ಮುಂಬೈ: ಆಟೋರಿಕ್ಷಾ ಚಾಲಕನನ್ನು ಕಳ್ಳನೆಂದು ಶಂಕಿಸಿ ಗುಂಪೊಂದು ಥಳಿಸಿದ್ದು, ಚಾಲಕ ಸಾವಿಗೀಡಾದ ಘಟನೆ ಉತ್ತರ ಮುಂಬೈನ ಮಲಾಡ್ ಪ್ರದೇಶದಲ್ಲಿ ನಡೆದಿದೆ.
ನಡೆದಿದ್ದೇನು?: ದಾಬುನಗರದಲ್ಲಿ 10 ದಿನಗಳ ಹಿಂದೆ ನಿಲ್ಲಿಸಿದ್ದ ತಮ್ಮ ಆಟೋರಿಕ್ಷಾವನ್ನು ಒಮ್ಮೆ ನೋಡಿ ಬರಲು ಚಾಲಕ ಶಾರುಕ್ ಶೇಖ್ ತೆರಳಿದ್ದರು. ಈ ಸಂದರ್ಭದಲ್ಲಿ ಅವರನ್ನು ಕಳ್ಳನೆಂದು ಭಾವಿಸಿ ಸ್ಥಳೀಯ ನಿವಾಸಿಗಳ ಗುಂಪೊಂದು ಥಳಿಸಿತ್ತು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಅಲ್ಲಿಯೇ ಸಮೀಪದ ಸ್ಥಳವೊಂದರಲ್ಲಿ ಎಸೆದು ಹೋಗಲಾಗಿತ್ತು. ಇದನ್ನೂ ಓದಿ: ಎರಡೂ ಡೋಸ್ ಲಸಿಕೆ ಪಡೆದ ಪ್ರಯಾಣಿಕರಿಗೆ ಕೋವಿಡ್ ಪರೀಕ್ಷೆ ಕಡ್ಡಾಯವಲ್ಲ: ಬ್ರಿಟನ್ ಪ್ರಧಾನಿ
ಈ ಬಗ್ಗೆ ದಾರಿಹೋಕರು ನೀಡಿದ್ದ ಮಾಹಿತಿಯ ಮೇರೆಗೆ ಶಾರುಕ್ ಅವರನ್ನು ಠಾಣೆಗೆ ಕರೆತಂದು ದರೋಡೆ ಪ್ರಕರಣ ದಾಖಲಿಸಲಾಗಿತ್ತು. ಎರಡು ದಿನಗಳ ಬಳಿಕ ಜಾಮೀನು ಪಡೆದ ಅವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆಗೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಮೃತ ಚಾಲಕನ ಸಂಬಂಧಿಕರು ಪ್ರತಿಭಟನಾ ಮೆರವಣಿಗೆ ನಡೆಸಿದ್ದು, ಆರೋಪಿಗಳು ರಾಜಕೀಯ ಪಕ್ಷವೊಂದರ ಕಾರ್ಯಕರ್ತರು ಎಂದು ಆರೋಪಿಸಿದ್ದಾರೆ. ಸ್ಥಳೀಯ ರಾಜಕಾರಣಿಗಳ ಒತ್ತಡದಿಂದಾಗಿ ಪ್ರಕರಣದ ತನಿಖೆಗೆ ತಡೆಯೊಡ್ಡಲಾಗಿದೆ ಎಂದೂ ಸಂಬಂಧಿಕರು ದೂರಿದ್ದಾರೆ. ಚಾಲಕನ ಮೃತದೇಹದ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ. ಅವರ ಮೈಮೇಲೆ ಯಾವುದೇ ಗಾಯದ ಗುರುತುಗಳಿರಲಿಲ್ಲ. ತನಿಖೆ ಪ್ರಗತಿಯಲ್ಲಿದೆ ಎಂದು ಸಮತಾ ನಗರ ಠಾಣೆಯ ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ಆನಂದರಾವ್ ಹಾಕೆ ತಿಳಿಸಿದ್ದಾರೆ.