ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಅವೆನ್ಯೂ ರಸ್ತೆಯಲ್ಲಿ (Avenue Road) ಗುರುವಾರ ಮಹಿಳೆಗೆ ಅಮಾನುಷವಾಗಿ ಥಳಿಸಿದ್ದ ಆರೋಪಿಗಳನ್ನ ಕೆ.ಆರ್.ಮಾರ್ಕೆಟ್ ಪೊಲೀಸರು (KR Market Police) ಬಂಧಿಸಿದ್ದಾರೆ.
ಅಂಗಡಿಯ ಮಾಲೀಕ ಉಮೇದ್ ರಾಮ್ ಮತ್ತು ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ, ಮಹೇಂದ್ರ ಶರ್ಮಾ ಬಂಧಿತ ಆರೋಪಿಗಳು. ಕಳೆದ ಶನಿವಾರ ಮಹಿಳೆಯೊಬ್ಬರು ಉಮೇದ್ ರಾಮ್ ಅಂಗಡಿಯಲ್ಲಿ ಸೀರೆ ಕಳ್ಳತನ ಮಾಡಿದ್ದರು. ಇದನ್ನ ಗಮನದಲ್ಲಿಟ್ಟುಕೊಂಡು, ಉಮೇದ್ ರಾಮ್ ಭಾನುವಾರ ಕಾದು ಕೂತಿದ್ದಾನೆ. ಮಹಿಳೆ ಬರುತ್ತಿದ್ದಂತೆ ಆಕೆಯನ್ನ ಹಿಡಿದು, ಆತ ಮತ್ತು ಸಿಬ್ಬಂದಿ ಹಾಡಹಗಲೇ ಜನನಿಬಿಡ ರಸ್ತೆಯಲ್ಲಿ ಬೂಟ್ ಕಾಲಿನಲ್ಲಿ ಒದ್ದು, ಮನಬಂದಂತೆ ಥಳಿಸಿದ್ದರು. ಮಹಿಳೆ ನೋವಿನಿಂದ ಅಂಗಲಾಚಿದರೂ ಬಿಡದ ಪಾಪಿ ಮಾಲೀಕನ ಕೃತ್ಯ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದೆ. ಮಹಿಳೆ ದೂರು ಕೊಡಲು ಮುಂದಾದರೂ ಕೇರ್ ಮಾಡದ ಸಿಟಿ ಮಾರ್ಕೆಟ್ ಪೊಲೀಸರು, ಕಳ್ಳತನ ಕೇಸ್ ಹಾಕಿ ಮಹಿಳೆಯನ್ನ ಜೈಲಿಗಟ್ಟಿದ್ದಾರೆ. ಇದನ್ನೂ ಓದಿ: ವಾಣಿವಿಲಾಸ ಆಸ್ಪತ್ರೆಯಲ್ಲಿ ಔಷಧಗಳ ಕೊರತೆ – ಸಿಎಂ ಅವ್ರನ್ನೇ ಕೇಳಿ ಅಂತ ಸಿಬ್ಬಂದಿ ಉಡಾಫೆ!
ಸೋಷಿಯಲ್ ಮೀಡಿಯಾದಲ್ಲಿ ವೀಡಿಯೊ ವೈರಲ್ ಆಗುತ್ತಿದ್ದಂತೆ, ಕನ್ನಡಪರ ಹೋರಾಟಗಾರರು ಮಹಿಳೆಯ ಪರವಾಗಿ ನಿಂತಿದ್ದಾರೆ. ಕನ್ನಡ ಪರ ಸಂಘಟನೆಗಳು ಎಂಟ್ರಿ ಕೊಡುತ್ತಿದ್ದಂತೆ ಸಿಟಿ ಮಾರ್ಕೆಟ್ ಪೊಲೀಸರು, ತರಾತುರಿಯಲ್ಲಿ ಮಾಲೀಕನ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಗುರುವಾರ ರಾತ್ರಿ ಆರೋಪಿಗಳನ್ನು ಬಂಧಿಸಿದ ಪೊಲೀಸರು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ. ಇದನ್ನೂ ಓದಿ: ಬಳ್ಳಾರಿ | ಚರಂಡಿಗೆ ಬಿದ್ದು 4 ವರ್ಷದ ಬಾಲಕ ಸಾವು