು ವಿಸ್ತರಿಸಿ ಆಗಸ್ಟ್ 2 ರಂದು ವಿಚಾರಣೆ ನಡೆಸಲಾಗುವುದು ಎಂದು ಆದೇಶ ಪ್ರಕಟಿಸಿತು.
ಜುನ್ 11ರಂದು ಸುಪ್ರೀಂ ಕೋರ್ಟ್ ತ್ರಿಸದಸ್ಯರನ್ನೊಳಗೊಂಡ ಮಧ್ಯಸ್ಥಿಕೆ ಸಮಿತಿಗೆ ಸ್ಥಿತಿಗತಿ ಕುರಿತು ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ಅದರಂತೆ ಸಮಿತಿಯೂ ಇಂದು ಇಲ್ಲಿಯವರೆಗೆ ನಡೆಸಿದ ಸಂಧಾನ ಪ್ರಯತ್ನದ ವರದಿಯನ್ನು ಸಲ್ಲಿಸಿತು.
ಸಂಧಾನ ನಡೆಸಲು ಸುಪ್ರೀಂ ಕೋರ್ಟ್ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಫ್ಎಂಐ ಕಲಿಫುಲ್ಲಾ, ಧರ್ಮಗುರು ಹಾಗೂ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ರವಿಶಂಕರ್ ಗುರೂಜಿ ಹಾಗೂ ಹಿರಿಯ ವಕೀಲ ಶ್ರೀರಾಮ್ ಮಂಚು ಅವರನ್ನು ಒಳಗೊಂಡ ತ್ರಿಸದಸ್ಯ ಸಮಿತಿಯನ್ನು ಸಮಿತಿ ರಚಿಸಿತ್ತು. ಈ ಮೂಲಕ ದಶಕಗಳಿಂದ ಬಗೆಹರಿಯದೇ ಉಳಿದಿರುವ ಅಯೋಧ್ಯೆ ಪ್ರಕರಣವನ್ನು ಸಂಧಾನದ ಮೂಲಕ ಅಥವಾ ಇನ್ನಿತರೆ ಮಾರ್ಗಗಳ ಮೂಲಕ ಪರಿಹರಿಸಲು ಮುಂದಾಗಿತ್ತು.