ಬೆಂಗಳೂರು: ಲೋಕಮಾತೆ ಅಹಲ್ಯಾಬಾಯಿ ಹೋಳ್ಕರ್ (Ahalyaabai Holkar) ಅವರು ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ರಾಷ್ಟ್ರದ ಅಖಂಡತೆಯನ್ನು ನಿರ್ಮಿಸುವುದರಲ್ಲಿ ಪಾತ್ರವಹಿಸಿದ ಅಖಂಡ ರಾಷ್ಟ್ರ ತಪಸ್ವಿನಿ ಎಂದು ಲೇಖಕಿ ಮೇಘಾ ಪ್ರಮೋದ್ (Megha Pramod) ಹೇಳಿದ್ದಾರೆ.
ಬಸವನಗುಡಿಯ (Basavanagudi) ಅಬಲಾಶ್ರಮದಲ್ಲಿ ನಡೆದ ಮಂಥನ ಶಂಕರಪುರ ವತಿಯಿಂದ ‘ಅಖಂಡ ರಾಷ್ಟ್ರ ತಪಸ್ವಿನಿ ಅಹಲ್ಯಾಬಾಯಿ ಹೋಳ್ಕರ್’ (Akhanda Rashtra Tapaswini Ahalyaabai Holkar) ಪುಸ್ತಕದ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ವೇಳೆ, ರಾಷ್ಟ್ರದ ಸಾಂಸ್ಕೃತಿಕ ಮತ್ತು ಧಾರ್ಮಿಕ ಪುನರುತ್ಥಾನಕ್ಕಾಗಿ ಮಹತ್ವದ ಕೊಡುಗೆ ನೀಡಿದ ಅಹಲ್ಯಾಬಾಯಿ ಹೋಳ್ಕರ್ ಅವರ ಕುರಿತು ನಮ್ಮ ಪಠ್ಯಪುಸ್ತಕಗಳು ಕಡೆಗಣಿಸಿವೆ. ಆದರೆ ರಾಷ್ಟ್ರದ ಸರ್ವಾಂಗೀಣ ಉನ್ನತಿಗಾಗಿ ಹಲವು ಮಜಲುಗಳಲ್ಲಿ ಕೊಡುಗೆ ನೀಡಿದ ದಕ್ಷ ಆಡಳಿತಗಾರ್ತಿ, ರಾಜನೀತಿತಜ್ಞೆ, ಲೋಕಮಾತೆ, ಪುಣ್ಯಶ್ಲೋಕಿ ಅಹಲ್ಯಾಬಾಯಿ ಹೋಳ್ಕರ್ ಎಂದಿದ್ದಾರೆ.
ಅಹಲ್ಯಾ ಬಾಯಿ ಹೋಳ್ಕರ್ ಅವರ ಆಡಳಿತದ ಅವಧಿಯಲ್ಲಿ ಬ್ರಿಟಿಷರಾದಿಯಾಗಿ, ನಾಡಿನೊಳಗಿನ ಅನೇಕ ಮತಾಂಧರೂ ತಮ್ಮ ರಾಜಕೀಯ ಅಸ್ತಿತ್ವವನ್ನು ಪಡೆಯುವುದಕ್ಕೆ ಪ್ರಯತ್ನಿಸುತ್ತಿದ್ದರು. ಆದರೆ ಚಾಣಾಕ್ಷ ಅಹಲ್ಯಾ ಬಾಯಿ ಹೋಳ್ಕರ್ ಅವರಿಗೆ ಶತ್ರುಬೋಧೆ ಬಹಳ ಚೆನ್ನಾಗಿತ್ತು. ಟಿಪ್ಪುವನ್ನು ನಂಬಿಕೆಗೆ ಅನರ್ಹನಾದ ವ್ಯಕ್ತಿ ಎಂದೂ, ಬ್ರಿಟಿಷರ ಕುತಂತ್ರದ ಬಗ್ಗೆ ಎಚ್ಚರಿಕೆ ವಹಿಸಬೇಕೆಂದೂ ತಿಳಿಸಿದ್ದರು ಎಂದು ಹೇಳಿದ್ದಾರೆ.
ಅಂದಿನ ಕಾಲದಲ್ಲೇ ಮಹಿಳೆಯರ ಉತ್ಕೃಷ್ಟ ಜೀವನಕ್ಕಾಗಿ ಬಾಲ್ಯ ವಿವಾಹ ರದ್ಧತಿ, ಮಹಿಳಾ ಸೇನೆ ಮತ್ತು ಅದರಲ್ಲಿ ವಿಧವೆಯರ ಸಹಭಾಗಿತ್ವ, ಗುಡಿ ಕೈಗಾರಿಕೆಗಳಿಗೆ ಮಹತ್ವ, ಮಾಹೇಶ್ವರಿ ಸೀರೆಗಳ ತಯಾರಿಕೆ ಮುಂತಾದವುಗಳಿಗೆ ಪ್ರೋತ್ಸಾಹ ನೀಡಿದರು ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಷ್ಟ್ರದ ಉದ್ದಗಲಕ್ಕೂ ಅನೇಕ ತೀರ್ಥಕ್ಷೇತ್ರಗಳ ನಿರ್ಮಾಣ, ಪುನರುಜ್ಜೀವನ, ಗಂಗಾಜಲ ವಿತರಣೆ, ಸ್ವಾವಲಂಬಿ ಆರ್ಥಿಕತೆಗೆ ಒತ್ತು ನೀಡಿ ಎಲ್ಲಾ ಸೇವಾಕಾರ್ಯಗಳಿಗೆ ರಾಜ್ಯದ ಬೊಕ್ಕಸದ ಹಣವನ್ನು ಬಳಸದೆ ಸ್ವಂತದ್ದೇ ಹಣ ಬಳಸಿ ಅಹಲ್ಯಾಬಾಯಿ ಹೋಳ್ಕರ್ ಎಲ್ಲಾ ತಲೆಮಾರುಗಳಿಗೂ ಮಾದರಿಯಾಗಿದ್ದಾರೆ ಎಂದು ಹೇಳಿದ್ದಾರೆ.