ಕಲಬುರಗಿ: ಚಿಂಚೋಳಿ ಉಪ ಚುನಾವಣೆ ಹಿನ್ನೆಲೆಯಲ್ಲಿ ಎಂಡಿ ಕೊನೆಯ ಸೆಮಿಸ್ಟರ್ ಪರೀಕ್ಷೆಯಲ್ಲಿ ಗೈರಾಗಿದ್ದ ಅವಿನಾಶ್ ಜಾಧವ್ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಅದೃಷ್ಟ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ.
ಚಿಂಚೋಳಿ ಉಪಚುನಾವಣೆ ಹಿನ್ನೆಲೆ ತಂದೆ ಉಮೇಶ್ ಜಾಧವ್ ರಾಜೀನಾಮೆ ನೀಡಿದ ಬಳಿಕ ಖಾಲಿಯಿದ್ದ ಸ್ಥಾನವನ್ನು ಮಗ ಗೆದ್ದಿದ್ದಾರೆ. ಉಮೇಶ್ ಜಾಧವ್ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಕಾಂಗ್ರೆಸ್ನಿಂದ ಬಿಜೆಪಿಗೆ ಸೇರ್ಪಡೆಯಾದರು. ಆ ಬಳಿಕ ಖಾಲಿ ಉಳಿದಿದ್ದ ಶಾಸಕ ಸ್ಥಾನವನ್ನು ತುಂಬಿಸಲು ಕ್ಷೇತ್ರದಲ್ಲಿ ಉಪಚುನಾವಣೆ ನಡೆಸಲಾಗಿತ್ತು. ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದ ಅವಿನಾಶ್ ಜಾಧವ್ ತಮ್ಮ ಎಂಡಿ ಕೊನೆ ಸೆಮಿಸ್ಟರ್ ಪರೀಕ್ಷೆಗೆ ಗೈರಾಗಿದ್ದರು. ಪರಿಕ್ಷೆಗೆ ಗೈರಾಗಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದರು. ಅವರು ಓದನ್ನು ತ್ಯಾಗ ಮಾಡಿ ರಾಜಕೀಯಕ್ಕೆ ಬಂದಿದಕ್ಕೆ ಇಂದು ಚಿಂಚೋಳಿ ಕ್ಷೇತ್ರಕ್ಕೆ ನೂತನ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಪರಿಶಿಷ್ಟ ಜಾತಿಯ ಮೀಸಲು ಕ್ಷೇತ್ರವಾದ ಚಿಂಚೋಳಿಯಲ್ಲಿ ಅವಿನಾಶ್ ಜಾಧವ್ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿ ಸುಭಾಷ್ ರಾಥೋಡ್ ವಿರುದ್ಧ ಭಾರಿ ಮುನ್ನಡೆ ಸಾಧಿಸುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ. ಈ ಮೂಲಕ ಅವಿನಾಶ್ ಅವರು ತಮ್ಮ 27ನೇ ವಯಸ್ಸಿನಲ್ಲಿಯೇ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಅಲ್ಲದೆ ಈ ವಿಧಾನಸಭೆಯಲ್ಲಿ ಅತ್ಯಂತ ಕಿರಿಯ ಶಾಸಕನ ಪಟ್ಟವನ್ನು ಅವಿನಾಶ್ ಜಾಧವ್ ಅಲಂಕರಿಸಿದ್ದಾರೆ.
ಚಿಂಚೋಳಿ ಜೊತೆಗೆ ಕುಂದಗೋಳ ವಿಧಾನಸಭೆ ಉಪಚುನಾವಣೆ ಕೂಡ ನಡೆದಿದೆ. ಕ್ಷೇತ್ರದ ಶಾಸಕರಾಗಿದ್ದ ಸಿ.ಎಸ್ ಶಿವಳ್ಳಿ ಅವರ ನಿಧನದಿಂದ ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಡೆದಿತ್ತು. ಇಲ್ಲಿ ಬಿಜೆಪಿ ಅಭ್ಯರ್ಥಿ ಚಿಕ್ಕಣವರ ವಿರುದ್ಧ ಸ್ಪರ್ಧಿಸಿದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಜಯ ಸಾಧಿಸಿದ್ದಾರೆ.