ಲಕ್ನೋ: ಶಾಸಕರು, ಸಂಸದರು ಬಂದಾಗ ಅಧಿಕಾರಿಗಳು ಎದ್ದು ನಿಂತು ಕೈ ಮುಗಿಯಬೇಕು ಅಂತ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಹೊಸ ಆದೇಶ ಹೊರಡಿಸಿದೆ.
ಸಂಸದರು ಹಾಗೂ ಶಾಸಕರನ್ನು ಭೇಟಿಯಾಗುವಾಗ ಅಥವಾ ಸ್ವಾಗತಿಸುವಾಗ ಅಧಿಕಾರಿಗಳು ಎದ್ದುನಿಂತು ಕೈಮುಗಿದು ನಮಸ್ಕರಿಸಬೇಕು. ಅವರು ಹೊರಡುವಾಗಲೂ ಮತ್ತೊಮ್ಮೆ ಕೈ ಮುಗಿಯಬೇಕು ಎಂಬ ಆದೇಶ ಹೊರಡಿಸಲಾಗಿದೆ. ಉತ್ತರಪ್ರದೇಶದ ಮುಖ್ಯ ಕಾರ್ಯದರ್ಶಿ ರಾಜೀವ್ ಕುಮಾರ್ ಈ ನಿರ್ದೇಶನವನ್ನು ನೀಡಿದ್ದು, ಯಾರಾದ್ರೂ ಈ ನಿಯಮವನ್ನ ಉಲ್ಲಂಘಿಸಿದರೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆದೇಶದಲ್ಲಿ ಹೇಳಲಾಗಿದೆ.
ಸ್ಥಳೀಯ ಮುಖಂಡರು, ಜಿಲ್ಲಾಧಿಕಾರಿಗಳು, ಪೊಲೀಸರು ಸೇರಿದಂತೆ ಉತ್ತರಪ್ರದೇಶದ ಎಲ್ಲಾ ಅಧಿಕಾರಿಗಳಿಗೆ ಈ ನಿಯಮ ಅನ್ವಯಿಸುತ್ತದೆ ಎಂದು ವರದಿಯಾಗಿದೆ. ಅಧಿಕಾರಿಗಳು ನಮ್ಮ ಮಾತನ್ನು ಆಲಿಸದೆ, ನೀಡಿದ ಆದೇಶಗಳನ್ನು ಕೆಲವೊಮ್ಮೆ ವಜಾ ಮಾಡುತ್ತಾರೆ ಎಂದು ಸಂಸದರು ಮತ್ತು ಶಾಸಕರು ಹೇಳಿರುವ ಹಿನ್ನೆಲೆಯಲ್ಲಿ ಆದಿತ್ಯನಾಥ್ ಸರ್ಕಾರ ಈ ನಿಮಯವನ್ನ ಜಾರಿಗೆ ತಂದಿದೆ.
ಅಲ್ಲದೆ ಸಂಸದರು ಮತ್ತು ಶಾಸಕರು ಹೇಳಿದಂತೆ ಕೆಲಸ ಮಾಡಲು ಸಾಧ್ಯವಾಗದಿದ್ದಾಗ ಅಧಿಕಾರಿಗಳು ನಯವಾಗಿ ತಮ್ಮ ಸಮಸ್ಯೆಗಳ ಬಗ್ಗೆ ಹೇಳಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ. ಸರ್ಕಾರಿ ಅನುದಾನಿತ ಕಾರ್ಯಕ್ರಮಗಳಿಗೆ ಅಧಿಕಾರಿಗಳು ಮುಖ್ಯ ಅತಿಥಿಗಳಾಗಿ ಹೋಗುವುದನ್ನು ಕೂಡ ನಿಷೇಧಿಸಲಾಗಿದೆ.
ಈ ಹೊಸ ಆದೇಶಕ್ಕೆ ವಿರೋಧ ಪಕ್ಷ ಆಕ್ಷೇಪ ವ್ಯಕ್ತಪಡಿಸಿದೆ.