ಬೆಂಗಳೂರು: ಏಕದಿನ ವಿಶ್ವಕಪ್ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ವಿಶ್ವಕಪ್ ಮುಗಿದ ನಾಲ್ಕೇ ದಿನಗಳಲ್ಲಿ ಭಾರತ ತಂಡವು ಆಸ್ಟ್ರೇಲಿಯಾ (Australia) ವಿರುದ್ಧ 5 ಪಂದ್ಯಗಳ ಟಿ20 ಸರಣಿಗೆ ಸಜ್ಜಾಗಿದೆ. ಇದು ಈ ವರ್ಷದಲ್ಲಿ ಆಸೀಸ್ ವಿರುದ್ಧವೇ ಆಡುತ್ತಿರುವ 4ನೇ ದ್ವಿಪಕ್ಷೀಯ ಸರಣಿಯಾಗಿದೆ. ನ.23 ರಂದು (ಇಂದು) ಮೊದಲ ಟಿ20 ಸರಣಿಯಲ್ಲಿ ಮುಖಾಮುಖಿಯಾಗಲಿದೆ.
ವಿಶಾಖಪಟ್ಟಣದಲ್ಲಿರುವ (Visakhapatnam) ಆಂಧ್ರಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ಮೊದಲ ಪಂದ್ಯ ನಡೆಯಲಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಈವರೆಗೆ 26 ಅಂತಾರಾಷ್ಟ್ರೀಯ T20 ಪಂದ್ಯಗಳು ನಡೆದಿದ್ದು, ಭಾರತ 15 ರಲ್ಲಿ ಮತ್ತು ಆಸ್ಟ್ರೇಲಿಯಾ 10ರಲ್ಲಿ ಗೆಲುವು ಸಾಧಿಸಿದೆ. 1 ಪಂದ್ಯ ಫಲಿತಾಂಶವಿಲ್ಲದೇ ರದ್ದಾಗಿದೆ. ಇದನ್ನೂ ಓದಿ: ಟಿ20-ಐಗೆ ರೋಹಿತ್ ಶರ್ಮಾ ನಿವೃತ್ತಿ? ಬಿಸಿಸಿಐ ಜೊತೆ ಚರ್ಚೆ
ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ (Suryakumar Yadav) ತಂಡದ ನಾಯಕರಾಗಿದ್ದು, ವಿಶ್ವಕಪ್ ಆಡಿರುವ ಭಾರತ ತಂಡದ ಎಲ್ಲ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಆದ್ರೆ ಸೂರ್ಯಕುಮಾರ್ ಯಾದವ್ ಜೊತೆಗೆ ಇಶಾನ್ ಕಿಶನ್ ಮತ್ತು ಕನ್ನಡಿಗ ಪ್ರಸಿದ್ಧ್ ಕೃಷ್ಣಗೆ ಸ್ಥಾನ ಸಿಕ್ಕಿದೆ. ಶ್ರೇಯಸ್ ಅಯ್ಯರ್ (Shreyas Iyer) ಕೊನೆಯ ಎರಡು ಪಂದ್ಯ ಆಡಲಿದ್ದು, ಈ ಅವಧಿಯಲ್ಲಿ ಉಪನಾಯಕನ ಸ್ಥಾನ ತುಂಬಲಿದ್ದಾರೆ. ಮೊದಲ 3 ಪಂದ್ಯಗಳಿಗೆ ಏಷ್ಯನ್ ಗೇಮ್ಸ್ನ ಕ್ರಿಕೆಟ್ ತಂಡದ ನಾಯಕತ್ವ ವಹಿಸಿದ್ದ ಋತುರಾಜ್ ಗಾಯಕ್ವಾಡ್ಗೆ ಉಪನಾಯಕನ ಸ್ಥಾನ ನೀಡಲಾಗಿದೆ.
ಈ ಸರಣಿಗೆ ಭಾರತದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ (VVS Laxman) ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಲಾಗಿದೆ. ಐರ್ಲೆಂಡ್ ಸರಣಿ ಆಡಿದ ಬಹುಪಾಲು ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಸದ್ಯ ಏಕದಿನ ಕ್ರಿಕೆಟ್ನಲ್ಲಿ ಸಂಪೂರ್ಣ ಫ್ಲಾಪ್ ಪ್ರದರ್ಶನ ಮುಂದುವರಿಸಿದ ಸೂರ್ಯಕುಮಾರ್ ಯಾದವ್ ಟಿ20 ಕ್ರಿಕೆಟ್ನಲ್ಲಿ ಯಾವ ರೀತಿ ಅಬ್ಬರಿಸುತ್ತಾರೆ ಎಂಬುದು ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ. ಇದನ್ನೂ ಓದಿ: ಆಸ್ಟ್ರೇಲಿಯಾಗೆ ಬಂದಿಳಿದ ಚಾಂಪಿಯನ್ ಪ್ಯಾಟ್ ಕಮ್ಮಿನ್ಸ್- ಸ್ವಾಗತಿಸಲು ಜನವೇ ಇಲ್ಲ
ಭಾರತ ತಂಡ:
ಸೂರ್ಯಕುಮಾರ್ ಯಾದವ್ (ನಾಯಕ), ಋತುರಾಜ್ ಗಾಯಕ್ವಾಡ್ (ಉಪನಾಯಕ), ಇಶಾನ್ ಕಿಶನ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಿವಂ ದುಬೆ, ರವಿ ಬಿಷ್ಣೋಯ್, ಅರ್ಶ್ದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್, ಮುಖೇಶ್ ಕುಮಾರ್
ಆಸೀಸ್ ತಂಡ:
ಸ್ವೀವ್ ಸ್ಮಿತ್, ಶಾರ್ಟ್, ಆರೋನ್ ಹಾರ್ಡಿ, ಜೋಸ್ ಇಂಗ್ಲಿಸ್, ಮಾರ್ಕಸ್ ಸ್ಟೋಯ್ನಿಸ್, ಡೇವಿಡ್, ಮ್ಯಾಥ್ಯೂ ವೇಡ್ (ನಾಯಕ), ಶಾನ್ ಅಬ್ಬಾಟ್, ಎಲ್ಲೀಸ್, ಬೆಹ್ರೆನ್ ಡಾರ್ಫ್, ತನ್ವೀರ್ ಸಂಘ.
ಯಾವ ದಿನ-ಎಲ್ಲಿ ಪಂದ್ಯ?
ನ.23 – ವಿಶಾಖಪಟ್ಟಣ
ನ.26 – ತಿರುವನಂತಪುರಂ
ನ.28 – ಗುವಾಹಟಿ
ಡಿ.1 – ರಾಯ್ಪುರ
ಡಿ.3 – ಬೆಂಗಳೂರು